ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗದಿರಲಿ: ಪ್ರಕಾಶ ಹುಕ್ಕೇರಿ

KannadaprabhaNewsNetwork | Published : Nov 26, 2024 12:49 AM

ಸಾರಾಂಶ

ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣ ಎಲ್ಲ ಮಕ್ಕಳ ಹಕ್ಕು, ಎಲ್ಲರಿಗೂ ಶಿಕ್ಷಣ ಸಕಾಲಕ್ಕೆ ದೊರೆಯಬೇಕು

ಕನ್ನಡಪ್ರಭ ವಾರ್ತೆ ಜಮಖಂಡಿ

ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣ ಎಲ್ಲ ಮಕ್ಕಳ ಹಕ್ಕು, ಎಲ್ಲರಿಗೂ ಶಿಕ್ಷಣ ಸಕಾಲಕ್ಕೆ ದೊರೆಯಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಪ್ರಕಾಶ ಹುಕ್ಕೇರಿ ಅಭಿಪ್ರಾಯಪಟ್ಟರು.

ನಗರದ ಡಿಬಿಎ (ಡಿಸ್ಟ್ರಿಕ್ಟ್‌ ಬಂಜಾರಾ ಎಜ್ಯುಕೇಷನ್ ಸೊಸೈಟಿ) ಅಡಿಯಲ್ಲಿ ನಡೆಯುತ್ತಿರುವ 8 ಪ್ರೌಢಶಾಲೆಗಳ ಅಂತರ ಪ್ರೌಢಶಾಲಾ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಯಾರಿಂದಲೂ ಕದಿಯಲಾಗದ ಸಂಪತ್ತು. ಅದನ್ನು ಗಳಿಸಿಕೊಂಡರೆ ಮುಂದಿನ ಜೀವನ ಚನ್ನಾಗಿ ನಡೆಯುತ್ತದೆ. ಮಕ್ಕಳು ಶ್ರದ್ಧೆಯಿಂದ ವಿದ್ಯೆ ಕಲಿಯಬೇಕು ಎಂದು ಕಿವಿಮಾತು ಹೇಳಿದರು.

ಮನೋಹರ ಐನಾಪೂರ ಅವರು ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಅವರು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗೆ ಎಲ್ಲರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು. ಡಿಬಿಎದಲ್ಲಿ ಓದುತ್ತಿರುವ ಮಕ್ಕಳು ಮುಂದಿನದಿನಗಳಲ್ಲಿ ಉನ್ನತ ಹುದ್ದೆ ಅಲಂಕರಿಸಲಿದ್ದಾರೆ ಎಂದರು.

ಶಾಲೆಯ ಆಡಳಿತಧಿಕಾರಿ ವಸುಂಧರಾ ಐನಾಪೂರ ಮಾತನಾಡಿ, ಕ್ರೀಡೆಗಳಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಕ್ರೀಡಾ ಮನೋಭಾವದಿಂದ ಆಟೋಟಗಳಲ್ಲಿ ಭಾಗವಹಿಸಬೇಕು. ಇಂದಿನ ವಿದ್ಯಾರ್ಥಿಗಳು ದೇಶದ ಮುಂದಿನ ನಾಗರಿಕರು, ಎಲ್ಲರು ಸಮಾಜ ಮುಖಿಯಾಗಿ ಉತ್ತಮ ಪ್ರಜೆಗಳಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ಮಾಜಿ ನಗರಸಭೆ ಸದಸ್ಯ ಸಿದ್ದು ಮೀಸಿ, ನಗರಸಭೆ ಸದಸ್ಯ ದಾನೇಶ ಘಾಟಗೆ, ದಂತ ವೈದ್ಯ ಡಾ.ಮಂಜುನಾಥ ಮಲಘಾಣ, ಚಲನಚಿತ್ರ ನಟ ಡಿಬಿಇ ಸೊಸೈಟಿ ಸದಸ್ಯ ರಾಹುಲ್ ಐನಾಪೂರ, ಕಾಂಗ್ರೆಸ್ ಮುಖಂಡ ವರ್ಧಮಾನ ನ್ಯಾಮಗೌಡ, ತಾಲೂಕು ದೈಹಿಕ ಪರಿವೀಕ್ಷಕಿ ಪಂಚಾಕ್ಷರಿ ನಂದೇಶ, ಎಕ್ಸಿಸ್ ಬ್ಯಾಂಕ್ ಮ್ಯಾನೆಜರ್ ಬಸನಗೌಡ ಪಾಟೀಲ, ಪದ್ಮಾ ಮೆಡಿಕಲ್ ಸ್ಟೋರ್‌ ಮಾಲೀಕ ನೇಮಿನಾಥ ನ್ಯಾಮಗೌಡ, ಮುತ್ತಣ್ಣ ಹಿಪ್ಪರಗಿ, ಎಮ್.ಬಿ.ಬಿರಾದಾರ, ಶಾಲೆಯ ಮುಖ್ಯೋಪಾಧ್ಯಾಯ ಬಿ.ಎನ್.ಕುಂಬಾರ, ಹಾಗೂ ಶಾಲೆಯ ಸಿಬ್ಬಂದಿ ಇದ್ದರು. ಜಿ.ಆರ್.ಕಾಂಬಳೆ, ಎ.ಜಿ.ರಂಜಣಗಿ ಹಾಗೂ ಎಮ್.ಎಸ್. ಪಟ್ಟಣಶೆಟ್ಟಿ ನಿರೂಪಿಸಿ, ಪ್ರಭು ಹ್ಯಾಳದ ವಂದಿಸಿದರು.

Share this article