ಕನಕಪುರ: ಸಂಸ್ಥೆಗೆ ಕೆಟ್ಟ ಹೆಸರು ತರುವ ಉದ್ದೇಶಪೂರ್ವಕವಾಗಿ ಪ್ರವಾಸ ಘಟನೆಯಲ್ಲಿ ದುರ್ಬಳಸಿಕೊಂಡಿರುವ ಕೆಲ ಉಪನ್ಯಾಸಕರ ವಿರುದ್ಧ ಕ್ರಮ ಕೈಗೊಂಡು ಕರ್ತವ್ಯದಿಂದ ಅಮಾನತು ಮಾಡಲಾಗಿದೆ ಎಂದು ರೂರಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಎಚ್.ಕೆ. ಶ್ರೀಕಂಠು ತಿಳಿಸಿದರು.
ಸಾರ್ವಜನಿಕ ವಲಯದಲ್ಲಿ ಸಂಸ್ಥೆಗೆ ಕೆಟ್ಟ ಹೆಸರು ತರಬೇಕೆಂಬ ಉದ್ದೇಶದಿಂದ ನಮ್ಮ ಸಂಸ್ಥೆಯಲ್ಲೇ ಕೆಲಸ ನಿರ್ವಹಿಸುತ್ತಿದ್ದ ಅರುಣ್, ಮಂಜು ಹಾಗೂ ಇನ್ನಿತರು ಸೇರಿ ಮೊದಲೇ ಯೋಜನೆ ರೂಪಿಸಿ ಪ್ರವಾಸದ ವೇಳೆ ವಿದ್ಯಾರ್ಥಿಗಳು ಮನರಂಜನೆಗಾಗಿ ನೃತ್ಯ ಮಾಡುತ್ತಿದ್ದನ್ನು ದುರುದ್ದೇಶದಿಂದ ಸಂಸ್ಥೆಯ ಆಡಳಿತ ಮಂಡಳಿ ಗಮನಕ್ಕೆ ತರದೆ ಬೇನಾಮಿ ಹೆಸರಿನಲ್ಲಿ ಮಕ್ಕಳ ಆಯೋಗಕ್ಕೆ ದೂರು ಕೊಟ್ಟಿದ್ದಾರೆ. ಪ್ರಕರಣದ ಮೂಲ ಆರೋಪಿಗಳ ವಿರುದ್ಧ ಈಗಾಗಲೇ ಹಲವು ದೂರುಗಳಿದ್ದರೂ, ಮಾನವೀಯತೆಯಿಂದ ಅವರನ್ನು ಸಾತನೂರು ಶಿಕ್ಷಣ ಕೇಂದ್ರಕ್ಕೆ ವರ್ಗಾವಣೆ ಮಾಡಿದ್ದೆವು. ಆದರೆ ಅಲ್ಲಿಯೂ ಕೆಲಸ ಮಾಡುವುದು ಬಿಟ್ಟು, ಸಹೋದ್ಯೋಗಿಗಳ ಜೊತೆ ಅನುಚಿತವಾಗಿ ನಡೆದುಕೊಂಡಿದ್ದು ಅವರನ್ನು ಕರ್ತವ್ಯದಿಂದ ವಜಾ ಮಾಡಲಾಗಿದೆ ಎಂದರು.
ಘಟನೆಯ ಬಗ್ಗೆ ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿನಿಯರಿಂದ ಪೂರ್ಣ ಮಾಹಿತಿ ಸಂಗ್ರಹಿಸಿದ್ದೇವೆ. ಸಾಮಾಜಿಕ ಜಾಲ ಹಾಗೂ ಮಾಧ್ಯಮಗಳಲ್ಲಿ ಬಂದಂತಹ ಸುದ್ದಿಗಳಲ್ಲಿ ತಪ್ಪು ಮಾಹಿತಿ ಇದ್ದು ನಮ್ಮ ಜೊತೆ ಯಾವ ಶಿಕ್ಷಕರಾಗಲಿ, ಸಹಪಾಠಿಗಳಾಗಲಿ ಅಸಭ್ಯವಾಗಿ ವರ್ತಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಆಡಳಿತ ಮಂಡಳಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈಗ ಆಗಿರುವ ಘಟನೆಗೆ ಸಂಸ್ಥೆಯ ವಿದ್ಯಾರ್ಥಿಗಳು, ಪೋಷಕರು ಹಾಗೂ ತಾಲೂಕಿನ ಸಾರ್ವಜನಿಕರಲ್ಲಿ ಕ್ಷಮೆ ಕೋರಿ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸುತ್ತೇವೆ ಎಂದು ಸ್ಪಷ್ಟನೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷ ಕೆ.ಬಿ.ನಾಗರಾಜು, ಕಾರ್ಯದರ್ಶಿ ಪುಟ್ಟಸ್ವಾಮಿ, ಖಜಾಂಚಿ ಮಂಜುನಾಥ್, ಪ್ರಾಂಶುಪಾಲರಾದ ರುದ್ರೇಶ್, ದೇವರಾಜು, ಬಾಲಕೃಷ್ಣ, ಉಪನ್ಯಾಸಕರಾದ ಪ್ರಸಾದ್, ಮಧು, ಮೋಹನ್, ಕೆಂಪೇಗೌಡ ಸೇರಿದಂತೆ ಉಪನ್ಯಾಸಕಿಯರು ಉಪಸ್ಥಿತರಿದ್ದರು.
ಕೆ ಕೆ ಪಿ ಸುದ್ದಿ 02:ಕನಕಪುರದ ರೂರಲ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಎಚ್.ಕೆ.ಶ್ರೀಕಂಠು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.