ಹವ್ಯಕರು ಎಲ್ಲಿದ್ದರೂ ಸಂಸ್ಕಾರ, ಆಚಾರ, ವಿಚಾರ ಮರೆಯಬಾರದು: ಕೃಷ್ಣಾನಂದ ಭಟ್ಟ

KannadaprabhaNewsNetwork |  
Published : Nov 20, 2025, 01:15 AM IST
ಪೊಟೋ ಪೈಲ್ : 18ಬಿಕೆಲ್1 | Kannada Prabha

ಸಾರಾಂಶ

ಶ್ರೀರಾಮಚಂದ್ರಾಪುರ ಮಠದ ಭಟ್ಕಳ ಹವ್ಯಕ ವಲಯ ಪ್ರಥಮ ವಲಯೋತ್ಸವ ಕಾರ್ಯಕ್ರಮ ಬಸ್ತಿಮಕ್ಕಿಯಲ್ಲಿರುವ ಆಚಾರ್ಯ ಭವನದಲ್ಲಿ ಗುರುವಂದನೆ, ಶಂಖನಾದದಿಂದ ಸಭಾ ಕಾರ್ಯಕ್ರಮ ಸಂಸ್ಕಾರ-ಸಂವಾದ ಆರಂಭವಾಯಿತು.

ಬಸ್ತಿಮಮಕ್ಕಿಯಲ್ಲಿ ಭಟ್ಕಳ ಹವ್ಯಕ ವಲಯ ಪ್ರಥಮ ವಲಯೋತ್ಸವಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಭಟ್ಕಳ

ಶ್ರೀರಾಮಚಂದ್ರಾಪುರ ಮಠದ ಭಟ್ಕಳ ಹವ್ಯಕ ವಲಯ ಪ್ರಥಮ ವಲಯೋತ್ಸವ ಕಾರ್ಯಕ್ರಮ ಬಸ್ತಿಮಕ್ಕಿಯಲ್ಲಿರುವ ಆಚಾರ್ಯ ಭವನದಲ್ಲಿ ಗುರುವಂದನೆ, ಶಂಖನಾದದಿಂದ ಸಭಾ ಕಾರ್ಯಕ್ರಮ ಸಂಸ್ಕಾರ-ಸಂವಾದ ಆರಂಭವಾಯಿತು.

ವೇ.ಮೂ. ಕೃಷ್ಣಾನಂದ ಭಟ್ಟ ಬಲ್ಸೆಯವರು ಮಾತನಾಡಿ, ಹಿಂದೆ ನಮ್ಮ ಪೂರ್ವಜರು ಶೋಡಷ ಸಂಸ್ಕಾರವನ್ನು ಶಾಸ್ತ್ರೋಕ್ತವಾಗಿ ಮಾಡಿ ಬರುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ನಾವು ಶೋಡಷ ಸಂಸ್ಕಾರವನ್ನು ಮಾಡುತ್ತೇವಾದರೂ ಕೂಡಾ ಅದಕ್ಕೆ ಆಧುನಿಕ ಸ್ಪರ್ಷ ಕೊಟ್ಟಿದ್ದೇವೆ. ನಾವು ಎಲ್ಲೇ ಇದ್ದರೂ ಕೂಡಾ ನಮ್ಮ ಸಂಸ್ಕಾರ, ಆಚಾರ, ವಿಚಾರವನ್ನು ಮರೆಯಬಾರದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹವ್ಯಕ ವಲಯದ ಅಧ್ಯಕ್ಷ ಎಂ.ವಿ. ಹೆಗಡೆ ವಹಿಸಿದ್ದರು.

ಉಪನ್ಯಾಸಕರಾಗಿ ಆಗಮಿಸಿದ್ದ ಜನತಾ ವಿದ್ಯಾಲಯ ಶಿರಾಲಿಯ ಪ್ರಾಂಶುಪಾಲ ಗೋಪಾಲಕೃಷ್ಣ ಎಸ್. ಹೆಗಡೆ ಮಾತನಾಡಿ, ಸಂಸ್ಕಾರವನ್ನು ಶಾಸ್ತ್ರಸಮ್ಮತವಾಗಿ ಆಚರಿಸತಕ್ಕದ್ದೇ ಆದರೂ ಸಹ ನಾವು ಇಂದು ನಮ್ಮ ಸಂಸ್ಕಾರವನ್ನೇ ಯುವ ಪೀಳಿಗೆಗೆ ಕಲಿಸುತ್ತಿಲ್ಲ. ಹಿಂದೆ ಇದ್ದ ಹವ್ಯಕರ ಆದರಾತಿಥ್ಯ ಇಂದು ಕಾಣೆಯಾಗುತ್ತಿದೆ. ಮನೆಗೆ ಬಂದ ಅತಿಥಿಗಳನ್ನು ಸ್ವಾಗತಿಸುವ ಪದ್ಧತಿಯೇ ಇಲ್ಲವಾಗಿದೆ. ಇದರ ಬಗ್ಗೆ ಪ್ರತಿಯೊಬ್ಬರೂ ಯೋಚಿಸಬೇಕಾಗ ಕಾಲ ಬಂದಿದೆ ಎಂದರು.

ಉಪನ್ಯಾಸಕ ವಿದ್ವಾನ್ ನೀಲಕಂಠ ಯಾಜಿ ಮಾತನಾಡಿ, ಶೋಡಷ ಸಂಸ್ಕಾರಗಳನ್ನು ವಿವರವಾಗಿ ಹೇಗೆ ಮತ್ತು ಯಾಕಾಗಿ ಆಚರಿಸಬೇಕು ಎಂದು ವಿವರಿಸಿದರಲ್ಲದೇ, ಹಿಂದೆ ವೇದ ಕಾಲದಲ್ಲಿಯೂ ಕೂಡಾ ಇದು ಆಚರಿತವೇ ಆಗಿದೆ. ಆದರೆ ಇಂದಿನ ವಿಜ್ಞಾನದ ಪ್ರಭಾವದಿಂದ ಕೆಲವೊಂದು ಸಂಸ್ಕಾರಗಳನ್ನು ನಾವು ಹಿಂದಿನಂತೆ ಅಲ್ಲದಿದ್ದರೂ ಈಗಿನ ಕಾಲ ಮಾನಕ್ಕೆ ತಕ್ಕಂತೆ ಆಚರಿಸುತ್ತಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ತೋಟಗಾರಿಕಾ ಅಧಿಕಾರಿ ಸಂಧ್ಯಾ ಭಟ್ಟ ವೈಯಕ್ತಿಕ ನೆಲೆಯಲ್ಲಿ ವಲಯಕ್ಕೆ ನೀಡಿದ್ದ ೫೦ ಶ್ರೀರಾಮ ಬಳ್ಳಿಗಳನ್ನು ಶ್ರೀ ಮಠದ ಶಿಷ್ಯ ರೈತರಿಗೆ ವಿತರಿಸಲಾಯಿತು.

ಇದಕ್ಕೂ ಪೂರ್ವದಲ್ಲಿ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಗುರುಪಾದುಕಾ ಸ್ತೋತ್ರ ಪಠಣ ನಡೆಯಿತು. ವಲಯೋತ್ಸವದ ಅತಿಥ್ಯವನ್ನು ಕೃಷ್ಣಾನಂದ ಭಟ್ಟ ಬಲ್ಸೆ ದಂಪತಿ ವಹಿಸಿದ್ದರು. ಸಭೆಯಲ್ಲಿ ಹೊನ್ನಾವರ ಮಂಡಲದ ಶಂಭು ಹೆಗಡೆ ಮತ್ತು ಕೃಷ್ಣ ಜೋಶಿ, ಭಟ್ಕಳ ವಲಯ ಉಪಾಧ್ಯಕ್ಷ ರಾಧಾಕೃಷ್ಣ ಭಟ್ಟ ಉಪಸ್ಥಿತರಿದ್ದರು. ವಲಯದ ಕಾರ್ಯದರ್ಶಿ ಎಸ್.ಎಂ. ಭಟ್ಟ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ರಾಮ ತಾರಕ ಜಪದೊಂದಿಗೆ ಸಭೆ ಮುಕ್ತಾಯವಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆ್ಯಸಿಡ್‌ ದಾಳಿ ಸಂತ್ರಸ್ತರಿಗೆ ಮಾಸಿಕ 50 ಸಾವಿರ ಪಿಂಚಣಿ : ಪರಂ ಭರವಸೆ
5 ಪಾಲಿಕೆಗೆ ಜಿಎಸ್‌ಟಿಯಲ್ಲಿ ಪಾಲು ಕೊಡಲು ಆಯೋಗ ಶಿಫಾರಸು