ಬಸ್ತಿಮಮಕ್ಕಿಯಲ್ಲಿ ಭಟ್ಕಳ ಹವ್ಯಕ ವಲಯ ಪ್ರಥಮ ವಲಯೋತ್ಸವಕ್ಕೆ ಚಾಲನೆ
ಶ್ರೀರಾಮಚಂದ್ರಾಪುರ ಮಠದ ಭಟ್ಕಳ ಹವ್ಯಕ ವಲಯ ಪ್ರಥಮ ವಲಯೋತ್ಸವ ಕಾರ್ಯಕ್ರಮ ಬಸ್ತಿಮಕ್ಕಿಯಲ್ಲಿರುವ ಆಚಾರ್ಯ ಭವನದಲ್ಲಿ ಗುರುವಂದನೆ, ಶಂಖನಾದದಿಂದ ಸಭಾ ಕಾರ್ಯಕ್ರಮ ಸಂಸ್ಕಾರ-ಸಂವಾದ ಆರಂಭವಾಯಿತು.
ವೇ.ಮೂ. ಕೃಷ್ಣಾನಂದ ಭಟ್ಟ ಬಲ್ಸೆಯವರು ಮಾತನಾಡಿ, ಹಿಂದೆ ನಮ್ಮ ಪೂರ್ವಜರು ಶೋಡಷ ಸಂಸ್ಕಾರವನ್ನು ಶಾಸ್ತ್ರೋಕ್ತವಾಗಿ ಮಾಡಿ ಬರುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ನಾವು ಶೋಡಷ ಸಂಸ್ಕಾರವನ್ನು ಮಾಡುತ್ತೇವಾದರೂ ಕೂಡಾ ಅದಕ್ಕೆ ಆಧುನಿಕ ಸ್ಪರ್ಷ ಕೊಟ್ಟಿದ್ದೇವೆ. ನಾವು ಎಲ್ಲೇ ಇದ್ದರೂ ಕೂಡಾ ನಮ್ಮ ಸಂಸ್ಕಾರ, ಆಚಾರ, ವಿಚಾರವನ್ನು ಮರೆಯಬಾರದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹವ್ಯಕ ವಲಯದ ಅಧ್ಯಕ್ಷ ಎಂ.ವಿ. ಹೆಗಡೆ ವಹಿಸಿದ್ದರು.ಉಪನ್ಯಾಸಕರಾಗಿ ಆಗಮಿಸಿದ್ದ ಜನತಾ ವಿದ್ಯಾಲಯ ಶಿರಾಲಿಯ ಪ್ರಾಂಶುಪಾಲ ಗೋಪಾಲಕೃಷ್ಣ ಎಸ್. ಹೆಗಡೆ ಮಾತನಾಡಿ, ಸಂಸ್ಕಾರವನ್ನು ಶಾಸ್ತ್ರಸಮ್ಮತವಾಗಿ ಆಚರಿಸತಕ್ಕದ್ದೇ ಆದರೂ ಸಹ ನಾವು ಇಂದು ನಮ್ಮ ಸಂಸ್ಕಾರವನ್ನೇ ಯುವ ಪೀಳಿಗೆಗೆ ಕಲಿಸುತ್ತಿಲ್ಲ. ಹಿಂದೆ ಇದ್ದ ಹವ್ಯಕರ ಆದರಾತಿಥ್ಯ ಇಂದು ಕಾಣೆಯಾಗುತ್ತಿದೆ. ಮನೆಗೆ ಬಂದ ಅತಿಥಿಗಳನ್ನು ಸ್ವಾಗತಿಸುವ ಪದ್ಧತಿಯೇ ಇಲ್ಲವಾಗಿದೆ. ಇದರ ಬಗ್ಗೆ ಪ್ರತಿಯೊಬ್ಬರೂ ಯೋಚಿಸಬೇಕಾಗ ಕಾಲ ಬಂದಿದೆ ಎಂದರು.
ಇದಕ್ಕೂ ಪೂರ್ವದಲ್ಲಿ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಗುರುಪಾದುಕಾ ಸ್ತೋತ್ರ ಪಠಣ ನಡೆಯಿತು. ವಲಯೋತ್ಸವದ ಅತಿಥ್ಯವನ್ನು ಕೃಷ್ಣಾನಂದ ಭಟ್ಟ ಬಲ್ಸೆ ದಂಪತಿ ವಹಿಸಿದ್ದರು. ಸಭೆಯಲ್ಲಿ ಹೊನ್ನಾವರ ಮಂಡಲದ ಶಂಭು ಹೆಗಡೆ ಮತ್ತು ಕೃಷ್ಣ ಜೋಶಿ, ಭಟ್ಕಳ ವಲಯ ಉಪಾಧ್ಯಕ್ಷ ರಾಧಾಕೃಷ್ಣ ಭಟ್ಟ ಉಪಸ್ಥಿತರಿದ್ದರು. ವಲಯದ ಕಾರ್ಯದರ್ಶಿ ಎಸ್.ಎಂ. ಭಟ್ಟ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ರಾಮ ತಾರಕ ಜಪದೊಂದಿಗೆ ಸಭೆ ಮುಕ್ತಾಯವಾಯಿತು.