ಗದಗ: ಇಂದು ಮಧುಮೇಹ ಬಹಳಷ್ಟು ಜನರನ್ನು ಆವರಿಸುತ್ತಿದೆ. ಒತ್ತಡದ ಬದುಕು, ಜೀವನ ಶೈಲಿಯಲ್ಲಾಗಿರುವ ಬದಲಾವಣೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಜನರನ್ನು ಮಧುಮೇಹ ಆವರಿಸುತ್ತಿದೆ. ಈ ಬಗ್ಗೆ ಆತಂಕಕ್ಕಿಂತ ಜಾಗೃತಿಯ ಅವಶ್ಯಕತೆ ಇದೆ ಎಂದು ಮಧುಮೇಹ ತಜ್ಞ ಡಾ. ನಿಜಾಮುದ್ದೀನ್ ಅತ್ತಾರ ತಿಳಿಸಿದರು.
ಬಹಳಷ್ಟು ಜನರಲ್ಲಿ ಮಧುಮೇಹದ ಬಗ್ಗೆ ಭಯ ಮತ್ತು ಆತಂಕವಿದೆ. ಈ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದು ನಿಯಮಿತ ಹಾಗೂ ಸೂಕ್ತ ಆಹಾರದ ಜೊತೆಗೆ ಜೀವನಶೈಲಿಯಲ್ಲಿ ಬದಲಾವಣೆಯಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಾಧ್ಯ ಎಂದರು.
ವಿಜ್ಞಾನ ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚಿನ ಜ್ಞಾನ ಸಂಪಾದಿಸಿಕೊಂಡು ನಿಮ್ಮ ಕುಟುಂಬ, ನಿಮ್ಮ ಓಣಿ ಅಥವಾ ಊರಿನಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿಗಳು ಪರಿಶ್ರಮದ ಜೊತೆಗೆ ಸ್ಪಷ್ಟ ಗುರಿ, ಜೀವನದ ಬಗ್ಗೆ ನಿಖರತೆ ಹೊಂದಿ ಯಶಸ್ಸಿನ ಹಾದಿಯಲ್ಲಿ ಸಾಗಬೇಕು ಎಂದರು.ಎಸ್. ರಾಜೇಂದ್ರ ಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣವೇ ಮುಂದಿನ ದಾರಿಗೆ ಬೆಳಕಾಗಿದೆ. ದೇಶದ ಸಾಮಾಜಿಕ, ಆರ್ಥಿಕ ಸ್ಥಿತಿ ತಿಳಿಯಲು ಅಲ್ಲಿನ ಶೈಕ್ಷಣಿಕ ಕೇಂದ್ರದಿಂದ ತಿಳಿಯಲು ಸಾಧ್ಯವಾಗಿದೆ. ಇಂದು ಶೈಕ್ಷಣಿಕವಾಗಿ ಬಹಳಷ್ಟು ಜಾಗೃತಿ ಸಮಾಜದಲ್ಲಿ ಮೂಡಿದೆ. ನಾನು ಎಂದರೆ ದೇಶ ಎನ್ನುವ ಭಾವನೆ ಪ್ರತಿಯೊಬ್ಬರಲ್ಲಿ ಮೂಡಬೇಕು. ಸ್ಪರ್ಧಾತ್ಮಕ ಯುಗದಲ್ಲಿ ನಾವು ವಾತಾವರಣಕ್ಕೆ ತಕ್ಕಂತೆ ಕೌಶಲ್ಯಗಳನ್ನು ಕಲೆಯಬೇಕು. ದೇಶದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪ್ರಗತಿಯಲ್ಲಿ ನಾವೆಲ್ಲರೂ ಕೊಡುಗೆಯನ್ನು ಕೊಡುವಂತಾಗಬೇಕು ಎಂದು ತಿಳಿಸಿದರು.
ಈ ವೇಳೆ ಮಧುಮೇಹದ ಕುರಿತು ವೈದ್ಯರೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಿದರು. ವಿದ್ಯಾರ್ಥಿಗಳಾದ ಸಾಮಿಯಾ ಬೆಳಗಾಮ್, ಪೂಜಾ ಗಂಗಾವತಿ, ಬಸಮ್ಮ ಭಜಂತ್ರಿ, ಸಮರ್ಥ ಸೂಡಿ, ವಿದ್ಯಾ ರಾಮನಗೌಡ್ರ ಮುಂತಾದ ವಿದ್ಯಾರ್ಥಿಗಳು ಮಧುಮೇಹದ ಕುರಿತು ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಶ್ರೀಕಾಂತಗೌಡ ಪಾಟೀಲ, ಕಾರ್ಯದರ್ಶಿ ಪವನಕುಮಾರ ಶೇಠ್, ಕುಮಾರ ರಾಠೋಡ, ಪ್ರಾ. ಶರತ್ ಕುಮಾರ ಸೇರಿದಂತೆ ಇತರರು ಇದ್ದರು. ಪ್ರಾಧ್ಯಾಪಕ ವಸೀಂರಾಜ್ ದೊಡ್ಡಮನಿ ನಿರೂಪಿಸಿದರು.