ಕನ್ನಡಪ್ರಭ ವಾರ್ತೆ ಹಳಿಯಾಳ
ಶುಕ್ರವಾರ ತಾಲೂಕಾಡಳಿತ ಮತ್ತು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ ಗ್ರಾಮಸ್ಥರು ಗಣಪತಿ (ಅಜೋಬಾ) ಸಹದೇವ್ ಕರಂಜೇಕರ ಕುಟುಂಬದವರು ಕಾರವಾರಕ್ಕೆ ತೆರಳಿ ಜಿಲ್ಲಾಧಿಕಾರಿ ಮತ್ತು ಎಸ್ಪಿಗೆ ಗ್ರಾಮದ ವಿರುದ್ಧ ಸಲ್ಲಿಸಿದ ಆರೋಪಗಳಿಗೆ ಈ ಮೇಲಿನಂತೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕರಂಜೇಕರ ಕುಟುಂಬವನ್ನು ಗ್ರಾಮದಿಂದ ಬಹಿಷ್ಕಾರ ಮಾಡಲಾಗಿದೆ. ತಮ್ಮೊಂದಿಗೆ ವ್ಯವಹರಿಸುವವರಿಗೆ ಬೆದರಿಕೆ ಹಾಕಲಾಗುತ್ತಿದೆ ಹಾಗೂ ರಾಜಕೀಯ ಪ್ರೇರಿತವಾಗಿ ತಮ್ಮ ವಿರುದ್ಧ ಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿರುವ ವಿಷಯವು ಗಮನಕ್ಕೆ ಬಂದಿದೆ. ಈ ಸಂಬಂಧ ಕೆಸರೊಳ್ಳಿ ಗ್ರಾಮಸ್ಥರಾದ ನಾವು ಸ್ಪಷ್ಟಪಡಿಸುವುದೆನಂದರೇ, ನಮ್ಮ ಗ್ರಾಮದಲ್ಲಿ ಯಾವುದೇ ವ್ಯಕ್ತಿ ಅಥವಾ ಕುಟುಂಬದ ವಿರುದ್ಧ ಗ್ರಾಮಸ್ಥರು ಸಾಮೂಹಿಕವಾಗಿ ಬಹಿಷ್ಕಾರ ಹೇರಿರುವುದಿಲ್ಲ. ಈ ಕುರಿತು ಯಾವುದೇ ಗ್ರಾಮಸಭೆ ಅಥವಾ ಸಾರ್ವಜನಿಕ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿಲ್ಲ. ಗ್ರಾಮಸ್ಥರ ಪರವಾಗಿ ಯಾರಿಗೂ ಅಂತಹ ಅಧಿಕಾರ ನೀಡಲಾಗಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಮನವಿಯಲ್ಲಿ ಉಲ್ಲೇಖಿಸಿದ ರಾಜಕೀಯ ಪ್ರೇರಣೆ ಹಾಗೂ ಪ್ರಭಾವಿ ರಾಜಕಾರಣಿಯ ಕೈವಾಡದ ಆರೋಪಗಳು ನಮ್ಮ ತಿಳುವಳಿಕೆಯ ಮಟ್ಟಿಗೆ ಸತ್ಯಕ್ಕೆ ದೂರವಾಗಿದ್ದು, ಗ್ರಾಮಸ್ಥರನ್ನು ಅನಗತ್ಯವಾಗಿ ಅಪಖ್ಯಾತಿಗೊಳಿಸುವಂತಿವೆ. ನಮ್ಮ ಗ್ರಾಮದಲ್ಲಿ ಕಾನೂನನ್ನು ಗೌರವಿಸುವ ಮತ್ತು ಶಾಂತಿ, ಸೌಹಾರ್ದತೆ ಕಾಪಾಡುವ ಸಂಪ್ರದಾಯವಿದೆ. ಗ್ರಾಮದಲ್ಲಿ ಹಿರಿಯರು, ಪಂಚರಿಗೆ ಅಪಾರ ಗೌರವವಿದೆ, ಆದುದರಿಂದ ಕರಂಜೇಕರ ಕುಟುಂಬದವರು ಸಲ್ಲಿಸಿರುವ ಮನವಿಯಲ್ಲಿನ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ತಿಳಿಸಿದ್ದಾರೆ.
ಸುಳ್ಳು ಅಥವಾ ಆಧಾರರಹಿತ ಆರೋಪಗಳಿಂದ ಇಡೀ ಗ್ರಾಮದ ಗೌರವಕ್ಕೆ ಧಕ್ಕೆ ಉಂಟಾಗದಂತೆ ಹಾಗೂ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗದಂತೆ ಸಂಬಂಧಿತ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.