ಹೇಮೆ ನೀರು ಹಂಚಿಕೆಯಲ್ಲಿ ರಾಜಕೀಯ ಬೇಡ

KannadaprabhaNewsNetwork |  
Published : Jun 02, 2025, 01:02 AM IST
1,2,3 ಹೇಮಾವತಿ ಕಾಮಗಾರಿಗೆ ಸಂಬಂಧಿಸಿದ ಚಿತ್ರಗಳು | Kannada Prabha

ಸಾರಾಂಶ

ಕುದೂರು: ಹೇಮಾವತಿ ನೀರಿನ ಜಲಾಶಯ ಇರುವುದು ಹಾಸನ ಜಿಲ್ಲೆಯ ಗೊರೂರಿನಲ್ಲಿ. ಅಲ್ಲಿಂದ ತುಮಕೂರು ಜಿಲ್ಲೆಗೆ ನೀರು ಹರಿಯಬೇಕಾದರೆ ಹಾಸನ ಜಿಲ್ಲೆಯ ರೈತರು ತುಮಕೂರಿನ ರಾಜಕಾರಣಿಗಳಿಂದ ಪ್ರೇರಿತ ರೈತರಂತೆ ಮಾಡಿದ್ದರೆ ತುಮಕೂರು ಜಿಲ್ಲೆಗೆ ನೀರು ಹರಿಯುತ್ತಿತ್ತಾ?

ಕುದೂರು: ಹೇಮಾವತಿ ನೀರಿನ ಜಲಾಶಯ ಇರುವುದು ಹಾಸನ ಜಿಲ್ಲೆಯ ಗೊರೂರಿನಲ್ಲಿ. ಅಲ್ಲಿಂದ ತುಮಕೂರು ಜಿಲ್ಲೆಗೆ ನೀರು ಹರಿಯಬೇಕಾದರೆ ಹಾಸನ ಜಿಲ್ಲೆಯ ರೈತರು ತುಮಕೂರಿನ ರಾಜಕಾರಣಿಗಳಿಂದ ಪ್ರೇರಿತ ರೈತರಂತೆ ಮಾಡಿದ್ದರೆ ತುಮಕೂರು ಜಿಲ್ಲೆಗೆ ನೀರು ಹರಿಯುತ್ತಿತ್ತಾ?

ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಕೆರೆಗಳಿಗೆ ನೀರು ಹರಿಯಲು ಬಿಡುವುದಿಲ್ಲ ಎಂದು ಪ್ರತಿಭಟನೆ ಮಾಡುತ್ತಿರುವುದು ತುಮಕೂರು ಜಿಲ್ಲೆಯ ಶಾಸಕರಿಗೆ ಶೋಭೆಯಲ್ಲ ಎಂದು ಮಾಗಡಿ ತಾಲೂಕಿನ ರೈತರು ಒಕ್ಕೊರಲಿನಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

470 ಕೋಟಿ ರು. ಖರ್ಚು:

ಶ್ರೀರಂಗ ಏತ ನೀರಾವರಿ ಯೋಜನೆಯಿಂದ 170 ಕೋಟಿ, ಎಕ್ಸ್‌ಪ್ರೆಸ್ ಕೆನಾಲ್ ಯೋಜನೆಯಿಂದ 300 ಕೋಟಿ ರು. ಸೇರಿ ಒಟ್ಟು 470 ಕೋಟಿ ರು. ಮಾಗಡಿ ತಾಲೂಕಿನ ಕೆರೆಗಳಿಗೆ ನೀರು ಹರಿಸಲು ವೆಚ್ಚ ಮಾಡಲಾಗುತ್ತಿದೆ. ಇದರಲ್ಲಿ ಶೇ.40ರಷ್ಟು ಹಣ ಖರ್ಚಾಗಿದೆ. ಮಾಗಡಿ ತಾಲೂಕಿನ ರೈತರು ಆಸೆ ಕಂಗಳಿಂದ ತಾಲೂಕಿನ ಕೆರೆಗಳಿಗೆ ಹೇಮೆ ಹರಿಯುತ್ತಾಳೆ ಎಂದು ಕಾತುರದಿಂದ ಕಾಯುತ್ತಿದ್ದಾರೆ. ನೀರಿನ ವಿಷಯದಲ್ಲಿ ರಾಜಕೀಯ ಲೇಪನ ಕಟ್ಟಿಕೊಂಡು ಅನ್ನದಾತರ ಬದುಕಿಗೆ ಅಡ್ಡಿಪಡಿಸುವುದು ಎಷ್ಟರ ಮಟ್ಟಿಗೆ ಸರಿ?

ತುಮಕೂರು ಜಿಲ್ಲೆಯ ಶಿರಾ, ತಿಪಟೂರು, ಗುಬ್ಬಿ, ತುರುವೇಕೆರೆ, ಕುಣಿಗಲ್ ರೈತರನ್ನು ವಂಚಿಸಿ ನಮಗೆ ನೀರು ಬೇಕು ಎಂಬ ಹಠ ಮಾಗಡಿ ತಾಲೂಕಿನ ಜನ ಮಾಡುತ್ತಿಲ್ಲ. ಇರುವ ನೀರು ಹಂಚಿಕೊಂಡರೆ ಎರಡೂ ಜಿಲ್ಲೆಯವರಿಗೆ ಅನುಕೂಲವಾಗುತ್ತದೆ. ಈ ಸತ್ಯ ಪ್ರತಿಭಟನೆ ಮಾಡುತ್ತಿರುವ ರಾಜಕಾರಣಿಗಳಿಗೂ ಗೊತ್ತಿದೆ. ಆದರೆ ರೈತರನ್ನು ದಿಕ್ಕು ತಪ್ಪಿಸಿ ಹೋರಾಟವನ್ನು ಹಿಂಸಾರೂಪಕ್ಕೆ ತಿರುಗಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವುದು ಅಕ್ಷಮ್ಯ ಎಂಬುದು ಮಾಗಡಿ ತಾಲೂಕಿನ ಜನರ ಅಸಮಾಧಾನ.

ಮಾತು ಮರೆತ ಶಾಸಕ ಸುರೇಶ್‌ಗೌಡ: ಆಗ ಸಿ.ಪಿ.ಯೋಗೇಶ್ವರ್ ಅರಣ್ಯ ಸಚಿವರಾಗಿದ್ದಾಗ ಮಾಗಡಿ ತಾಲೂಕಿನ ಕೆರೆಗಳಿಗೆ ನೀರು ಹರಿಸಲು ಸುಲಭಸಾಧ್ಯವಾ? ಎಂದು ಪರೀಕ್ಷಿಸಲು ಇಡೀ ದಿನ ತುಮಕೂರು ಮತ್ತು ಕುಣಿಗಲ್ ತಾಲೂಕಿನ ಕೆರೆಗಳಿಗೆ ಭೇಟಿ ನೀಡಿ ಅಧಿಕಾರಿಗಳ ಜೊತೆಗೆ ಚರ್ಚಿಸಿದ್ದರು. ಆಗ ತುಮಕೂರು ಗ್ರಾಮಾಂತರದ ಶಾಸಕ ಸುರೇಶ್‌ಗೌಡರು ಯೋಗೇಶ್ವರ್ ಜೊತೆಗಿದ್ದರು. ಸುಗ್ಗನಹಳ್ಳಿ ಶ್ರೀ ಲಕ್ಷ್ಮೀಸರಸಿಂಹಸ್ವಾಮಿ ದೇವಾಲಯದಲ್ಲಿ ದೇವರು ಮತ್ತು ಜನರ ಸಮ್ಮುಖದಲ್ಲಿ ತುಮಕೂರು ಜಿಲ್ಲೆಯ ಹೊನ್ನುಡಿಕೆ ಮತ್ತು ದೇವರೆ ಕೆರೆಗಳಿಂದ ಮಾಗಡಿ ತಾಲೂಕಿನ ಕೆರೆಗಳಿಗೆ ಹೇಮಾವತಿ ನದಿ ನೀರು ಹರಿಸಲು ನಾನು ಶ್ರಮಿಸುತ್ತೇನೆ ಎಂದು ದೇವರ ಮೇಲೆ ಆಣೆ ಮಾಡಿದ್ದರು. ಆಗ ಜನರು ಚಪ್ಪಾಳೆ ತಟ್ಟಿ ದೇವರ ಮೇಲಿದ್ದ ಹಾರವನ್ನು ಸುರೇಶ್‌ಗೌಡರಿಗೆ ಹಾಕಿ ಅಭಿನಂದಿಸಿದ್ದನ್ನು ಮರೆತಂದಿದೆ.

ಈಗ ಅದೇ ಸುರೇಶ್‌ಗೌಡರು ರೈತರನ್ನು ಮುಂದೆ ಮಾಡಿ ಹೇಮೆ ಮಾಗಡಿಗೆ ಹರಿಯಲು ಸಾಧ್ಯವಿಲ್ಲ ಎಂದು ಕಾಲುವೆಯೊಳಗೆ ಜೆಸಿಬಿಯಿಂದ ಪೈಪುಗಳನ್ನು ತಳ್ಳಿ ಪ್ರತಿಭಟಿಸುತ್ತಿರುವುದು ದೇವರು ಮೆಚ್ಚುವ ಕಾರ್ಯವೇ ಎಂದು ಜನ ಪ್ರಶ್ನಿಸಿದ್ದಾರೆ.

ಸ್ವಾಮೀಜಿಗಳ ನಡೆಯೂ ಪ್ರಶ್ನಾರ್ಥಕ:

ಸರ್ವೇ ಜನಃ ಸುಖೀನೋಭವಂತು ಎಂದು ಉಪದೇಶ ನೀಡುವ ಸ್ವಾಮೀಜಿಗಳು ಕೂಡಾ ಮಾಗಡಿ ತಾಲೂಕಿನ ರೈತರಿಗೆ ನೀರು ಕೊಡುವುದಿಲ್ಲ ಎಂದು ರಸ್ತೆಗಿಳಿದು ಚಳವಳಿ ಮಾಡುತ್ತಿರುವುದು ನಿಜಕ್ಕೂ ಅಚ್ಚರಿ.

2010ರಲ್ಲಿ ಸಿದ್ದಗಂಗಾ ಶ್ರೀಗಳ ಸಮ್ಮುಖದಲ್ಲಿ ಎಚ್.ಸಿ.ಬಾಲಕೃಷ್ಣ, ಎ.ಮಂಜುನಾಥ್, ಎಚ್.ಎಂ.ರೇವಣ್ಣ ಮಾಗಡಿ ತಾಲೂಕಿಗೆ ಹೇಮಾವತಿ ನದಿ ನೀರು ತರಲು ನಾವೆಲ್ಲರೂ ಒಟ್ಟಾಗಿದ್ದೇವೆ. ತಮ್ಮ ಆಶೀರ್ವಾದ ನಮ್ಮ ಈ ಕೆಲಸಕ್ಕೆ ಶಕ್ತಿ ತುಂಬಬೇಕು ಎಂದು ಡಾ.ಶ್ರೀ ಶಿವಕುಮಾರ ಸ್ವಾಮೀಜಿಗೆ ತಿಳಿಸಿದ್ದರು. ಅದಕ್ಕೆ ಪೂಜ್ಯ ಸ್ವಾಮೀಜಿ ಮಾಗಡಿ ತಾಲೂಕು ಗುಡ್ಡಗಾಡು ಪ್ರದೇಶ. ಯಾವುದೇ ನೀರಾವರಿ ಯೋಜನೆಗಳು ಇಲ್ಲ. ಇದರಿಂದ ಆ ರೈತರ ಬದುಕು ಹಸನಾಗುತ್ತದೆ ಎಂದು ಹೇಳಿದ್ದರು.

ತುಮಕೂರು ಜಿಲ್ಲೆಯ ಸುರೇಶ್‌ಗೌಡರು ಇದನ್ನು ಗಮನಿಸಬೇಕಿದೆ. ಸಿದ್ದಗಂಗಾ ಶ್ರೀಗಳ ಜನ್ಮಸ್ಥಳ ಮಾಗಡಿ ತಾಲೂಕಿನ ವೀರಾಪುರ, ಬೆಂಗಳೂರು ಕಟ್ಟಿದ ಕೆಂಪೇಗೌಡರ ನಾಡು, ವೃಕ್ಷಮಾತೆ ಸಾಲುಮರದ ತಿಮ್ಮಕ್ಕನ ಸಾಲುಮರದ ನೆರಳಿನ ಊರು. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಮತ್ತೊಮ್ಮೆ ಯೋಚನೆ ಮಾಡಿ ರೈತರ ದಿಕ್ಕು ತಪ್ಪಿಸುವುದನ್ನು ನಿಲ್ಲಿಸಿ ಪರಸ್ಪರ ಸಾಮರಸ್ಯ ಮೂಡಿಸುವಂತಾಗಲಿ ಎಂಬುದು ಮಾಗಡಿ ತಾಲೂಕಿನ ಜನರ ಆಶಯವಾಗಿದೆ.

1993ರಲ್ಲಿ ಪ್ರಾರಂಭಗೊಂಡ ಈ ಯೋಜನೆ ಇನ್ನೂ ಅನೇಕ ಅಡ್ಡಿ ಆತಂಕಗಳಿಂದ ಕುಂಟುತ್ತಿದೆ ಎಂದರೆ ರಾಜ್ಯದ ಮುಖ್ಯಮಂತ್ರಿಗಳು ಈ ವಿಷಯದಲ್ಲಿ ಉಪಮುಖ್ಯಮಂತ್ರಿಗಳಿಗೆ ಸಹಕರಿಸಬೇಕು. ಏಕೆಂದರೆ ಈ ಹಿಂದೆ ಇದೇ ಸಿದ್ದರಾಮಯ್ಯನವರು 2015ರಲ್ಲಿ 285 ಕೋಟಿ ರು. ಈ ಯೋಜನೆಗೆ ಕೊಟ್ಟಿದ್ದರು. ಈಗಿರುವ ಪೈಪ್ ಲೈನ್ ಮೂಲಕ ಮಾಗಡಿ ತಾಲೂಕಿನ ಕೆರೆಗಳಿಗೆ ನೀರು ಹರಿಯುವುದು ಗಗನ ಕುಸುಮ. ಏಕೆಂದರೆ ಕುಣಿಗಲ್ ಕೆರೆಗೆ ನೀರು ಸರಿಯಾಗಿ ಹರಿಯುತ್ತಿಲ್ಲ. ಇನ್ನು ಮಾಗಡಿಯ 86 ಕೆರೆಗಳಿಗೆ ನೀರು ಸರಾಗವಾಗಿ ಹರಿಯುವುದು ಹೇಗೆ? ಅದಕ್ಕಾಗಿ ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ಹರಿಸಿದರೆ ಸರಾಗವಾಗಿ ಕೆರೆಗಳು ತುಂಬಲಿವೆ. ಇದರಿಂದ ಖಂಡಿತವಾಗಿಯೂ ತುಮಕೂರು ಭಾಗದ ರೈತರಿಗೆ ತೊಂದರೆಯಾಗಲ್ಲ. ಭವಿಷ್ಯದಲ್ಲಿ ತೊಂದರೆ ಆಗುತ್ತದೆ ಎಂಬ ಭೀತಿಯಲ್ಲಿ ಪ್ರತಿಭಟನೆ ಮಾಡುವುದು ಸೂಕ್ತವೂ ಅಲ್ಲ.

ಮಾತುಕತೆಯಿಂದ ಮಾತ್ರ ಸಾಧ್ಯ:

ಎರಡೂ ಜಿಲ್ಲೆಗಳ ರೈತರು ಪ್ರತಿಭಟನೆಗಳಿಂದ ಪ್ರಚೋದನೆಗೆ ಒಳಗಾಗದೆ, ಮುಖ್ಯಮಂತ್ರಿಗಳ ಸಮ್ಮುಖದಲ್ಲಿ 2 ಜಿಲ್ಲೆಯ ಶಾಸಕರು ಮತ್ತು ರೈತ ಮುಖಂಡರು ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು. ಎರಡೂ ಜಿಲ್ಲೆಯ ಕೆರೆಗಳಿಗೆ ನಿರ್ವಿಘ್ನವಾಗಿ ಹೇಮಾವತಿ ನದಿ ನೀರು ಹರಿಯುವಂತೆ ಮಾಡುವ ಗುರುತರ ಹೊಣೆ ಮುಖ್ಯಮಂತ್ರಿಗಳ ಮೇಲಿದೆ.

ಬಾಕ್ಸ್ .............

ಸಂಸದರು ಮೌನ ಮುರಿಯಲಿ:

ಡಾ.ಮಂಜುನಾಥ್ ಸಂಸದರಾಗಿ ಆಯ್ಕೆಯಾದ ನಂತರ ಮಾಗಡಿ ತಾಲೂಕನ್ನು ಮರೆತಂತಿದೆ ಎಂದು ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಹೇಮಾವತಿ ನದಿ ನೀರು ಮಾಗಡಿ ಕೆರೆಗಳಿಗೆ ಹರಿಯಬೇಕಿದೆ ಎಂದು ಹೇಳಿ ರೈತರ ಜೊತೆಯಲ್ಲಿ ನಾವಿರುತ್ತೇವೆ ಎಂಬ ಧೈರ್ಯದ ಮಾತುಗಳನ್ನಾದರೂ ಆಡಬೇಕಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಎರಡೂ ಜಿಲ್ಲೆಯ ರೈತರು ಸೌಹಾರ್ದತೆಯಿಂದ ನೀರು ಹಂಚಿಕೆ ಮಾಡಿಕೊಳ್ಳುವಂತೆ ಮಾತುಕತೆಯ ವೇದಿಕೆ ಸಿದ್ದಪಡಿಸಲು ಸರ್ಕಾರದ ಮೇಲೆ ಒತ್ತಡ ತರಬೇಕಿದೆ.

----------------------------------

ಕೋಟ್ ............

ಮಾಗಡಿ ತಾಲೂಕಿನ ಕೆರೆಗಳಿಗಷ್ಟೇ ಅಲ್ಲದೆ ಕನಕಪುರ, ರಾಮನಗರಕ್ಕೂ ಹೇಮೆ ನೀರು ಕೊಂಡೊಯ್ಯುತ್ತಾರೆಂಬುದು ತುಮಕೂರು ಜಿಲ್ಲೆಯ ರೈತರಲ್ಲಿ ಗೊಂದಲವೆಬ್ಬಿಸಿ ಚಳವಳಿ ನಡೆಸುತ್ತಿದ್ದಾರೆ. ತುಮಕೂರು ಜಿಲ್ಲೆ ಮತ್ತು ಮಾಗಡಿ ತಾಲೂಕಿನ ಕೆರೆಗಳಿಗೆ ಹೇಮಾವತಿ ನೀರು ಹರಿಸಲು ಅಡ್ಡಗಾಲು ಹಾಕುವುದು ಸರಿಯಲ್ಲ. ಈಗಾಗಲೇ ಅರ್ಧ ಕಾಮಗಾರಿ ಆಗಿದೆ. ಸೌಹಾರ್ದತೆಯಿಂದ 2 ಜಿಲ್ಲೆ ನಾಯಕರು ಪಕ್ಷಬೇಧ ಮರೆತು ಶ್ರಮಿಸಬೇಕಿದೆ.

- ಎಚ್.ಸಿ.ಬಾಲಕೃಷ್ಣ, ಶಾಸಕರು, ಮಾಗಡಿ

ಕೋಟ್ ...........

ಈಗಾಗಲೇ ಮುಜರಾಯಿ ಜಾಗದಲ್ಲಿ ಕಾಮಗಾರಿ ಆಗುವುದಕ್ಕೆ ಸರ್ಕಾರದಿಂದ ಅನುಮತಿ ತೆಗೆದುಕೊಂಡು ಕೆಲಸ ನಡೆದಿದೆ. ಈಗ ಮುಂದಿನ ಕಾಮಗಾರಿ ರೈತರ ಜಮೀನಿನಲ್ಲೇ ನಡೆಯಬೇಕಿದೆ. ಅದಕ್ಕಾಗಿ ರೈತರ ಮನವೊಲಿಸಿ, ಪರಿಸ್ಥತಿ ವಿಕೋಪಕ್ಕೆ ಹೋಗುವ ಮುನ್ನ ಸಮಸ್ಯೆಯನ್ನು ಬಗೆಹರಿಸಿಕೊಂಡು ಸರಾಗವಾಗಿ ನೀರು ಹರಿಯುವಂತೆ ಸರ್ಕಾರ ನೋಡಿಕೊಳ್ಳಬೇಕಿದೆ.

- ಟಿ.ಜಿ.ವೆಂಕಟೇಶ್, ಮಾಜಿ ಅಧ್ಯಕ್ಷರು, ತಾಪಂ

1ಕೆಆರ್ ಎಂಎನ್ 1,2,3,4.ಜೆಪಿಜಿ

1,2,3.

ಹೇಮಾವತಿ ಕಾಮಗಾರಿಗೆ ಸಂಬಂಧಿಸಿದ ಚಿತ್ರಗಳು

4. ಎಚ್.ಸಿ.ಬಾಲಕೃಷ್ಣ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ