ದುಬಾರೆ ಸಾಕಾನೆ ಶಿಬಿರದಲ್ಲಿ ಪ್ರವಾಸಿಗರಿಲ್ಲ ಸುರಕ್ಷತೆ!

KannadaprabhaNewsNetwork |  
Published : May 19, 2026, 02:45 AM IST
ಪ್ರವಾಸಿ  | Kannada Prabha

ಸಾರಾಂಶ

ವಿಶ್ವ ಪ್ರಸಿದ್ಧವಾಗಿರುವ ದುಬಾರೆ ಸಾಕಾನೆ ಶಿಬಿರದಲ್ಲಿ ಸಾಕಾನೆಗಳ ಕಾಳಗದಿಂದಾಗಿ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಆದರೆ ಇಲ್ಲಿ ಹಲವು ವೈಫಲ್ಯ ಈ ಹಿಂದಿನಿಂದಲೇ ನಡೆದುಕೊಂಡು ಬಂದಿದೆ. ದುಬಾರೆ ದುಬಾರಿಯಾಗಿದೆಯೇ ಹೊರತು ಇಲ್ಲಿ ಪ್ರವಾಸಿಗರಿಗೆ ಯಾವುದೇ ಸುರಕ್ಷತೆ ಇಲ್ಲ.

ವಿಘ್ನೇಶ್ ಎಂ. ಭೂತನಕಾಡು

ಮಡಿಕೇರಿ: ವಿಶ್ವ ಪ್ರಸಿದ್ಧವಾಗಿರುವ ದುಬಾರೆ ಸಾಕಾನೆ ಶಿಬಿರದಲ್ಲಿ ಸಾಕಾನೆಗಳ ಕಾಳಗದಿಂದಾಗಿ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಆದರೆ ಇಲ್ಲಿ ಹಲವು ವೈಫಲ್ಯ ಈ ಹಿಂದಿನಿಂದಲೇ ನಡೆದುಕೊಂಡು ಬಂದಿದೆ. ದುಬಾರೆ ದುಬಾರಿಯಾಗಿದೆಯೇ ಹೊರತು ಇಲ್ಲಿ ಪ್ರವಾಸಿಗರಿಗೆ ಯಾವುದೇ ಸುರಕ್ಷತೆ ಇಲ್ಲ.

ನಾಡಿಗೆ ಬಂದು ಉಪಟಳ ನೀಡುವ ಕಾಡಾನೆಗಳನ್ನು ಸೆರೆ ಹಿಡಿದು ಪಳಗಿಸುವ ಕೇಂದ್ರ ದುಬಾರೆ. ಆದರೆ ಇತ್ತೀಚೆಗೆ ಹಣಕ್ಕಾಗಿ ಇದು ಪ್ರವಾಸಿ ಕೇಂದ್ರವಾಗಿ ಬದಲಾಗಿದೆ. ಯಾವುದೇ ರಕ್ಷಣೆ ಇಲ್ಲದೆ ಪ್ರವಾಸಿಗರಿಗೆ ಮುಕ್ತವಾಗಿರುವುದಕ್ಕೆ ಈ ಹಿಂದಿನಿಂದಲೂ ವಿರೋಧಗಳು ವ್ಯಕ್ತವಾಗುತ್ತಿತ್ತು. ದುಬಾರೆಯಲ್ಲಿ ಯಾವುದೇ ಅನಾಹುತಗಳು ಸಂಭವಿಸಿದಾಗ ಸೂಕ್ತ ಚಿಕಿತ್ಸೆಗಾಗಿ ಸ್ಥಳದಲ್ಲಿ ಆಂಬುಲೆನ್ಸ್ ಇಲ್ಲ. ಪ್ರಥಮ ಚಿಕಿತ್ಸೆ ವ್ಯವಸ್ಥೆ ಕೂಡಾ ಇಲ್ಲ. ಆನೆಗಳು ಮದವೇರಿದಾಗ ನಿಯಂತ್ರಣ ಮಾಡಲು ಪರಿಣಿತರಿಲ್ಲ ಎಂಬ ಸಾಕಷ್ಟು ದೂರುಗಳಿದೆ. ಹೀಗಿದ್ದರೂ ಪ್ರವಾಸಿರನ್ನು ಆನೆಯ ಸಮೀಪದಲ್ಲೇ ಬಿಡುವ ಮೂಲಕ ತೀರಾ ನಿರ್ಲ್ಯಕ್ಷ ವಹಿಸಲಾಗಿದೆ.

ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಗಳನ್ನು ಸ್ನಾನ ಮಾಡಿಸಲು ಪೈಪೋಟಿ ನಡೆಯುತ್ತಿದೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಇಲ್ಲಿನ ಕೆಲವರ ನಿರ್ಲಕ್ಷ್ಯತನದಿಂದಾಗಿ ಈ ಘಟನೆ ಸಂಭವಿಸಿದೆ. ಆನೆಯನ್ನು ಸ್ನಾನ ಮಾಡಿಸಲು ಒಬ್ಬರಿಗೆ ರು.500 ಪಾವತಿ ಮಾಡಿಸಿಕೊಳ್ಳುತ್ತಾರೆ. ಆನೆಗಳು ಸಮೀಪ ಪ್ರವಾಸಿಗರು ನಿಂತುಕೊಂಡು ಸ್ನಾನವನ್ನು ಮಾಡಿಸುತ್ತಾರೆ. ಇದೀಗ ಹಣ ನೀಡಿ ಇದೀಗ ಪ್ರವಾಸಿ ಮಹಿಳೆಯೊಬ್ಬರು ಸಾವನ್ನಪ್ಪಿರುವುದು ದುಬಾರೆಗೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ.ಆನೆಯನ್ನು ಸ್ನಾನ ಮಾಡಿಸಲು ಹಣ ತೆಗೆದುಕೊಂಡ ಮೇಲೆ ಪ್ರವಾಸಿಗರಿಗೆ ಸುರಕ್ಷತೆ ಇರಬೇಕು. ಆದರೆ ಅಂತಹ ಯಾವುದೇ ಮುಂಜಾಗ್ರತಾ ಹಾಗೂ ಸುರಕ್ಷತಾ ಕ್ರಮಗಳು ಇಲ್ಲಿ ಇಲ್ಲ ಎಂಬುದು ಸತ್ಯ. ಯಾವುದೇ ರಕ್ಷಣೆ ಇಲ್ಲ. ಸ್ಥಳದಲ್ಲಿ ಗೈಡ್ ಗಳು ಕೂಡ ಇಲ್ಲ. ಇಂತಹ ಬೇಜಬ್ದಾರಿ ವಹಿಸಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಲವರು ಆಗ್ರಹಿಸಿದ್ದಾರೆ. ಇಲಾಖೆ ವಿರುದ್ಧ ಆಕ್ರೋಶ: ದುಬಾರೆಯಲ್ಲಿ ಪ್ರವಾಸಿಗರಿಗೆ ಕನಿಷ್ಠ ಸುರಕ್ಷತೆಯೂ ಇಲ್ಲ ಎಂದು ಜೋಯೆಲ್ ದೂರಿದ್ದಾರೆ. ನನ್ನ ಪತ್ನಿ ಆನೆಗಳ ಕಾಳಗದ ನಡುವೆ ಸಿಲುಕಿ ಕೆಳಗೆ ಬಿದ್ದಾಗ ರಕ್ಷಿಸಲು ಯಾರೂ ಬರಲಿಲ್ಲ. ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಕೂಡ ಸಿಗಲಿಲ್ಲ. ಇಲಾಖೆಯ ಬೇಜವಾಬ್ದಾರಿಯೇ ನನ್ನ ಪತ್ನಿಯ ಸಾವಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾವುತ ಸ್ಥಳದಲ್ಲಿ ಇರಲಿಲ್ಲ!: ದುಬಾರೆಯಲ್ಲಿ ನಡೆದ ದುರಂತಕ್ಕೆ ಮಾವುತರ ನಿರ್ಲಕ್ಷ್ಯವೇ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕಂಜನ್ ಆನೆಯ ಅಧಿಕೃತ ಮಾವುತ ವಿಜಯ ಎಂಬುವವರು ಘಟನೆಯ ವೇಳೆ ಸ್ಥಳದಲ್ಲಿ ಇರಲಿಲ್ಲ ಎನ್ನಲಾಗಿದೆ. ಅವರ ಬದಲಿಗೆ ಆನೆಗಳನ್ನು ನಿಭಾಯಿಸಲು ಅನುಭವವಿಲ್ಲದ ಹೊರಗುತ್ತಿಗೆ ನೌಕರ ಆನೆಯನ್ನು ಮುನ್ನಡೆಸುತ್ತಿದ್ದ. ಸಾಮಾನ್ಯವಾಗಿ ಆನೆಗಳು ತಮ್ಮ ಮಾವುತ ಮತ್ತು ಕವಾಡಿಗರ ಮಾತನ್ನು ಮಾತ್ರ ಕೇಳುತ್ತವೆ. ಆದರೆ, ಅಪರಿಚಿತ ವ್ಯಕ್ತಿ ಆನೆಯನ್ನು ನಡೆಸುತ್ತಿದ್ದರಿಂದ, ಆನೆ ರೊಚ್ಚಿಗೆದ್ದಾಗ ಅದನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ಇತರ ಮಾವುತರು ಸ್ಪಷ್ಟಪಡಿಸಿದ್ದಾರೆ. ಪ್ರವಾಸಿಗರಿಗೆ ರಕ್ಷಣೆ ಇಲ್ಲ!: ದುಬಾರೆ ಸಾಕಾನೆ ಶಿಬಿರದಲ್ಲಿ ಪ್ರವಾಸಿಗರಿಗೆ ಯಾವುದೇ ರಕ್ಷಣೆ ಇಲ್ಲದಂತಾಗಿದೆ. ಕಾವೇರಿ ನದಿಯನ್ನು ದಾಟಿ ಪ್ರವಾಸಿಗರು ದುಬಾರೆ ಸಾಕಾನೆ ಶಿಬಿರಕ್ಕೆ ತೆರಳುತ್ತಾರೆ. ಆದರೆ ಅಲ್ಲಿ ಹೋದ ಪ್ರವಾಸಿಗರಿಗೆ ಅರಣ್ಯ ಇಲಾಖೆಯಿಂದ ಯಾವುದೇ ರಕ್ಷಣೆ ಇಲ್ಲ. ಇನ್ನಾದರೂ ಸಂಬಂಧಿಸಿದ ಇಲಾಖೆ ಪ್ರವಾಸಿಗರೆ ಸೂಕ್ತ ರಕ್ಷಣೆ ವ್ಯವಸ್ಥೆ ಮಾಡಿದ ಬಳಿಕ ಸಾಕಾನೆ ಶಿಬಿರವನ್ನು ಪ್ರವಾಸಿಗರಿಗೆ ಮುಕ್ತಗೊಳಿಸಬೇಕಿದೆ.

ಆನೆ ಸ್ನಾನ ಮಾಡಿಸಲು ಹಣ, ಪೈಪೋಟಿ!: ದುಬಾರೆಯಲ್ಲಿ ಸಾಕಾನೆಗಳನ್ನು ಸ್ನಾನ ಮಾಡಿಸುವುದಕ್ಕೆ ಅರಣ್ಯ ಇಲಾಖೆಯಿಂದ ಒಬ್ಬರಿಗೆ ರು.500 ದರ ನಿಗದಿ ಮಾಡಲಾಗಿದೆ. ಆದರೆ ಇತ್ತೀಚೆಗೆ ಪ್ರವಾಸಿಗರು ಹೆಚ್ಚಾಗಿರುವ ಕಾರಣ ಆನೆಗಳನ್ನು ಸ್ನಾನ ಮಾಡಿಸಲು ಪೈಪೋಟಿ ಕಂಡುಬರುತ್ತಿದೆ. ಆನೆಗಳ ಸುತ್ತಲೂ ಅಪಾರ ಮಂದಿಯ ಪ್ರವಾಸಿಗರು ಯಾವುದೇ ಮುಂಜಾಗ್ರತೆ ಹಾಗೂ ಸುರಕ್ಷತೆ ಇಲ್ಲದೆ ನಿಲ್ಲುತ್ತಾರೆ. ಇದರಿಂದ ಇಂತಹ ದುರ್ಘಟನೆ ಸಂಭವಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯ ರಸ್ತೆಗಳ‌ ಮಳಿಗೆ ನಾಮಫಲಕಗಳಲ್ಲಿ ಕನ್ನಡ ಬಳಕೆಗೆ ಅಭಿಯಾನ
ಕೋಟ ಪಂಚಶಕ್ತಿ ಸಂಘದಿಂದ ಶಂಕರ ಜಯಂತೋತ್ಸವ