ಸಾಮಾಜಿಕ ಶೈಕ್ಷಣಿಕ ಗಣತಿಗೆ ಕಾಲಮಿತಿ ನಿಗಧಿ ಬೇಡ

KannadaprabhaNewsNetwork |  
Published : Sep 22, 2025, 01:00 AM IST
ಚಿತ್ರದುರ್ಗಮೂರನೇ ಪುಟದ ಲೀಡ್     | Kannada Prabha

ಸಾರಾಂಶ

ಏಳು ಕೋಟೆ ಜನರ ಸಮೀಕ್ಷೆ ನಡೆಸಬೇಕು । ಅವಸರ ಬೇಡ, ಸರ್ಕಾರಕ್ಕೆ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸಲಹೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸೆ.22 ರಿಂದ ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿರುವ ಸಾಮಾಜಿಕ, ಶೈಕ್ಷಣಿಕ ಗಣತಿಗೆ ಅವಸರ ಮಾಡುವುದು ಬೇಡ. ರಾಜ್ಯದಲ್ಲಿನ 7 ಕೋಟಿ ಜನರ ಸಮೀಕ್ಷೆಯಾಗುವವರೆಗೂ ನಡೆಸಬೇಕು. ಕಾಲಮಿತಿ ನಿಗಧಿ ಬೇಡ. ಸಮೀಕ್ಷೆಯಿಂದ ಯಾರೂ ಸಹಾ ಹೊರಗುಳಿಯದಂತೆ ನೋಡಿಕೊಳ್ಳಬೇಕಿದೆ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನಗರದ ಹೊರವಲಯದ ಭೋವಿ ಗುರುಪೀಠದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ರಾಜ್ಯ ಸರ್ಕಾರ ಸಾಮಾಜಿಕ ಶೈಕ್ಷಣಿಕ ಗಣತಿ ನಡೆಸುತ್ತಿರುವುದಕ್ಕೆ ಸ್ವಾಗತವಿದೆ. ಈ ಸಮೀಕ್ಷೆ ರಾಜ್ಯದಲ್ಲಿ ವಿವಿಧ ಜಾತಿಗಳ ಪ್ರಗತಿಗೆ ಕಾರಣವಾಗಿದೆ. ಸಮೀಕ್ಷೆಯನ್ನು ಯಾರೂ ನಿರ್ಲಕ್ಷ್ಯ ಮಾಡಬಾರದು. ಗಣತಿದಾರರು ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವುದರ ಮೂಲಕ ಜಾತಿಯನ್ನು ಗುರುತಿಸಿಕೊಳ್ಳಬೇಕಿದೆ. ರಾಜ್ಯದ ಕೆಲವು ಪ್ರದೇಶಗಳಲ್ಲಿ ಕೆಲಸಕ್ಕಾಗಿ ರಾಜ್ಯ ಬಿಟ್ಟು ಬೇರೆ ಕಡೆಲಿ ಹಲವರು ವಲಸೆ ಹೋಗಿದ್ದಾರೆ. ಇಂತಹವರನ್ನು ಸಹಾ ಗಣತಿಗೆ ಒಳಪಡಿಸಬೇಕಿದೆ. ಉತ್ತರ ಕರ್ನಾಟಕದಿಂದ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಹೋಗಿದ್ದಾರೆ. ಕೊಪ್ಪಳ, ಬಳ್ಳಾರಿ ಸೇರಿದಂತೆ ನಾನಾ ಜಿಲ್ಲೆಗಳಿಂದ ರಾಜಧಾನಿಗೆ ಹೋಗಿದ್ದಾರೆ. ಇಂತಹವರ ಗಣತಿ ಆಗಬೇಕು ಎಂದರು.

ಮೈಸೂರು ದಸರಾ ನಾಡಹಬ್ಬವಾಗಿ ಪರಿಣಿಮಿಸಿದೆ. ಈ ಸಮಯದಲ್ಲಿ ಊರಿನಿಂದ ಹೊರಗೆ ಹೋದವರು ಸಹಾ ವಾಪಾಸ್ಸು ಬರುತ್ತಾರೆ. ಉತ್ತರ ಕರ್ನಾಟಕದಲ್ಲಿ ದೀಪಾವಳಿ ನಾಡಹಬ್ಬವಾಗಿದೆ. ಊರಿನಿಂದ ಹೋರಗಡೆ ಹೋದವರು ವಾಪಾಸ್ಸು ಬರುತ್ತಾರೆ. ಇಂತಹ ಸಮಯದಲ್ಲಿ ಸರ್ಕಾರ ಮಾಡುವ ಸಮೀಕ್ಷೆ ಸರಿಯಿದೆ. ಇದನ್ನು ಸೂಕ್ಷ್ಮವಾಗಿ ಪರಿಗಣಿಸಿ ಸಮೀಕ್ಷೆ ಮಾಡಬೇಕಿದೆ. ರಾಜ್ಯದ ಎಲ್ಲಾ ಜನತೆ ಭಾಗವಹಿಸಿದ್ದಾರೆ ಎಂದು ಖಾತರಿಯಾದ ಮೇಲೆ ಸಮೀಕ್ಷೆಯನ್ನು ಪೂರ್ಣ ಮಾಡುವಂತೆ ಶ್ರೀಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.

2011ರ ಗಣತಿಯಲ್ಲಿ ಪ.ಜಾತಿ ಸಮಾಜದ ಜನಸಂಖ್ಯೆ 1.08 ಕೋಟಿ ಇತ್ತು. ಆದರೆ ನಾಗ ಮೋಹನ್ ದಾಸ್ ಆಯೋಗದ ವರದಿಯಲ್ಲಿ ಪರಿಶಿಷ್ಟ ಜಾತಿಯವರ ಸಮೀಕ್ಷೆಯನ್ನು ಮಾಡುವಾಗ 1.05 ಕೋಟಿ ಎಂದು ತೋರಿಸಿದ್ದಾರೆ. 10 ವರ್ಷದಲ್ಲಿ ಪರಿಶಿಷ್ಟ ಜಾತಿ ಸಮುದಾಯದವರು ಕನಿಷ್ಠ 25ಲಕ್ಷ ಹಾಗೂ ಭೋವಿ ಸಮುದಾಯ ಕನಿಷ್ಠ 3 ರಿಂದ 5 ಲಕ್ಷದವರೆಗೆ ಏರಿಕೆಯಾಗಿದ್ದಾರೆ. ಆದರೆ ಆಯೋಗ ಕಡಿಮೆ ಜನಸಂಖ್ಯೆ ತೋರಿಸಿದೆ. ಈ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಈ ರೀತಿಯಾಗದಂತೆ ನೋಡಿಕೊಳ್ಳಬೇಕಿದೆ. ನಮ್ಮ ಸಮುದಾಯದವರೆಲ್ಲರೂ ಜಾತಿ ಭೋವಿ ಅಥವಾ ವಡ್ಡರ ಎಂದು ಬರೆಸುವುದರ ಮೂಲಕ ನಮ್ಮ ಸಂಘಟನೆಯನ್ನು ಪ್ರದರ್ಶನ ಮಾಡಬೇಕಿದೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಅಡಿಯಲ್ಲಿ ಹಿಂದೂ ಬಿಲ್ ಕೋಡ್ ನಲ್ಲಿ ಬರುವ ಭೋವಿ ಜನಾಂಗವನ್ನು ಧರ್ಮ-ಹಿಂದೂ, ಜಾತಿ- ಭೋವಿ, ಉಪಜಾತಿ-ವಡ್ಡರ ಎಂದು ಬರೆಯಿಸಬೇಕೆಂದು ಶ್ರೀಗಳು ಸಲಹೆ ಮಾಡಿದರು.

ಜಿಲ್ಲಾ ಭೋವಿ ಸಂಘದ ಕಾರ್ಯದರ್ಶಿ ಎಚ್.ಲಕ್ಷ್ಮಣ್, ಭೋವಿ ಗುರುಪೀಠದ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಗೌನಹಳ್ಳಿ ಗೋವಿಂದಪ್ಪ ಹಾಜರಿದ್ದರು.

PREV

Recommended Stories

ಸಿಬ್ಬಂದಿ ಕೊರತೆ ಬೆಂಗಳೂರು ನಗರದಲ್ಲಿ ಜಾತಿ ಗಣತಿ ವಿಳಂಬ
ಸಮೀಕ್ಷೆ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಹುನ್ನಾರ