ಎರಡನೇ ಬೆಳೆಗಿಲ್ಲ ತುಂಗಭದ್ರಾ ನೀರು

KannadaprabhaNewsNetwork |  
Published : Nov 15, 2025, 02:15 AM IST
14ಕೆಪಿಎಲ್25 ಬೆಂಗಳೂರಿನಲ್ಲಿ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ | Kannada Prabha

ಸಾರಾಂಶ

ಡಿಸೆಂಬರ್ ಎರಡನೇ ವಾರದಿಂದ ಹೊಸ 33 ಗೇಟ್ ಅಳವಡಿಕೆ‌ ಕಾರ್ಯ ನಡೆಯಲಿದ್ದು, ಜೂನ್ ಅಂತ್ಯಕ್ಕೆ ಈ ಕಾರ್ಯ ಪೂರ್ಣಗೊಳ್ಳಲಿದೆ

ಕೊಪ್ಪಳ: ಕೇಂದ್ರ‌ ಸರ್ಕಾರ‌ ಹಾಗೂ ತುಂಗಭದ್ರಾ ಮಂಡಳಿಯ ನಿರ್ಧಾರದಂತೆ ಅಣೆಕಟ್ಟೆಯ 33 ಗೇಟ್ ಅಳವಡಿಕೆ ಹಿನ್ನೆಲೆ ಎರಡನೇ ಬೆಳೆಗೆ ನೀರಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಹೇಳಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ತುಂಗಭದ್ರಾ ಯೋಜನೆ ಹಾಗೂ ವಿಜಯನಗರ ಕಾಲುವೆಗಳ 125ನೇ ನೀರಾವರಿ ಸಲಹಾ ಸಮಿತಿ ಸಭೆಯ ಬಳಿಕ ಸಚಿವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಸರ್ಕಾರಕ್ಕೆ ರೈತರ ಹಿತ ಮುಖ್ಯ.‌ ಜತೆಗೆ ಅಣೆಕಟ್ಟೆಯ ರಕ್ಷಣೆ ಕೂಡ ನಮ್ಮ‌ ಕರ್ತವ್ಯ.‌ ಈ ಹಿನ್ನೆಲೆಯಲ್ಲಿ ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಎಲ್ಲ ಪಕ್ಷದ ಶಾಸಕರು, ಪರಿಷತ್ ಸದಸ್ಯರು ಹಾಗೂ ರೈತ ಮುಖಂಡರ ಜತೆ ಸಭೆ ನಡೆಸಿ ಒಕ್ಕೊರಲಿನಿಂದ‌ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.‌

ಡಿಸೆಂಬರ್ ಎರಡನೇ ವಾರದಿಂದ ಹೊಸ 33 ಗೇಟ್ ಅಳವಡಿಕೆ‌ ಕಾರ್ಯ ನಡೆಯಲಿದ್ದು, ಜೂನ್ ಅಂತ್ಯಕ್ಕೆ ಈ ಕಾರ್ಯ ಪೂರ್ಣಗೊಳ್ಳಲಿದೆ.‌ ಟೆಂಡರ್ ನಲ್ಲಿ‌ ಅಹರ್ತೆ ಪಡೆದಿರುವ ಗುಜರಾತ್ ಮೂಲದ ಕಂಪನಿಗೆ ಕಾಮಗಾರಿ ನಡೆಸಲು ಕಾರ್ಯಾದೇಶ ನೀಡಲಾಗಿದೆ. ಇದರ ಜತೆಗೆ ಕೆಲ ಕಾಲುವೆಗಳ‌ ದುರಸ್ತಿ ಹಾಗೂ ಇನ್ನಿತರ‌‌ ಅಣೆಕಟ್ಟೆಯ ಸಂಪುರ್ಣ ಸಣ್ಣ ದುರಸ್ತಿ ಇದೇ ಸಂದರ್ಭದಲ್ಲಿ‌ ಪೂರ್ಣಗೊಳಿಸಲಾಗುವುದು ಎಂದರು.

ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ:

ನಮಗೆ ರೈತರ ಹಿತ ಮುಖ್ಯ. ಅದರ ಜತೆಗೆ ಭವಿಷ್ಯದ ದೃಷ್ಟಿಯಿಂದ ಅಣೆಕಟ್ಟೆಯ ರಕ್ಷಣೆ ಕೂಡ ಬಹಳ ಮುಖ್ಯ. ಕೆಲ ಬಿಜೆಪಿ ನಾಯಕರು ರೈತರನ್ನು ದಿಕ್ಕು ತಪ್ಪಿಸುವ ಕೆಲಸ‌ ಮಾಡುತ್ತಿದ್ದಾರೆ. ನಾಲ್ಕು ಜಿಲ್ಲೆಯ ಎಲ್ಲ ಪಕ್ಷಗಳ ಶಾಸಕರ ಒಮ್ಮತದ ಮೇರೆಗೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಹಿಂದೆ ಜಲಾಶಯದ ಕ್ರಸ್ಟ್‌ ಗೇಟ್ ಮುರಿದ ಸಂದರ್ಭದಲ್ಲಿ, ಬೋರ್ಡ್ ನವರು ಅನುದಾನ ಕೊಡದಿದ್ದರೂ ರಾಜ್ಯ ಸರ್ಕಾರವೇ ಸಂಪೂರ್ಣ ಹಣ ವ್ಯಯಿಸಿ ನೂತನ ಗೇಟ್ ಅಳವಡಿಕೆ ಮಾಡಲಾಗುವುದು ಎಂದು ವಿಧಾನಸಭೆಯಲ್ಲಿ‌ ಜಲಸಂಪನ್ಮೂಲ‌‌ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದ್ದರು. ಆ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್‌ ಆದಿಯಾಗಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು.‌ ಇದೀಗ ಗೇಟ್ ಅಳವಡಿಕೆ ಸಂದರ್ಭದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ನೀರಾವರಿ ಸಲಹಾ ಸಮಿತಿ‌ ಅಧ್ಯಕ್ಷ ಶಿವರಾಜ್ ತಂಗಡಗಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ನಿಂತ‌ ಬೆಳೆಗಳಿಗೆ ಯಾವುದೇ ತೊಂದರೆಯಾಗದಂತೆ ಜ.10ರವರೆಗೆ ನೀರು ಹರಿಸಲಾಗುವುದು. ಅಲ್ಲದೆ, ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿಗಾಗಿ‌ ಕೆರೆಕಟ್ಟೆ ತುಂಬಿಸುವುದು ಹಾಗೂ ಇತರೆ ಉಪಯೋಗಕ್ಕಾಗಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲಾಗುವುದು ಎಂದು ಹೇಳಿದರು.

ಜಲಾಶಯದಲ್ಲಿನ‌ ನೀರಿನ ಸಂಗ್ರಹ ಲಭ್ಯತೆಯ ಮೇರೆಗೆ ನೀರಿನ ಬಳಕೆ ಮಾಡಲಾಗುತ್ತಿದೆ. ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಡಿ.1ರಿಂದ ಜ.10ರವರೆಗೆ ಬೆಳೆದು ನಿಂತ ಬೆಳೆಗಳಿಗೆ 3000 ಕ್ಯೂಸೆಕ್ ನಂತೆ, ಎಡದಂಡೆ ವಿಜಯನಗರ ಕಾಲುವೆಗೆ ಜ. 1ರಿಂದ ಮೇ 10ರವರೆಗೆ 150 ಕ್ಯೂಸೆಕ್ ನಂತೆ ವಿತರಣಾ ಕಾಲುವೆ 1ರಿಂದ 11ಎ ರವರೆಗೆ ನೀರು ಹರಿಸಲಾಗುವುದು ತಿಳಿಸಿದರು.

ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಡಿ.1ರಿಂದ ಜ.10ರವರೆಗೆ 1300 ಕ್ಯೂಸೆಕ್ ನಂತೆ, ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಡಿ. 1ರಿಂದ ಜ.10ರವರೆಗೆ 750 ಕ್ಯೂಸೆಕ್ ನಂತೆ, ರಾಯ ಬಸವಣ್ಣ ಕಾಲುವೆಗೆ ಜ. 1ರಿಂದ ಮೇ 31ರವರೆಗೆ ಸರಾಸರಿ 250 ಕ್ಯೂಸೆಕ್, ಇನ್ನು ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಡಿ.1ರಿಂದ 25 ಕ್ಯೂಸೆಕ್ ನಂತೆ ಅಥವಾ ನೀರಿನ‌ ಮಟ್ಟ 1585 ಅಡಿಗಳವರೆಗೆ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ ಎಂದು ವಿವರಿಸಿದರು.

ರಾಜ್ಯದ ಪಾಲು 33.01 ಟಿಎಂಸಿ ಉಳಿಯಲಿದೆ

ಕೇಂದ್ರ ಸರ್ಕಾರ ಮತ್ತು ಬೋರ್ಡ್ ಅವರು ನೀಡಿದ ಸಲಹೆಯಂತೆ ಅಣೆಕಟ್ಟೆಯ ರಕ್ಷಣೆ ದೃಷ್ಟಿಯಿಂದ 80 ಟಿಎಂಸಿ ನೀರನ್ನು ಮಾತ್ರ ಸಂಗ್ರಹಿಸಲಾಗಿದೆ.

ಎರಡನೇ ಬೆಳೆಗೆ ಕನಿಷ್ಠ ಕರ್ನಾಟಕಕ್ಕೆ 60 ಟಿಎಂಸಿ‌ ಬೇಕಾಗುತ್ತದೆ. ಕರ್ನಾಟಕದ ಪಾಲು 33.01 ಟಿಎಂಸಿ‌ ನೀರು ಉಳಿಯಲಿದೆ. ಆದರೆ ಗೇಟ್ ಅಳವಡಿಕೆ ಹಿನ್ನೆಲೆಯಲ್ಲಿ‌ ನೀರು ಒದಗಿಸಲು ಸಾಧ್ಯವಿಲ್ಲ ಎಂದು‌ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಎರಡನೇ ಬೆಳೆಗೆ ರೈತರಿಗೆ ನೀರು ಕೊಡದಿದ್ದರೆ, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಾಜಿ ಸಚಿವ‌ ಶ್ರೀರಾಮುಲು ಹೇಳಿಕೆ ನೀಡಿದ್ದಾರಲ್ಲ ಎಂಬ ಪ್ರಶ್ನೆಗೆ, ಶ್ರೀರಾಮುಲು ಅವರು ನನ್ನ ಸಹೋದರರಿದ್ದಂತೆ. ಹಾಗಾಗಿ ನೀರಿಗೆ ಹಾರುವುದು ಬೇಡ ಎಂದು‌ ಮಾರ್ಮಿಕವಾಗಿ ನುಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ