ಕಂಪ್ಲಿ: ಪಟ್ಟಣದ ಶಿಕಾರಿ ಕಾಲನಿಯಲ್ಲಿ ಅಲೆಮಾರಿ ಬುಡಕಟ್ಟು ಪಾರ್ದಿ ಸಮುದಾಯದ ಪರಂಪರೆಯ ಆಚರಣೆಗಳು ಭಕ್ತಿ ಭಾವದಿಂದ ಅದ್ದೂರಿಯಾಗಿ ಜರುಗಿದವು.
ಸೋಮವಾರದಿಂದ ಗುರುವಾರದವರೆಗೆ ನಾಲ್ಕು ದಿನಗಳ ಕಾಲ ನಡೆದ ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪ್ರತಿದಿನವೂ ವಿಶೇಷ ಪೂಜೆ, ಪ್ರಾರ್ಥನೆ, ನೈವೇದ್ಯ ಅರ್ಪಣೆ ಮತ್ತು ಸಂಪ್ರದಾಯಬದ್ಧ ವಿಧಿವಿಧಾನಗಳು ನೆರವೇರಿಸಲ್ಪಟ್ಟವು. ವಿಶೇಷವಾಗಿ ಕುದಿಯುವ ಹುಗ್ಗಿ ತೆಗೆಯುವ ಹರಕೆ ಕಾರ್ಯಕ್ರಮ ಭಕ್ತರಲ್ಲಿ ಅಪಾರ ಭಕ್ತಿ ಮತ್ತು ಶ್ರದ್ಧೆ ಮೂಡಿಸಿತು. ಮಹಿಳೆಯರು, ಯುವಕರು ಮತ್ತು ಹಿರಿಯರು ಎಲ್ಲರೂ ಸಮಾನವಾಗಿ ಭಾಗವಹಿಸಿ ದೇವರ ಕೃಪೆಗೆ ಬೇಡಿಕೆ ಸಲ್ಲಿಸಿದರು.
ಮೆರವಣಿಗೆಯ ವೇಳೆ ಗ್ರಾಮೀಣ ಕಲಾ ಸಂಸ್ಕೃತಿಯ ಝಲಕ್ ಕಾಣಿಸಿತು. ಭಕ್ತರು ಡೊಳ್ಳು, ತಾಳಗಳ ಸದ್ದಿನ ನಡುವೆ ದೇವರ ಮೂರ್ತಿಗಳನ್ನು ಹೊತ್ತು ಸಾಗಿದ್ದು, ಬೀದಿಗಳಲ್ಲಿ ಹಬ್ಬದ ವಾತಾವರಣ ಮೂಡಿಸಿತು.ರಾಜ್ಯ ಹರಣ ಶಿಕಾರಿ ಪಾರ್ದಿ ಮತ್ತು ಹಕ್ಕಿಪಿಕ್ಕಿ ಸಂಘದ ರಾಜ್ಯಾಧ್ಯಕ್ಷ ಬಿಜಾಪುರದ ವಾಸುದೇವ್ ಕಾಳೆ ಮಾತನಾಡಿ, ಅಲೆಮಾರಿ ಬುಡಕಟ್ಟು ಸಮುದಾಯದ ಜನರು ತಮ್ಮ ಹಕ್ಕುಗಳನ್ನು ಕಳೆದುಕೊಳ್ಳದೇ ಇರಲು ಜನಗಣತಿಯಲ್ಲಿ ತಪ್ಪದೇ ನೋಂದಣಿಯಾಗಬೇಕು ಎಂದು ಕರೆ ನೀಡಿದರು.
ರಾಜ್ಯ ಕಾರ್ಯದರ್ಶಿ ಹುಬ್ಬಳ್ಳಿಯ ಆನಂದ್ ಚೌವ್ಹಾಣ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸೌಂಡ್ಯ ದೇವಿ ಬೆಡಗಿನ ಪೂಜಾರಿಗಳಾದ ಮನ್ನಪ್ಪ ಕುಂದುಗೋಳ, ಗೋವಿಂದಪ್ಪ, ಕಂಪ್ಲಿಯ ಅಂಜಿನಪ್ಪ, ರಾಮಣ್ಣ, ಗೋವಿಂದ, ರುದ್ರಪ್ಪ ಸೇರಿದಂತೆ ಹಲವರು ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಆದಿವಾಸಿ ರಕ್ಷಣಾ ಪರಿಷತ್ ರಾಜ್ಯ ಕಾರ್ಯದರ್ಶಿ ಎಚ್.ಪಿ. ಶಿಕಾರಿ ರಾಮು, ಹಕ್ಕಿಪಿಕ್ಕಿ ಜಿಲ್ಲಾಧ್ಯಕ್ಷ ಎಚ್.ಪಿ. ಶ್ರೀಕಾಂತ್, ಯುವಕ ಸಂಘದ ಅಧ್ಯಕ್ಷ ಹರಿಕೃಷ್ಣ, ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ಜಾನಕಿ ನಾಗೇಶ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.