ರಾಮನಗರ: ಬಿಡದಿ ವಿವಿದ್ದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 12 ನಿರ್ದೇಶಕರ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಜೆಡಿಎಸ್-ಬಿಜೆಪಿ ಎನ್ಡಿಎ ಮೈತ್ರಿ ಕೂಟದ ಬೆಂಬಲಿತ ಅಭ್ಯರ್ಥಿಗಳು ಮಾಜಿ ಶಾಸಕ ಎ.ಮಂಜುನಾಥ್ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದರು.
ನಾನು ಶಾಸಕನಾಗಿದ್ದಾಗ ಸೊಸೈಟಿಯನ್ನು ಬಿಡಿಸಿಸಿ ಬ್ಯಾಂಕ್ ವ್ಯಾಪ್ತಿಗೆ ತಂದು ಹೆಚ್ಚಿನ ರೈತರಿಗೆ ಸಾಲ ಸೌಲಭ್ಯಗಳನ್ನು ಕಲ್ಪಿಸಿದೆ. ಆಡಳಿತ ಮಂಡಳಿಯ ಚುನಾವಣೆ ಒಂದು ವರ್ಷದ ಹಿಂದೆಯೇ ನಡೆಯಬೇಕಿತ್ತು. ಆದರೆ ಕೆಲವು ರಾಜಕೀಯ ಒತ್ತಡದ ಕಾರಣ ಚುನಾವಣೆ ತಡವಾಗಿ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಷೇರುದಾರ ಮತದಾರರು ಮೈತ್ರಿ ಬೆಂಬಲಿತ ಅಭ್ಯರ್ಥಿಗಳನ್ನು ಬಹುಮತದಿಂದ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಸಂಘದ 12 ನಿರ್ದೇಶಕರ ಸ್ಥಾನಗಳಿಗೆ ಸ್ಪರ್ಧಿಸಲು ಎನ್ಡಿಎ ಮೈತ್ರಿಕೂಟದಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಆಕಾಂಕ್ಷಿತರನ್ನು ನಾಮಪತ್ರ ಸಲ್ಲಿಸುವಂತೆ ತಿಳಿಸಿದ್ದೇವೆ. ನಾಮಪತ್ರ ವಾಪಸ್ ಪಡೆಯಲು ಕಾಲಾವಕಾಶ ಇರುವುದರಿಂದ ಅಭ್ಯರ್ಥಿಗಳನ್ನು ಅಖೈರುಗೊಳಿಸುವ ಕೆಲಸವನ್ನು ಎರಡು ಪಕ್ಷಗಳ ಮುಖಂಡರು ಸೇರಿ ನಾಮಪತ್ರ ಹಿಂಪಡೆಯುವ ದಿನದಂದು ಮಾಡುತ್ತೇವೆ. ಬಿಜೆಪಿ - ಜೆಡಿಎಸ್ ನಾಯಕರು ಮೈತ್ರಿ ಕುರಿತು ಮಾತನಾಡಿ ಒಂಡಂಬಡಿಕೆ ಮಾಡಿಕೊಂಡಿದ್ದೇವೆ. ಪ್ರಾಂತ್ಯ ಮತ್ತು ಜಾತಿವಾರು ಅವಕಾಶ ನೀಡುವ ಜೊತೆಗೆ ಹೊಸ ಮುಖಗಳಿಗೆ ಅವಕಾಶ ನೀಡಿ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿ ಅಂತಿಮವಾಗಿಸುವ ಕೆಲಸ ಮಾಡಲಿದ್ದೇವೆ ಎಂದು ಎ.ಮಂಜುನಾಥ್ ತಿಳಿಸಿದರು.ಹಿರಿಯ ಮುಖಂಡರಾದ ಎಚ್.ಎಲ್.ಚಂದ್ರು, ಚಿಕ್ಕಣ್ಣಯ್ಯ, ಶೇಷಪ್ಪ, ಸೋಮೇಗೌಡ ಸೇರಿದಂತೆ ಪ್ರಮುಖರ ಮಾರ್ಗದರ್ಶನದಲ್ಲಿ ಸಂಘದ ಚುನಾವಣೆ ಎದುರಿಸಲಿದ್ದು, 12 ಸ್ಥಾನಗಳನ್ನು ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ. ಎಲ್ಲ ಸದಸ್ಯರು ಮೈತ್ರಿ ಅಭ್ಯರ್ಥಿಗಳ ಬೆಂಬಲಕ್ಕೆ ನಿಲ್ಲಲಿದ್ದಾರೆ. ಸೊಸೈಟಿಗೆ ಹೊಸ ಕಟ್ಟಡ, ಗೋದಾಮು, ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಬೇಕು. ಇವುಗಳು ಸಾಕಾರವಾಗಬೇಕಾದರೆ ಸಹಕಾರಿಗಳು ಮೈತ್ರಿ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಬೆಂಬಲಕ್ಕೆ ನಿಂತು ಮತ ನೀಡಿ ಆಯ್ಕೆ ಮಾಡುವ ಕೆಲಸ ಮಾಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜು, ಸದಸ್ಯರಾದ ಎಚ್.ಎಸ್.ಲೋಹಿತ್ ಕುಮಾರ್, ಹರೀಶ್ಕುಮಾರ್, ರಮೇಶ್, ಸೋಮಶೇಖರ್ , ಮಾಜಿ ಸದಸ್ಯ ಕುಮಾರ್, ಮುಖಂಡರಾದ ಎಚ್.ಎಲ್.ಚಂದ್ರು, ಚಿಕ್ಕಣ್ಣಯ್ಯ, ಲಕ್ಷ್ಮಿ ನಾರಾಯಣ್, ನರಸಿಂಹಯ್ಯ, ಆನಂದ್, ಜಗದೀಶ್, ಶೇಷಪ್ಪ, ಮಂಜುನಾಥ್, ಪಾಪಣ್ಣ, ರಾಮಣ್ಣ, ರಮೇಶ್ , ಬಿಜೆಪಿ ಮುಖಂಡರಾದ ರವೀಶ್, ಬಾಳೆಮಂಡಿ ಶಿವಣ್ಣ, ನೇತ್ರಾವತಿ, ಶಿವನಂಜಯ್ಯ ಮತ್ತಿತರರು ಹಾಜರಿದ್ದರು.
ಕೈ ತೊರೆದು ದಳಕ್ಕೆ ಸೇರ್ಪಡೆ
ಆಪರೇಷನ್ ಹಸ್ತಕ್ಕೆ ಒಳಗಾಗಿ ಜೆಡಿಎಸ್ ನ ಕೆಲ ಮುಖಂಡರು ಶಾಸಕ ಬಾಲಕೃಷ್ಣರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆದರೀಗ ಜೆಡಿಎಸ್ ಪಕ್ಷ ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡಿದ್ದ ನಿತ್ಯಾನಂದ ಮತ್ತು ಪದ್ಮನಾಭ ಅವರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇಷ್ಟೇ ಅಲ್ಲದೆ, ನಿತ್ಯಾನಂದ ಅವರನ್ನು ಸಾಲಗಾರರಲ್ಲದ ಕ್ಷೇತ್ರದಿಂದ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ.
ಒಟ್ಟು 40 ನಾಮಪತ್ರ
---------------------------------
ಬಿಡದಿ ಸೊಸೈಟಿ ಚುನಾವಣೆಯಲ್ಲಿ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ ಜೆಡಿಎಸ್ - ಬಿಜೆಪಿ ಮೈತ್ರಿ ಬೆಂಬಲಿತ ಅಭ್ಯರ್ಥಿಗಳು ಮಾಜಿ ಶಾಸಕ ಎ.ಮಂಜುನಾಥ್ ಹಾಗೂ ಮುಖಂಡರೊಂದಿಗೆ ಇರುವುದು.
------------------------------