- 4 ದಿನಗಳ ಮೇಳದಲ್ಲಿ ಲಿಂ. ಗುರುಗಳ ಪುಣ್ಯಸ್ಮರಣೆ । ಕೃಷಿ ಉಪಕರಣಗಳ ಮಾಹಿತಿ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದ ಸುಕ್ಷೇತ್ರ ಹಿರೇಕಲ್ಮಠದ ಲಿಂಗೈಕ್ಯ ಗುರುಗಳ ಪುಣ್ಯಸ್ಮರಣೆ, ಧಾರ್ಮಿಕ ಸಭೆ ಹಾಗೂ ರಾಜ್ಯಮಟ್ಟದ ಕೃಷಿಮೇಳ ಯಶಸ್ವಿಗೆ ಅವಳಿ ತಾಲೂಕಿಗಳ ಭಕ್ತರು ಹಾಗೂ ಪಕ್ಷಾತೀತವಾಗಿ ಎಲ್ಲರೂ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಮಂಗಳವಾರ ಹಿರೇಕಲ್ಮಠದ ಆವರಣದಲ್ಲಿ ಫೆ 27, 28 ಹಾಗೂ ಮಾರ್ಚ 1, ಮತ್ತು 2ರಂದು ನಡೆಯಲಿರುವ ರಾಜ್ಯ ಮಟ್ಟದ ಕೃಷಿ ಮೇಳಕ್ಕಾಗಿ ನಿರ್ಮಿಸಲಾಗುತ್ತಿರುವ ಬೃಹತ್ ಪೆಂಡಾಲ್ನಲ್ಲಿ ಜನಪ್ರತಿನಿಧಿಗಳು, ಕಾರ್ಯಕ್ರಮಗಳ ಬಗ್ಗೆ ಶ್ರೀಗಳ ನೇತೃತ್ವದಲ್ಲಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ ಮಾತನಾಡಿ, ಹಿರೇಕಲ್ಮಠದಲ್ಲಿ ಭಕ್ತರಿಗಾಗಿ ಏನೇ ಕಾರ್ಯಕ್ರಮಗಳನ್ನು ಮಾಡಿದ್ದರೂ ಅದು ವ್ಯವಸ್ಥಿತವಾಗಿ ನಡೆಯುತ್ತದೆ. ಅದಕ್ಕೆ ತಾಜಾ ಉದಾಹರಣೆ ಸಮ್ಮೇಳನ ಆಯೋಜನೆಯ ಸಮಯ ಕಡಿಮೆ ಇದ್ದರೂ ಈಗಾಗಲೇ ಸಾಕಷ್ಟು ಕೆಲಸಗಳು ಮುಗಿದಿರುವುದು. ಅದಕ್ಕೆ ಶ್ರೀಮಠದ ಹಿರಿಯ ಗುರುಗಳ ಆಶೀರ್ವಾದವಿದೆ ಎಂದರು.
ಸರ್ಕಾರದ ಮಟ್ಟದಲ್ಲಿ ರೈತ ಯೋಜನೆಗಳು, ಹೊಸ ಆವಿಷ್ಕಾರದ ಕೃಷಿ ಪರಿಕರಗಳ ಪರಿಚಯ ದೊರೆಯಲಿದೆ. ಇದರಿಂದ ರೈತರು ವ್ಯವಸಾಯ ಪದ್ಧತಿ ಮತ್ತಷ್ಟು ಸರಳೀಕರಣಗೊಳಿಸಿ ಹೆಚ್ಚು ಆಹಾರ ಧಾನ್ಯ, ಬೆಳೆಗಳ ಬೆಳೆಯಲು ನೆರವಾಗುವುದು. ಲಾಭವೂ ಸಿಗುವುದು. ಈ ನಿಟ್ಟಿನಲ್ಲಿ ನಾವು ರೈತರಿಗಾಗಿ ಕೃಷಿಮೇಳ ಯೋಜಿಸಿದ್ದೇವೆ ಎಂದರು.ಬಯಲುಸೀಮೆ ಪ್ರದೇಶಾಭಿೃದ್ದಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ಮಠದಲ್ಲಿ ನಡೆಯುವ ಧಾರ್ಮಿಕ ಹಾಗೂ ಕೃಷಿಮೇಳಕ್ಕೆ ವಿವಿಧ ಮಠಾಧೀಶರು,ಮಂತ್ರಿಗಳು ಹಾಗೂ ಜಿಲ್ಲೆಯ ಹಾಲಿ, ಮಾಜಿ ಸಂಸದರು, ಶಾಸಕರು ಆಗಮಿಸಲಿದ್ದಾರೆ ಎಂದರು.
ಸ್ವಾಭಿಮಾನಿ ಬಳಗ ಅಧ್ಯಕ್ಷ ಜಿ.ಬಿ. ವಿನಯಕುಮಾರ್ ಮಾತನಾಡಿ, ನಾಡಿನಾದ್ಯಂತ ಲಕ್ಷಾಂತರ ಭಕ್ತರನ್ನು ಹೊಂದಿರುವ ಹಿರೇಕಲ್ಮಠದಲ್ಲಿ ರೈತರ ಹಿತಕಾಯುವ ಕೃಷಿ ಮೇಳ ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ. ಕೇವಲ ಧರ್ಮದ ಬಗ್ಗೆ ಆಶೀರ್ವಾದ ನೀಡುವ ಶ್ರೀಮಠಗಳ ನಡುವೆ ರೈತರ ಉದ್ಧಾರಕ್ಕೆ ಹಿರೇಕಲ್ಮಠ ಕೃಷಿಮೇಳ ಹಮ್ಮಿಕೊಂಡಿರುವುದು ಶ್ರೀಗಳ ದಿಟ್ಟಹೆಜ್ಜೆ ಎಂದರು.ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರ ಎಂ.ಪಿ. ರಾಜು, ಎಚ್.ಎ.ಉಮಾಪತಿ, ಪುರಸಭೆ ಮಾಜಿ ಸದಸ್ಯ ಸುರೇಶ್ ಹೊಸಕೇರಿ ಮಾತನಾಡಿದರು.
ರೈತ ಮುಖಂಡರಾದ ಭರ್ಮಪ್ಪ, ಬಸಪ್ಪ, ಬಸವರಾಜಪ್ಪ, ಬೆನಕನಹಳ್ಳಿ ವೀರಣ್ಣ, ಕನ್ನಡಪರ ಸಂಘಟನೆಗಳ ಮುಖಂಡರಾದ ರಾಜು ಕಣಗಣ್ಣಾರ್, ಮಂಜುನಾಥ್, ಮನೋಜ್ ವಾಲಜ್ಜಿ, ಪ್ರಶಾಂತ್ ಬಣ್ಣಜ್ಜಿ, ವಿನಯ್ ವಗ್ಗರ್, ಸುರೇಶ್ ಹಾಗೂ ಇತರರು ಇದ್ದರು.- - -
-24ಎಚ್.ಎಲ್.ಐ1.ಜೆಪಿಜಿ: ರಾಜ್ಯ ಮಟ್ಟದ ಕೃಷಿ ಮೇಳದ ಬೃಹತ್ ಪೆಂಡಾಲ್ ಪರಿಶೀಲನೆ ವೇಳೆ ಶಾಸಕ ಡಿ.ಜಿ.ಶಾಂತನಗೌಡ ಮೇಳದ ಕುರಿತು ಮಾತನಾಡಿದರು. ಹಿರೇಕಲ್ಮಠದ ಶ್ರೀ, ಎಚ್.ಬಿ.ಮಂಜಪ್ಪ, ಜಿ.ಬಿ.ವಿನಯಕುಮಾರ್, ಎಂ.ಪಿ.ರಾಜು, ಎಚ್.ಎ.ಉಮಾಪತಿ ಇತರರಿದ್ದರು.