ಮಹಾವೀರರ ಜಯಂತಿ ಅಂಗವಾಗಿ ಅಹಿಂಸಾ ನಡಿಗೆ

KannadaprabhaNewsNetwork |  
Published : Mar 23, 2026, 02:30 AM IST
ಹುಬ್ಬಳ್ಳಿಯಲ್ಲಿ ದಿಗಂಬರ ಜೈನ್‌ ಮಹಿಳಾ ಸಮಾಜ ಹುಬ್ಬಳ್ಳಿ ವತಿಯಿಂದ ಭಾನುವಾರ ಆಯೋಜಿಸಿದ್ದ ಅಹಿಂಸಾ ನಡಿಗೆಗೆ ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಾಮಾಣೀಕರಣ ಸಂಸ್ಥೆಯ ರಾಜ್ಯ ಅಧ್ಯಕ್ಷೆ ಲಾವಣ್ಯ ಬಳ್ಳಾಲ್‌, ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಸಿಎಚ್‌ ವಿ.ಎಸ್‌.ವಿ. ಪ್ರಸಾದ ಹಾಗೂ ಗಣ್ಯರು ಚಾಲನೆ ನೀಡಿದರು. | Kannada Prabha

ಸಾರಾಂಶ

ಭಗವಾನ್‌ ಮಹಾವೀರರ ಜಯಂತಿ ಅಂಗವಾಗಿ ಭಾನುವಾರ ದಿಗಂಬರ ಜೈನ್‌ ಮಹಿಳಾ ಸಮಾಜ ಹುಬ್ಬಳ್ಳಿ ವತಿಯಿಂದ ನಗರದಲ್ಲಿ ಅಹಿಂಸಾ ನಡಿಗೆ ಜರುಗಿತು.

ಹುಬ್ಬಳ್ಳಿ: ಭಗವಾನ್‌ ಮಹಾವೀರರ ಜಯಂತಿ ಅಂಗವಾಗಿ ಭಾನುವಾರ ದಿಗಂಬರ ಜೈನ್‌ ಮಹಿಳಾ ಸಮಾಜ ಹುಬ್ಬಳ್ಳಿ ವತಿಯಿಂದ ನಗರದಲ್ಲಿ ಅಹಿಂಸಾ ನಡಿಗೆ ಜರುಗಿತು.

ನಗರದ ಚೆನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡ ಸಮಾಜ ಬಾಂಧವರು ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಅಹಿಂಸಾ ಧ್ವಜದ ಲಾಂಛನ ಮತ್ತು ಸಂದೇಶವನ್ನು ಸಾರುವ ಘೋಷ ವಾಕ್ಯಗಳನ್ನು ಹಿಡಿದು ಶಾಂತಿಯ ಸಂದೇಶ ಸಾರಿದರು. ಚೆನ್ನಮ್ಮ ವೃತ್ತದಿಂದ ಆರಂಭವಾದ ನಡಿಗೆ ಮಹಾವೀರ ಗಲ್ಲಿಗೆ ಆಗಮಿಸಿ ಮುಕ್ತಾಯಗೊಂಡಿತು.

ಅದಕ್ಕೂ ಮುನ್ನ ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಾಮಾಣೀಕರಣ ಸಂಸ್ಥೆಯ ರಾಜ್ಯಾಧ್ಯಕ್ಷೆ ಲಾವಣ್ಯ ಬಳ್ಳಾಲ್‌ ಅಹಿಂಸಾ ನಡಿಗೆಗೆ ಚಾಲನೆ ನೀಡಿ ಮಾತನಾಡಿ, ಅಹಿಂಸಾ ಧರ್ಮ ಪಾಲನೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಪ್ರಾಣಿ, ಪಕ್ಷಿಗಳಿಗೆ ನೀರು ಇಟ್ಟು ಪ್ರಾಣಿ ದಯೆ ಪಾಲಿಸಬೇಕು. ಎಲ್ಲರೂ ವಿಶ್ವಶಾಂತಿಗಾಗಿ ಪ್ರಾರ್ಥಿಸುವಂತೆ ಕರೆ ನೀಡಿದರು.

ಅತಿಥಿಗಳಾಗಿ ಆಗಮಿಸಿದ್ದ ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಸಿಎಚ್‌ ವಿ.ಎಸ್‌.ವಿ. ಪ್ರಸಾದ ಮಾತನಾಡಿ, ದೇಶದಲ್ಲಿ ಬಹಳಷ್ಟು ಜಾತಿ, ಮತಗಳು ಇದ್ದರೂ ಪ್ರತಿಯೊಬ್ಬರೂ ಅಹಿಂಸೆಗೆ ತಲೆ ಬಾಗಲೇಬೇಕು. ಬಹುತೇಕ ಎಲ್ಲ ಧರ್ಮಗಳು ಅಹಿಂಸೆಯನ್ನೇ ಸಾರುತ್ತವೆ. ಹುಬ್ಬಳ್ಳಿಯ ದಿಗಂಬರ ಜೈನ ಮಹಿಳಾ ಸಮಾಜದಿಂದ ಜನತೆಗೆ ಅಹಿಂಸೆ ಸಂದೇಶ ಸಾರಲು ಹಮ್ಮಿಕೊಂಡಿರುವ ಅಹಿಂಸಾ ನಡಿಗೆ ಮಾದರಿಯಾಗಿದೆ ಎಂದರು.

ಮುಖಂಡ ಮಹೇಂದ್ರ ಸಿಂಘಿ ಮಾತನಾಡಿ, ಭಗವಾನ್‌ ಮಹಾವೀರರ ಸಂದೇಶ ಸರ್ವ ಧರ್ಮಕ್ಕೆ ಅವಶ್ಯವಾಗಿದೆ. ಪ್ರೀತಿ, ಅಹಿಂಸೆಯಿಂದ ಜಗತ್ತನ್ನು ಗೆಲ್ಲಬಹುದು ಎಂದು ಮಹಾವೀರರು ಸಾರಿದ್ದಾರೆ. ದಿಗಂಬರ ಜೈನ ಮಹಿಳಾ ಸಮಾಜ ಪ್ರತಿ ವರ್ಷ ಹುಬ್ಬಳ್ಳಿಯಲ್ಲಿ ಅದ್ಬುತ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ ಎಂದರು.

ಈ ಸಂದರ್ಭದಲ್ಲಿ ಸುಭಾಷಸಿಂಗ್‌ ಜಮಾದಾರ, ಭುಜಬಲಿ ಮಾಲಗತ್ತಿ, ಪಂಕಜ್‌ ಎಂ., ಉದಯ್‌ ರೋಖಡೆ, ಬ್ರಹ್ಮಕುಮಾರ ಬೀಳಿಗಿ , ಚಂದನ ಜವಳಿ, ಆಶಾ ಬಾಗಿ, ಉದಯ್‌ ಧಡೋತಿ ಸೇರಿದಂತೆ ಹಲವರಿದ್ದರು. ಸಂಘದ ಅಧ್ಯಕ್ಷೆ ತ್ರಿಶಲಾ ಮಾಲಗತ್ತಿ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತದ ಗುರು-ಶಿಷ್ಯ ಪರಂಪರೆ ಜಗತ್ತಿನಲ್ಲಿಯೇ ಶ್ರೇಷ್ಠ: ಚಕ್ರವರ್ತಿ ಸೂಲಿಬೆಲೆ
ನೀತಿ, ನಿಯಮ ಇಲ್ಲದೆ ಸಮಾಜ, ನಾಡು ಬೆಳೆಯದು: ರಂಭಾಪುರಿ ಶ್ರೀ