ಶಿಗ್ಗಾಂವಿ: ಸಮಾಜ ಸೇವೆ ಮಾಡಬೇಕು ಎನ್ನುವ ಮನಸ್ಸು ಕೆಲವೇ ಕೆಲವು ಜನರಲ್ಲಿ ಇರುತ್ತದೆ. ಅದು ಎಲ್ಲರಿಗೂ ಬರುವುದಿಲ್ಲ ಎಂದು ಡಾ. ಶರೀಫ ಮಾಕಪ್ಪನವರ ಹೇಳಿದರು.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬಾಲ್ಯದ ದಿನಗಳಲ್ಲಿ ವಿದ್ಯಾಭ್ಯಾಸ ಮಾಡಲು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಿ ಕಷ್ಟ ಪಟ್ಟು ಸಾಧನೆ ಮಾಡಿದರು. ಈ ದೇಶಕ್ಕೆ ಸಂವಿಧಾನ ರಚನೆ ಮಾಡಿದರು. ಅವರ ಸಾಧನೆಯ ಹಾದಿ ಮತ್ತು ಆದರ್ಶ ಗುಣಗಳನ್ನು ಇಂದಿನ ಮಕ್ಕಳು ಹಾಗೂ ಯುವಕರು ಅಳವಡಿಸಿಕೊಳ್ಳಬೇಕು ಎಂದರು.
ಇಂದು ಸಮಾಜದಲ್ಲಿ ಬಡವರು, ನಿರ್ಗತಿಕರು ಸಾಕಷ್ಟು ಸಮಸ್ಯೆಗಳಿಂದ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಸಮಸ್ಯೆ ಅನುಭವಿಸುತ್ತಿದ್ದಾರೆ ಹಾಗಾಗಿ ಇಂತಹ ಮಕ್ಕಳಿಗೆ ಬಡವರಿಗೆ ಅನುಕೂಲ ಆಗಬೇಕೆಂಬ ಉದ್ದೇಶದಿಂದ ಹನಮಂತಪ್ಪ ಕಾಳೆ ಅವರು ಪ್ರತಿ ವರ್ಷ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಪ್ರತಿ ವರ್ಷ ಹುಲಗೂರ್ ಗ್ರಾಮದ ಎಲ್ಲ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ಲೇಖನ ಸಾಮಗ್ರಿಗಳನ್ನು ನೀಡುತ್ತಾ ಬಂದಿದ್ದಾರೆ. ಇಂದು ಶಾಲೆಗಳು ಪುನರಾರಂಭವಾಗಿದ್ದರಿಂದ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ನು ವಿತರಣೆ ಮಾಡಿದ್ದಾರೆ. ಅವರಿಗೆ ಅಭಿನಂದನೆಗಳು ಎಂದರು.ಚಲವಾದಿ ಮಹಾಸಭಾ ತಾಲೂಕು ಅಧ್ಯಕ್ಷರಾದ ಪ್ರಮೋದ್ ಚಲವಾದಿ ಮಾತನಾಡಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ ಅವಕಾಶ ನೀಡಿದ್ದಾರೆ. ಅವರು ಇಂಥಹ ಅವಕಾಶ ನೀಡದೆ ಹೋಗಿದ್ದಾರೆ ನಾವು ಇಂದು ಇಲ್ಲಿ ಸ್ವತಂತ್ರವಾಗಿ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ, ಅಂತಹ ಪುಣ್ಯಾತ್ಮನ ಕೆಲಸವನ್ನು ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಣೆ ಮಾಡುವುದರ ಮೂಲಕ ಹನಮಂತಪ್ಪ ಕಾಳೆ ಅವರು ಮಹನೀಯರನ್ನು ನೆನೆಯುವ ಕೆಲಸ ಮಾಡುತ್ತಿರುವದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಹುಲಗೂರಿನ ಮುಖಂಡರಾದ ಗೊಯ್ಯಪ್ಪ ಚಲವಾದಿ, ಪ್ರೀತಮ್ ಅರಳಿಕಟ್ಟಿ, ಶ್ರೀಕಾಂತ್ ಹೊನ್ನಳ್ಳಿ, ಲಿಂಗರಾಜ್ ಬೋರಣ್ಣವರ, ಲಕ್ಷ್ಮಣ ಬಾಲಪ್ಪನವರ, ಗಿರೀಶ ಮರಿಯಮ್ಮನವರ, ಕರೆಪ್ಪ ಬಾಲಪ್ಪನವರ, ಹಾಗೂ ಶಾಲೆಯ ಶಿಕ್ಷಕರು ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.