ರಾಜಕಾರಣದ ಅನುಭವಕ್ಕೆ ಇನ್ನೂ ವಯಸ್ಸಾಗಿಲ್ಲ

KannadaprabhaNewsNetwork |  
Published : Jan 01, 2026, 02:15 AM IST
31ಕೆಆರ್ ಎಂಎನ್ 3.ಜೆಪಿಜಿಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಹಾಜಿ ಸೈಯದ್ ಜಿಯಾವುಲ್ಲಾ ಅವರೊಂದಿಗೆ ಫಲಾನುಭವಿಗಳು ಕಲರ್ ಜೆರಾಕ್ಸ್ ಹಕ್ಕುಪತ್ರಗಳನ್ನು ಪ್ರದರ್ಶಿಸಿದರು. | Kannada Prabha

ಸಾರಾಂಶ

ರಾಮನಗರ: ನನಗೆ ವಯಸ್ಸಾಗಿದೆ ನಿಜ. ಆದರೆ, ಬಡ ಜನರ ಕಷ್ಟಕ್ಕೆ ಸ್ಪಂದಿಸುವ ತುಡಿತಕ್ಕೆ ಮತ್ತು ರಾಜಕಾರಣದ ಅನುಭವಕ್ಕೆ ಇನ್ನೂ ವಯಸ್ಸಾಗಿಲ್ಲ. ಬೀಡಿ ಕಾರ್ಮಿಕರಿಗೆ ಅಸಲಿ ಹಕ್ಕುಪತ್ರ ಸಿಗುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅವರಿಗೆ ಕೆಪಿಸಿಸಿ ಉಪಾಧ್ಯಕ್ಷ ಹಾಜಿ ಸೈಯದ್ ಜಿಯಾವುಲ್ಲಾ ತಿರುಗೇಟು ನೀಡಿದರು.

ರಾಮನಗರ: ನನಗೆ ವಯಸ್ಸಾಗಿದೆ ನಿಜ. ಆದರೆ, ಬಡ ಜನರ ಕಷ್ಟಕ್ಕೆ ಸ್ಪಂದಿಸುವ ತುಡಿತಕ್ಕೆ ಮತ್ತು ರಾಜಕಾರಣದ ಅನುಭವಕ್ಕೆ ಇನ್ನೂ ವಯಸ್ಸಾಗಿಲ್ಲ. ಬೀಡಿ ಕಾರ್ಮಿಕರಿಗೆ ಅಸಲಿ ಹಕ್ಕುಪತ್ರ ಸಿಗುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅವರಿಗೆ ಕೆಪಿಸಿಸಿ ಉಪಾಧ್ಯಕ್ಷ ಹಾಜಿ ಸೈಯದ್ ಜಿಯಾವುಲ್ಲಾ ತಿರುಗೇಟು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ನನಗೆ ವಯಸ್ಸಾಗಿದೆ. ಜನರ ದಿಕ್ಕು ತಪ್ಪಿಸುವುದು ಬೇಡ ಎಂದು ಹೇಳಿದ್ದಾರೆ. ಈ ಮಾತನ್ನು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಹೇಳಲಿ. ನಾನು ಬಡ ಜನರಿಗೆ ಹಕ್ಕು ಕೊಡಿಸಲಷ್ಟೆ ರಸ್ತೆಗಿಳಿಯುವುದಾಗಿ ಹೇಳಿದ್ದೇನೆಯೇ ಹೊರತು ನಿಮ್ಮಂತೆ ಪ್ರಚಾರದ ಗೀಳಿನಿಂದಲ್ಲ ಎಂದು ಟೀಕಿಸಿದರು.

ಬೀಡಿ ಕಾರ್ಮಿಕರು ತ್ರಿಶಂಕು ಸ್ಥಿತಿಗೆ ಸಿಲುಕಲು ನಗರಸಭೆಯಲ್ಲಿ ಆಡಳಿತ ನಡೆಸುತ್ತಿರುವವರು ಕಾರಣವೇ ಹೊರತು ಮತ್ಯಾರು ಅಲ್ಲ. ರಾಜೀವ್ ಗಾಂಧಿ ವಸತಿ ನಿಗಮವು 489 ಹಕ್ಕುಪತ್ರಗಳನ್ನು ನಗರಸಭೆಗೆ ಹಸ್ತಾಂತರ ಮಾಡಿತ್ತು. ಇದರಲ್ಲಿ 35 ಫಲಾನುಭವಿಗಳು 40 ಸಾವಿರ ಸಾಲ ಮರುಪಾವತಿಸಿದ ಕಾರಣ ಹಕ್ಕುಪತ್ರವನ್ನು ನೇರವಾಗಿ ವಿತರಿಸಲಾಗಿದೆ. ಉಳಿದ 454 ಫಲಾನುಭವಿಗಳು ಸಾಲ ಮರುಪಾವತಿ ಮಾಡಿದ ಮೇಲೆ ಹಕ್ಕುಪತ್ರಗಳನ್ನು ನೀಡುವಂತೆ ನಗರಸಭೆ ಕಚೇರಿಗೆ ಹಸ್ತಾಂತರ ಮಾಡಿದ್ದರು.

ಈ ಮಧ್ಯೆ ರಾಜ್ಯಸರ್ಕಾರವೇ ಫಲಾನುಭವಿಗಳ 40 ಸಾವಿರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಿತು. ಆದರೂ, ನಗರಸಭೆ ಹಕ್ಕುಪತ್ರಗಳನ್ನು ನೀಡಲು ವಿಳಂಬ ಧೋರಣೆ ಅನುಸರಿಸಿತು. ಅಸಲಿ ಹಕ್ಕುಪತ್ರಗಳು ಕಳುವಾಗಿದೆ ಎಂದು ಸಬೂಬು ಹೇಳಿ ನಗರಸಭೆ ಅಧಿಕಾರಿಗಳು, ನನ್ನಲ್ಲಿದ್ದ ಜೆರಾಕ್ಸ್ ಪ್ರತಿಗಳನ್ನು ಪಡೆದು ಅವುಗಳನ್ನೇ ಕಲರ್ ಜೆರಾಕ್ಸ್ ಮಾಡಿ ಫಲಾನುಭವಿಗಳಿಗೆ ಹಂಚಿ ದಿಕ್ಕು ತಪ್ಪಿಸಿದ್ದಾರೆ. ಇದರಿಂದ ಅಸಲಿ ಹಕ್ಕು ಪತ್ರವೂ ಇಲ್ಲದೆ ಖಾತೆಯನ್ನು ಮಾಡಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಬಡವರು ಸಿಲುಕಿದ್ದಾರೆ ಎಂದು ಕಿಡಿಕಾರಿದರು.

ವಿವೇಚನ ರಹಿತ ಮಾತು ಹಾಸ್ಯಾಸ್ಪದ:

ಬೀಡಿ ಕಾರ್ಮಿಕರ ಕಾಲೋನಿ ಇರುವ ಶಿಡ್ಲಕಲ್ಲು ಸರ್ವೆ ನಂಬರ್ ಗಳು ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ಇಲ್ಲವೆಂದು ಹೇಳುತ್ತಾರೆ. ಮತ್ತೊಂದೆಡೆ ಹುಣಸನಹಳ್ಳಿ ಗ್ರಾಮ ಪಂಚಾಯಿತಿ ತಮಗೆ ಸೇರುವುದಿಲ್ಲ ಎಂದು ಹಿಂಬರಹ ಕೊಡುತ್ತಾರೆ. ಆದರೆ, ಅಲ್ಲಿರುವ ಸರ್ಕಾರಿ ಶಾಲೆ, ಶಾದಿ ಮಹಲ್ , ಆಸ್ಪತ್ರೆಗಳ ನಿರ್ಮಾಣ ಯೋಜನೆಗಳಿಗೆ ನಗರಸಭೆಯೇ ಅನುಮೋದನೆ ನೀಡಿದೆ. ಇಷ್ಟಾದರೂ ನಗರಸಭೆ ಅಧ್ಯಕ್ಷರು ವಿವೇಚನ ರಹಿತವಾಗಿ ಮಾತನಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.

ಬೀಡಿ ಕಾರ್ಮಿಕರ ಹಕ್ಕು ಪತ್ರಗಳ ವಿಚಾರವಾಗಿ ಶಾಸಕ ಇಕ್ಬಾಲ್ ಹುಸೇನ್ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸುತ್ತೇನೆ. ಶಾಸಕರು ನನ್ನೊಂದಿಗೆ ಸಂಬಂಧಿಸಿದ ಸಚಿವರ ಜೊತೆ ಚರ್ಚಿಸಿದರೆ ಹತ್ತು ನಿಮಿಷಗಳಲ್ಲಿ ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳಿದರು.

ನಮ್ಮದೇ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದ್ದು, ನಗರಸಭೆಯಲ್ಲಿಯೂ ಆಡಳಿತ ನಡೆಸುತ್ತಿದೆ. ಅದರ ವಿರುದ್ಧ ಹೋರಾಟ ನಡೆಸಲು ನನಗೂ ಮನಸ್ಸಿಲ್ಲ. ಆದರೆ, ರಾಜೀವ್ ಗಾಂಧಿ ವಸತಿ ನಿಗಮದಿಂದ ಹಕ್ಕುಪತ್ರ ವಂಚಿತರಿಗೆ ನ್ಯಾಯ ಕೊಡಿಸಲು ಅನಿವಾರ್ಯವಾದರೆ ಪ್ರತಿಭಟನೆ ಹಾದಿ ಹಿಡಿಯುತ್ತೇವೆ. ಆಗಲೂ ನ್ಯಾಯ ಸಿಗದಿದ್ದರೆ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಾಗಿ ಎಚ್ಚರಿಸಿದರು.

ಬೀಡಿ ಕಾಲೋನಿಯಲ್ಲಿ ಕೇವಲ ಒಂದು ವಾರ ಮಾತ್ರ ಕಸ ವಿಲೇವಾರಿ ಪ್ರಕ್ರಿಯೆ ನಡೆಯಿತು. ಈಗಲೂ ಅಲ್ಲಿ ಕಸದ ರಾಶಿ ಇದ್ದು, ಜನರು ಅನಾರೋಗ್ಯಪೀಡಿತರಾಗುವ ಭಯದಲ್ಲಿ ಬದುಕು ನಡೆಸುತ್ತಿದ್ದಾರೆ. ಆದರೆ, ನಗರಸಭೆ ಅಧ್ಯಕ್ಷರು ಮಾನವೀಯತೆ ದೃಷ್ಟಿಯಿಂದ ಬೀಡಿ ಕಾಲೋನಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ.

ಮನೆಯ ಜೊತೆಗೆ ಬೀದಿ ಬಡಾವಣೆ ಸ್ವಚ್ಚವಾಗಿರಬೇಕು ಆಗ ಮಾತ್ರ ಆರೋಗ್ಯವಂತ ನಗರ ನಿರ್ಮಾಣ ಮಾಡಲು ಸಾಧ್ಯ. ನಾನು ಪುರಸಭೆಗೆ ಅಧ್ಯಕ್ಷನಾಗಿದ್ದಾಗ ಬಡವರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದೇನೆ. ಅಧಿಕಾರದ ಅವಕಾಶ ಸಿಗುವುದು ಅಪರೂಪ. ಸಿಕ್ಕ ಅವಕಾಶದಲ್ಲಿ ಜನರ ಪರವಾಗಿ ಕೆಲಸ ಮಾಡಬೇಕು ಎಂದು ಜಿಯಾವುಲ್ಲಾ ಮಾರ್ಮಿಕವಾಗಿ ನುಡಿದರು.

ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಮಹಮ್ಮದ್ ಇಸ್ಮಾಯಿಲ್ , ಮುಖಂಡರಾದ ಅತಾವುಲ್ಲಾ, ಫಲಾನುಭವಿಗಳು ಹಾಗೂ ಬೀಡಿ ಕಾರ್ಮಿಕರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ಪದಾಧಿಕಾರಿಗಳು ಇದ್ದರು.

ಕೋಟ್ .............

ಶಾಸಕ ಇಕ್ಬಾಲ್ ಹುಸೇನ್ ರಾಮನಗರ ಕ್ಷೇತ್ರದ ಪ್ರಥಮ ಪ್ರಜೆ. ಅವರನ್ನೇ ಸಾರ್ವಜನಿಕವಾಗಿ ನಿಂದಿಸುವಂತೆ ಏರು ಧ್ವನಿಯಲ್ಲಿ ಮಾತನಾಡುವುದು ಎಷ್ಟು ಸರಿ. ಪ್ರತಿಯೊಬ್ಬರಿಗೂ ಅವರದೆ ಆದ ವ್ಯಕ್ತಿತ್ವ ಮತ್ತು ಜನಪ್ರಿಯತೆ ಇರುತ್ತದೆ. ಇದನ್ನು ತಿಳಿದು ಸಾರ್ವಜನಿಕವಾಗಿ ವರ್ತನೆ ಮಾಡಬೇಕು. ಇದು ನಗರದ ಪ್ರಥಮ ಪ್ರಜೆಯಾಗಿರುವ ನಗರಸಭೆ ಅಧ್ಯಕ್ಷರಿಗೆ ಅರಿವಿಲ್ಲದಿರುವುದು ನೋವಿನ ಸಂಗತಿ. ಅವರ ನಡವಳಿಕೆ ರಾಜಕಾರಣಿಗಳಿಗೆ ಶೋಭೆ ತರುವುದಿಲ್ಲ.

-ಸೈಯದ್ ಜಿಯಾವುಲ್ಲಾ, ಕೆಪಿಸಿಸಿ ಉಪಾಧ್ಯಕ್ಷರು

31ಕೆಆರ್ ಎಂಎನ್ 3.ಜೆಪಿಜಿ

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಹಾಜಿ ಸೈಯದ್ ಜಿಯಾವುಲ್ಲಾ ಅವರೊಂದಿಗೆ ಫಲಾನುಭವಿಗಳು ಕಲರ್ ಜೆರಾಕ್ಸ್ ಹಕ್ಕುಪತ್ರಗಳನ್ನು ಪ್ರದರ್ಶಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ