ನಾಲ್ಕು ಪ್ರಾಥಮಿಕ ಶಾಲೆ ಪ್ರೌಢಶಾಲೆಗಳಾಗಿ ಉನ್ನತೀಕರಣ

KannadaprabhaNewsNetwork | Updated : Jun 06 2025, 12:53 AM IST
ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ, ಹುಲೇಗುಡ್ಡ ಹಾಗೂ ಕುಕನೂರು ತಾಲೂಕಿನ ದ್ಯಾಂಪುರ, ಸೋಂಪುರದಲ್ಲಿ ನಾಲ್ಕು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಣಗೊಳಿಸಿ ಪ್ರಸಕ್ತ ಸಾಲಿನಿಂದಲೇ ಪ್ರೌಢಶಾಲೆ ಪ್ರಾರಂಭಿಸಲು ಸರ್ಕಾರದಿಂದ ಮಂಜೂರಾತಿ ದೊರಕಿದೆ.

ಪಾಲಾಕ್ಷ ತಿಪ್ಪಳ್ಳಿ

ಯಲಬುರ್ಗಾ:

ಯಲಬುರ್ಗಾ ಹಾಗೂ ಕುಕನೂರು ತಾಲೂಕಿನ ೪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಯನ್ನಾಗಿ ಉನ್ನತೀಕರಣಗೊಳಿಸುವಂತೆ ಸಿಎಂ ಆರ್ಥಿಕ ಸಲಹೆಹಾರ, ಶಾಸಕ ಬಸವರಾಜ ರಾಯರಡ್ಡಿ ಅವರ ಬೇಡಿಕೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ, ಹುಲೇಗುಡ್ಡ ಹಾಗೂ ಕುಕನೂರು ತಾಲೂಕಿನ ದ್ಯಾಂಪುರ, ಸೋಂಪುರದಲ್ಲಿ ನಾಲ್ಕು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಣಗೊಳಿಸಿ ಪ್ರಸಕ್ತ ಸಾಲಿನಿಂದಲೇ ಪ್ರೌಢಶಾಲೆ ಪ್ರಾರಂಭಿಸಲು ಸರ್ಕಾರದಿಂದ ಮಂಜೂರಾತಿ ದೊರಕಿದೆ.

ಡಾ. ಡಿ.ಎಂ. ನಂಜುಂಡಪ್ಪ ವರದಿ ಪ್ರಕಾರ ಯಲಬುರ್ಗಾ ಕ್ಷೇತ್ರ ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದ ಪ್ರದೇಶ. ಹೀಗಾಗಿ ಹಿಂದುಳಿದ ಹಣೆಪಟ್ಟಿ ಕಳಚಲು ಹಾಗೂ ಬಡ ವಿದ್ಯಾರ್ಥಿಗಳು ಪ್ರೌಢ ಶಿಕ್ಷಣ ಮೊಟಕುಗೊಳಿಸದಂತೆ ನೋಡಿಕೊಳ್ಳಲು ಪ್ರೌಢಶಾಲೆ ತೆರೆಯಲು ಅವಶ್ಯಕತೆ ಇದೆ ಎಂದು ಸರ್ಕಾರಕ್ಕೆ ಮನವರಿಕೆ ಮಾಡಲು ಬಸವರಾಜ ರಾಯರಡ್ಡಿ ಗಮನ ಸೆಳೆದಿದ್ದರು.

೨೦೨೫-೨೬ನೇ ಪ್ರಸಕ್ತ ವರ್ಷದಿಂದ ಪ್ರೌಢಶಾಲೆ ಪ್ರಾರಂಭಿಸಲು ಈ ಶಾಲೆಗೆ ಬೇಕಾಗುವ ಸಿಬ್ಬಂದಿ ವೇತನ ಮುಂದಿನ ಮೂರು ವರ್ಷಗಳ ವರೆಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಯಲಬುರ್ಗಾ ಕ್ಷೇತ್ರಕ್ಕೆ ಬರುವ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನ ಬಳಕೆ ಮಾಡಕೊಳ್ಳಲು ಅವಕಾಶ ನೀಡಲಾಗಿದೆ. ಜತೆಗೆ ಕಟ್ಟಡ ಪೀಠೋಪಕರಣಕ್ಕೂ ಇದೆ ಅನುದಾನ ಬಳಕೆ ಮಾಡುವಂತೆ ಸೂಚಿಸಲಾಗಿದೆ.

ಕೆಕೆಆರ್‌ಡಿಬಿ ಅನುದಾನದಲ್ಲಿ ಉನ್ನತೀಕರಿಸಿದ ಶಾಲೆಗಳಿಗೆ ೧ ಮುಖ್ಯ ಶಿಕ್ಷಕ, ೫ ಸಹ ಶಿಕ್ಷಕರು, ತಲಾ ಒಂದು ದೈಹಿಕ ಶಿಕ್ಷಕರು, ಎಸ್‌ಡಿಎ, ಗ್ರೂಪ್‌-ಡಿ ಹುದ್ದೆ ಭರ್ತಿ ಮಾಡಿಕೊಳ್ಳಲು ಅವಕಾಶವಿದೆ. ಶಾಲಾ ಕಟ್ಟಡ ನಿರ್ಮಾಣ ಮಾಡಲು ಸ್ಥಳೀಯ ದಾನಿಗಳಿಂದ ಭೂಮಿ ಪಡೆಯಲು ಕೆಕೆಆರ್‌ಡಿಬಿ ಮೈಕ್ರೊ ಯೋಜನೆಯಡಿ ಅನುದಾನ ಕಾಯ್ದಿರಿಸಲಾಗುವುದು. ಶಾಲೆಗಳನ್ನು ಉನ್ನತೀಕರಣಗೊಳಿಸುವುದರಿಂದ ಗ್ರಾಮೀಣ ಮಕ್ಕಳು ಗುಣಾತ್ಮಕ ಶಿಕ್ಷಣ ಪಡೆಯಲು ಅನುಕೂಲವಾಗಲಿದೆ. ಶಾಲೆ ಬಿಡುವ ಮಕ್ಕಳ ಪ್ರಮಾಣ ತಡೆಗಟ್ಟಬಹುದಾಗಿದೆ ಎಂದು ಸರ್ಕಾರದ ನಡಾವಳಿಯಲ್ಲಿ ಉಲ್ಲೇಖಿಸಲಾಗಿದೆ.

ಮುಂದಿನ ದಿನಗಳಲ್ಲಿ ಕೆಕೆಆರ್‌ಡಿಬಿಯಿಂದ ವೆಚ್ಚ ಭರಿಸುವ ಅವಧಿಯು ಮುಕ್ತಾಯಗೊಂಡ ನಂತನ ಪ್ರೌಢಶಾಲೆಗಳನ್ನು ಎಂಎಚ್‌ಆರ್‌ಡಿ ಮಾರ್ಗಸೂಚಿಗಳ ಪ್ರಕಾರ ಹಾಗೂ ವಿದ್ಯಾರ್ಥಿಗಳ ಸಂಖ್ಯಾಬಲದ ಆಧಾರದ ಮೇಲೆ ಮುಂದುವರಿಸಲಾಗವುದು ಹಾಗೂ ಪ್ರತಿವರ್ಷ ಪ್ರೌಢಶಾಲಾ ವಿಭಾಗಗಳನ್ನು ಪರಿಶೀಲನೆಗೆ ಒಳಪಡಿಸುವುದು ಕಡ್ಡಾಯವಾಗಿದೆ.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಣಗೊಳಿಸುವುದರಿಂದ ಗ್ರಾಮೀಣ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಬಹುದು. ರಾಜ್ಯದಲ್ಲಿ ಹೆಚ್ಚು ಪ್ರೌಢಶಾಲೆ ಹೊಂದಿದ ಯಲಬುರ್ಗಾ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪಾಲಕರು ತಮ್ಮ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡಿಸುವ ಮೂಲಕ ಸರ್ಕಾರದ ಕಾರ್ಯಕ್ರಮ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.