ಪುರಾತತ್ವ ಇಲಾಖೆ ಗುಡಿ ಬಳಿ ಅರಣ್ಯ ಕಚೇರಿ: ನೋಟಿಸ್‌

KannadaprabhaNewsNetwork |  
Published : Mar 26, 2026, 01:30 AM IST
ನಿಯಂತ್ರಿತ ಪ್ರದೇಶದ ಅರಣ್ಯ ಕಚೇರಿ ತೆರವುಗೊಳಿಸಿ | Kannada Prabha

ಸಾರಾಂಶ

ಪಟ್ಟಣದ ವಿಜಯ ನಾರಾಯಣಸ್ವಾಮಿ ದೇವಸ್ಥಾನದ ನಿರ್ಬಂಧಿತ ಪ್ರದೇಶದಲ್ಲಿ ಅರಣ್ಯ ಇಲಾಖೆಯು ಕಚೇರಿ ನಿರ್ಮಿಸುತ್ತಿದ್ದು, ಇದು ಕಾನೂನು ಬಾಹಿರ ಮತ್ತು ಪುರಾತತ್ವ ಇಲಾಖೆಯ ನಿಯಮಗಳ ಉಲ್ಲಂಘನೆಯಾಗಿದೆ. ಹೀಗಾಗಿ ಇವುಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಪುರಾತತ್ವ ಇಲಾಖೆಯು ಅರಣ್ಯ ಇಲಾಖೆಗೆ ನೋಟಿಸ್‌ ನೀಡಿದೆ.

- ವಿಜಯನಾರಾಯಣ ಸ್ವಾಮಿ ದೇಗುಲ ಬಳಿ ವಲಯ ಅರಣ್ಯಾಧಿಕಾರಿ ಕಚೇರಿ

- ಕಟ್ಟಡ ನಿರ್ಮಾಣ ಅನಧಿಕೃತ, ಕೆಲಸ ಸ್ಥಗಿತಕ್ಕೆ ಅರಣ್ಯ ಇಲಾಖೆಗೆ ಸೂಚನೆ

---

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಟ್ಟಣದ ವಿಜಯ ನಾರಾಯಣಸ್ವಾಮಿ ದೇವಸ್ಥಾನದ ನಿರ್ಬಂಧಿತ ಪ್ರದೇಶದಲ್ಲಿ ಅರಣ್ಯ ಇಲಾಖೆಯು ಕಚೇರಿ ನಿರ್ಮಿಸುತ್ತಿದ್ದು, ಇದು ಕಾನೂನು ಬಾಹಿರ ಮತ್ತು ಪುರಾತತ್ವ ಇಲಾಖೆಯ ನಿಯಮಗಳ ಉಲ್ಲಂಘನೆಯಾಗಿದೆ. ಹೀಗಾಗಿ ಇವುಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಪುರಾತತ್ವ ಇಲಾಖೆಯು ಅರಣ್ಯ ಇಲಾಖೆಗೆ ನೋಟಿಸ್‌ ನೀಡಿದೆ.

ವಿಜಯ ನಾರಾಯಣಸ್ವಾಮಿ ದೇಗುಲದ ಉತ್ತರ ಭಾಗದ 200 ಮೀಟರ್‌ ಪ್ರದೇಶ ನಿಯಂತ್ರಿತ ಪ್ರದೇಶವಾಗಿದ್ದು, ಇಲ್ಲಿ ಯಾವುದೇ ರೀತಿಯ ಹೊಸ ಕಟ್ಟಡ ನಿರ್ಮಾಣ, ನವೀಕರಣ, ದುರಸ್ತಿ ಅಥವಾ ಪುನರ್‌ನಿರ್ಮಾಣ ಮಾಡುವುದುಕ್ಕೂ ಮುನ್ನ ಪುರಾತತ್ವ ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಇತ್ತೀಚೆಗೆ ಕ್ಷೇತ್ರದ ಶಾಸಕ ಎಚ್‌.ಎಂ. ಗಣೇಶ್‌ ಪ್ರಸಾದ್‌ ಅವರು ಪಟ್ಟಣದ ಹಳೇ ಆಸ್ಪತ್ರೆ ರಸ್ತೆಯ ಬಂಡೀಪುರ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ₹25 ಲಕ್ಷ ವೆಚ್ಚದಲ್ಲಿ ನೂತನ ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಓ) ಕಚೇರಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಈ ಕಟ್ಟಡ ಈಗ ಅಡಿಪಾಯ ಮುಗಿದು ಪಿಲ್ಲರ್‌ ತಲೆ ಎತ್ತಿವೆ.

ಈ ಕಟ್ಟಡವು ದೇಗುಲದ ಪ್ರಾಂಗಣಕ್ಕೆ ಸೇರಿರುವ ಜಾಗದಲ್ಲಿದ್ದು, ಇದು ಅನಧಿಕೃತ/ ಅಕ್ರಮವಾಗಿದೆ. ಕೂಡಲೇ ತೆರವುಗೊಳಿಸಬೇಕು. ಅಲ್ಲಿನ ಸೈಟ್‌ ಹಿಂದಿನ ಸ್ಥಿತಿಗೆ ಮರಳಿಸಬೇಕು. ಅದೆಲ್ಲದರ ಖರ್ಚನ್ನು ಅರಣ್ಯ ಇಲಾಖೆಯೇ ಭರಿಸಬೇಕು. ನೋಟಿಸ್‌ಗೆ 7 ದಿನಗಳ ಒಳಗಾಗಿ ಉತ್ತರಿಸಬೇಕು. ಇಲ್ಲವೇ ಕಾನೂನು ಕ್ರಮ ಕೈಗೊಳ್ಳುವುದಾಗಿ ಪುರಾತತ್ವ ಸರ್ವೇಕ್ಷಣ ಇಲಾಖೆಯ ಮೈಸೂರು ವೃತ್ತವು ಗುಂಡ್ಲುಪೇಟೆ ಅರಣ್ಯ ಇಲಾಖೆಗೆ ನೋಟಿಸ್‌ ನೀಡಿದೆ.

3ನೇ ನೋಟಿಸ್‌:

ಪುರಾತತ್ವ ಕೊಟ್ಟಿರುವ ನೋಟಿಸ್‌ 3ನೇಯದ್ದಾಗಿದೆ. ಈ ಹಿಂದೆ ಜ.12 ಮತ್ತು ಫೆ.3ರಂದು ಸಹ ಅರಣ್ಯ ಇಲಾಖೆಗೆ ನೋಟಿಸ್‌ ಕೊಟ್ಟು, ತೆರವುಗೊಳಿಸಲು ಸೂಚಿಸಿತ್ತು. ಇದಕ್ಕೆ ಅರಣ್ಯ ಇಲಾಖೆ ಕ್ಯಾರೇ ಎನ್ನದ ಕಾರಣ ಈಗ ಮತ್ತೊಮ್ಮೆ ನೋಟಿಸ್‌ ನೀಡಿದೆ.

ವಿದ್ಯುತ್‌,ನೀರು ಬೇಡ

ಅಲ್ಲದೇ, ದೇಗುಲ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ನೀರು ಮತ್ತು ವಿದ್ಯುತ್‌ ಸಂಪರ್ಕ ಕೊಡಿಸದಂತೆ ಜಿಲ್ಲಾ ಉಪ ಆಯುಕ್ತರಿಗೆ ಸೂಚಿಸುವಂತೆ ತಹಸೀಲ್ದಾರ್‌ಗೆ ವಿನಂತಿಸಿದೆ.

--ಮೊದಲೇ ನೋಟಿಸ್‌ನಲ್ಲಿ ಕಾಮಗಾರಿ ನಿಲ್ಲಿಸಿ ಎಂದು ಸೂಚನೆ ನೀಡಲಾಗಿತ್ತು. 2ನೇ ನೋಟಿಸ್‌ನಲ್ಲಿ ಕಾಮಗಾರಿ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದೆ. ಎರಡನೇಯದ್ದಕ್ಕೆ ಉತ್ತರ ನೀಡಲಾಗಿದೆ. ನೂತನ ಕಟ್ಟಡ ನಿರ್ಮಿಸಲು ಅನುಮತಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಹಾಕಲಾಗಿದೆ.

- ಶಿವಕುಮಾರ್‌, ಆರ್‌ಎಫ್‌ಒ, ಗುಂಡ್ಲುಪೇಟೆ---

೨೫ಜಿಪಿಟಿ೧

ಗುಂಡ್ಲುಪೇಟೆ ವಲಯ ಅರಣ್ಯಾಧಿಕಾರಿ ಕಚೇರಿಯ ನಿರ್ಮಾಣ ಹಂತದ ಕಟ್ಟಡ ಸ್ಥಗಿತಗೊಂಡಿದೆ.

೨೫ಜಿಪಿಟಿ೨

ಗುಂಡ್ಲುಪೇಟೆ ಪಟ್ಟಣದ ವಿಜಯನಾರಾಯಣಸ್ವಾಮಿ ದೇವಸ್ಥಾನದ ನೋಟ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುದ್ದೆ ಭರ್ತಿಗೆ ಒತ್ತಾಯಿಸಿ ಮಾದಿಗ ಸಮಾಜದಿಂದ ಅಪರ ಡಿಸಿಗೆ ಮನವಿ
ಎಐ ಸೃಷ್ಟಿಸಿದ ಫೋಟೋ ನೋಡಿ ಜನರು ಕಂಗಾಲು; ಅರಣ್ಯ ಇಲಾಖೆ ಹೈರಾಣು..!