ಸೇವೆ ಸ್ವಾರ್ಥವಾಗಿದೆ, ತ್ಯಾಗಕ್ಕೆ ಅರ್ಥವಿಲ್ಲದಂತಾಗಿದೆ

KannadaprabhaNewsNetwork | Published : Mar 22, 2025 2:01 AM

ಸಾರಾಂಶ

ಬುದ್ಧ, ಬಸವ, ಕನಕದಾಸ, ಗಾಂಧಿ, ಅಂಬೇಡ್ಕರ್‌ ಮೊದಲಾದ ಮಹನೀಯರ ತತ್ವಾದರ್ಶಗಳನ್ನು ಪಾಲಿಸದಿದ್ದಲ್ಲಿ ದೇಶದ ಅಭಿವೃದ್ಧಿ ಸಾಧ್ಯವಾಗದು

ಕನ್ನಡಪ್ರಭ ವಾರ್ತೆ ಮೈಸೂರು

ಪ್ರಸ್ತುತ ಸೇವೆ ಸ್ವಾರ್ಥವಾಗಿದೆ. ತ್ಯಾಗಕ್ಕೆ ಅರ್ಥವಿಲ್ಲದಂತಾಗಿದೆ ಎಂದು ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ವಿಷಾದಿಸಿದರು.

ಮೈಸೂರು ತಾಲೂಕು ಪುಟ್ಟೇಗೌಡನಹುಂಡಿಯಲ್ಲಿ ಶುಕ್ರವಾರ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಎಸ್ಎಸ್ಎಸ್‌ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು, ಜಾತಿ, ಮತ, ಭ್ರಷ್ಟಾಚಾರ ಹೆಚ್ಚಾಗಿ ಪರಿಸ್ಥಿತಿ ಹದಗೆಟ್ಟಿದೆ. ಸೇವಾ ಮನೋಭಾವ ಇಲ್ಲದ ವ್ಯಕ್ತಿಯನ್ನು ಅನಾಗರಿಕ, ಸಮಾಜಕ್ಕೆ ಕಂಟಕಪ್ರಾಯ ಎಂದು ಪರಿಗಣಿಸಬೇಕು ಎಂದರು.

ಬುದ್ಧ, ಬಸವ, ಕನಕದಾಸ, ಗಾಂಧಿ, ಅಂಬೇಡ್ಕರ್‌ ಮೊದಲಾದ ಮಹನೀಯರ ತತ್ವಾದರ್ಶಗಳನ್ನು ಪಾಲಿಸದಿದ್ದಲ್ಲಿ ದೇಶದ ಅಭಿವೃದ್ಧಿ ಸಾಧ್ಯವಾಗದು ಎಂದು ಅವರು ಅಭಿಪ್ರಾಯಪಟ್ಟರು.

ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ಶಾರದಾ ಮಾತನಾಡಿ, ವಿದ್ಯೆ ವಿನಯವನ್ನು, ಬುದ್ಧಿ ಸಂಸ್ಕಾರವನ್ನು ಕಲಿಸಬೇಕು ಎಂದರು.

ಹೆಣ್ಣು ಎಂದರೇ ದಿಟ್ಟೆ, ಧೀರೆ ಎಂಬುದನ್ನು ಕೇವಲ 9 ದಿನಗಳ ಬಾಹ್ಯಾಕಾಶ ಯಾತ್ರೆಗೆ ಹೋಗಿ 9 ತಿಂಗಳು ಅಲ್ಲಿದ್ದುಕೊಂಡು ಸಂಶೋಧನೆ ನಡೆಸಿ, ಭೂಮಿಗೆ ಹಿಂದಿರುಗಿದ ಸುನೀತಾ ವಿಲಿಯಮ್ಸ್‌ ಸಾಬೀತು ಮಾಡಿದ್ದಾರೆ. ಇವರಂಥವರು ನಮಗೆ ಆದರ್ಶವಾಗಬೇಕು ಎಂದರು.

ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಚ್‌.ಎಂ. ಮಹದೇವಪ್ರಸಾದ್‌ ಮಾತನಾಡಿ, ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ, ಸಹಬಾಳ್ವೆಯನ್ನು ಎನ್ಎಸ್ಎಸ್‌ ಕಲಿಸುತ್ತದೆ. ಹೆಣ್ಣು ಮಕ್ಕಳು ಕೀಳರಿಮೆ ಬಿಡಬೇಕು ಎಂದರು.

ಗ್ರಾಪಂ ಸದಸ್ಯಡಿ. ಮಹೇಶ್‌ ಮಾತನಾಡಿ, ಗ್ರಾಮದಲ್ಲಿ ಹಸಿ ಕಸವನ್ನು ತಿಪ್ಪಿಗೆ ಹಾಕಲಿ. ಒಣ ಕಸವನ್ನು ಮನೆ ಮುಂದೆ ಬರುವ ಗ್ರಾಪಂ ವಾಹನಕ್ಕೆ ನೀಡುವಂತೆ ಗ್ರಾಮಸ್ಥರನ್ನು ಪರಿವರ್ತಿಸಿ ಎಂದು ಶಿಬಿರಾರ್ಥಿಗಳಲ್ಲಿ ಮನವಿ ಮಾಡಿದರು

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಶಿಬಿರಕ್ಕೆ ಚಾಲನೆ ನೀಡಿದರು. ಗ್ರಾಪಂ ಮಾಜಿ ಸದಸ್ಯ ಮಂಜು ಪ್ರಕಾಶ್‌ ಮಾತನಾಡಿದರು.

ಗ್ರಾಪಂ ಸದಸ್ಯೆ ಮಹಾದೇವಮ್ಮ, ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಸ್ವಾಮಿ, ನಿರ್ದೇಶಕರಾದ ನಂಜಪ್ಪ, ನಂಜಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಮಹದೇವಸ್ವಾಮಿ ಮುಖ್ಯ ಅತಿಥಿಗಳಾಗಿದ್ದರು.

ಕಾಲೇಜಿನ ಉಪ ಪ್ರಾಂಶುಪಾಲ ಡಾ.ಜಿ. ಪ್ರಸಾದಮೂರ್ತಿ ಸ್ವಾಗತಿಸಿದರು. ಎನ್ಎಸ್ಎಸ್‌ ಕಾರ್ಯಕ್ರಮಾಧಿಕಾರಿ ತ್ರಿವೇಣಿ ವಂದಿಸಿದರು.. ಮತ್ತೊರ್ವ ಕಾರ್ಯಕ್ರಮಾಧಿಕಾರಿ ಎಚ್‌.ಬಿ. ಬಸಪ್ಪ ಇದ್ದರು. ಶಿಬಿರಾರ್ಥಿ ಐಶ್ವರ್ಯ ನಿರೂಪಿಸಿದರು. ಶಿಬಿರಾರ್ಥಿಗಳು ಎನ್ಎಸ್ಎಸ್‌ ಗೀತೆ ಹಾಡಿದರು

Share this article