ಶಿವಮೊಗ್ಗ: ಭಾರತದ ಯುವಶಕ್ತಿ ಹಲವಾರು ಸೃಜನಾತ್ಮಕ, ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕಾದರೆ ಅವರಿಗೆ ಆತ್ಮವಿಶ್ವಾಸ ದೃಢಸಂಕಲ್ಪ ಬೇಕಾಗುತ್ತದೆ ಎಂದು ಕುವೆಂಫು ವಿವಿ ಕುಲಪತಿ ಶರತ್ ಅನಂತಮೂರ್ತಿ ಹೇಳಿದರು.ಕುವೆಂಪು ವಿಶ್ವವಿದ್ಯಾಲಯದ ಆವರಣದಲ್ಲಿ ಚಾಲನೆಗೊಂಡ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಸ್ವಯಂ ಸೇವಕರ ಕೈಪಿಡಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸಮಾಜ, ಸಂಸ್ಕೃತಿಯ ಅರಿವು, ಮಾನವ ಸಂಬಂಧಗಳಲ್ಲಿ ನಂಬಿಕೆ ಮತ್ತು ವಿಶ್ವಾಸ, ಜಾತಿ, ಧರ್ಮಗಳ ವೈಶಮ್ಯ ಮೀರಿದ ಸೌಹಾರ್ದತೆಯ ಜೀವನ ಕ್ರಮ ಇವೆಲ್ಲವೂ ಅಪೇಕ್ಷಣೀಯ. ನಮ್ಮ ದೇಶವು ಎದುರಿಸಬೇಕಾದ ಹಲವಾರು ಸವಾಲುಗಳು ನಮ್ಮ ಮುಂದಿವೆ ಎಂದರು.ಸಾಧಿಸಬೇಕಾದ ಸಾಧನೆಗಳು ನಮ್ಮ ಮುಂದಿವೆ. ರಾಷ್ಟ್ರೀಯ ಮಾನ್ಯತೆಯನ್ನು ಪಡೆದಿರುವ ನಮ್ಮ ರಾಷ್ಟ್ರೀಯ ಸೇವಾ ಯೋಜನೆ ಈ ಎಲ್ಲಾ ಸವಾಲುಗಳನ್ನು ಸ್ವೀಕರಿಸುವುದಕ್ಕೆ ಸಿದ್ಧವಿರುವುದು ನಮಗೆ ಸಂತೋಷ ತಂದಿದೆ. ಯುವ ಜನರ ಕಾರ್ಯಕ್ಷಮತೆ ವೃದ್ಧಿಸುವಲ್ಲಿ ಪ್ರತಿಭಾ ಶಕ್ತಿ ವಿಕಸಿಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆಯು ಪೂರಕವಾಗಿದೆ. ಎರಡು ದಿನಗಳವರೆಗೆ ವೈವಿಧ್ಯಮಯ ಕಲೆ, ಸಾಹಿತ್ಯ ಸಂಸ್ಕೃತಿ ಪರಿಚಾರಿಕೆಯೊಂದಿಗೆ ವಿದ್ಯಾರ್ಥಿಗಳು ನಡೆದುಕೊಂಡ ರೀತಿ ಶ್ಲಾಘನೀಯ ಎಂದರು.ಕುವೆಂಪು ವಿವಿ ಕುಲಸಚಿವ ಎ.ಎಲ್.ಮಂಜುನಾಥ ಮಾತನಾಡಿದರು. ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಪಾಂಡಿಚೇರಿ, ಆಂಧ್ರಪ್ರದೇಶ ಸೇರಿದಂತೆ ಮೊದಲಾದ ರಾಜ್ಯಗಳಿಂದ ಆಗಮಿಸಿದ್ದ ಸುಮಾರು 150 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಅತ್ಯುತ್ತಮ ಕಾರ್ಯಕ್ರಮ ಅಧಿಕಾರಿಗಳು ಹಾಗೂ ಸ್ವಯಂಸೇವಕರನ್ನು ಗುರುತಿಸಿ ಅಭಿನಂದಿಸಲಾಯಿತು.
ನಯನ (ಕೇರಳ) ಸಂದೇಶ್ (ಮಹಾರಾಷ್ಟ್ರ) ಜಯವರ್ಧನ (ಕರ್ನಾಟಕ) ಅಮೃತ (ಕರ್ನಾಟಕ) ಕು.ಪ್ರಿಯಾಂಕ (ತಮಿಳುನಾಡು) ವಿಶ್ವವೇಲನ್ (ಪಾಂಡಿಚರಿ) ಶ್ರೀ ಚಂದನ (ಆಂಧ್ರ ಪ್ರದೇಶ ) ಮಹದೇವಸ್ವಾಮಿ (ಕರ್ನಾಟಕ), ಸ್ನೇಹ (ಕೇರಳ) ಖಂಡೇರಾವ್ ( ಮಹಾರಾಷ್ಟ್ರ), ಈಶ್ವರ್ (ಆಂಧ್ರ ಪ್ರದೇಶ) ಅತ್ಯುತ್ತಮ ಸ್ವಯಂಸೇವಕ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಾಗಿದ್ದಾರೆ. ಸುನೇಶ್ ಪರಿಯಲ್ (ಕೇರಳ) ರೇವತಿ (ಪಾಂಡಿಚೆರಿ), ಶ್ರೀಜ್ಞಾನಶೇಖರ್ (ತಮಿಳುನಾಡು ), ಡಾ.ಶ್ರೀನಿವಾಸ್, (ಆಂಧ್ರ ಪ್ರದೇಶ ) ಶ್ರೀ ಅಜಯ್ ದಳವಾಯಿ (ಮಹಾರಾಷ್ಟ್ರ) ಉತ್ತಮ ಕಾರ್ಯಕ್ರಮಾಧಿಕಾರಿಗಳ ಪ್ರಶಸ್ತಿಯನ್ನು ಪಡೆದವರಾಗಿದ್ದಾರೆ.ಕಾರ್ಯಕ್ರಮದಲ್ಲಿ ಸಂಯೋಜನಾಧಿಕಾರಿ ಡಾ.ಶುಭಾ ಮರವಂತೆ ವಂದಿಸಿದರು. ಸಲಹಾ ಸಮಿತಿಯ ಸದಸ್ಯೆ ವಿ.ಪಿ. ದಿವ್ಯ ಉಪಸ್ಥಿತರಿದ್ದರು.