ಯಲಬುರ್ಗಾ: ಜಗತ್ತಿನೆಲ್ಲೆಡೆ ಜನರ ಪುನರ್ವಸತಿ ಮತ್ತು ಯೋಗಕ್ಷೇಮಕ್ಕಾಗಿ ದುಡಿಯುವವರಲ್ಲಿ ದಾದಿಯರೂ ಪ್ರಮುಖರು ಎಂದು ಡಾ. ವಿವೇಕ ವಾಗುಲೆ ಹೇಳಿದರು.
ಜನನ,ಮರಣದ ಸಮಯದಲ್ಲಿ ಜೊತೆಗಿರುವ ಅವರ ಸೇವೆಗೆ ಗೌರವ ಸೂಚಿಸಲೆಂದೇ ಪ್ರತಿವರ್ಷ ಮೇ ೧೨ರಂದು ಅಂತಾರಾಷ್ಟ್ರೀಯ ದಾದಿಯರ ದಿನ ಆಚರಿಸಲಾಗುತ್ತಿದೆ. ವೈದ್ಯ ವೃತ್ತಿ ಸಾಮಾನ್ಯವಾಗಿ ಭಗವಂತನಿಗೆ ಸಮನಾಗಿ ಕಾಣಲಾಗುತ್ತದೆ. ವೈದ್ಯರಿಗಿಂತ ಮೊದಲು ರೋಗಿಗಳನ್ನು ಉಪಚರಿಸುವವರು ದಾದಿಯರು. ವೈದ್ಯರ ಮಾರ್ಗದರ್ಶನದಂತೆ ಕಾಯಿಲೆಯಿಂದ ಬಳಲುತ್ತಿರುವವರನ್ನು ಉಪಚರಿಸಿ ಆರೈಕೆ ಮಾಡುವ ಶೂಶ್ರೂಷಕಿಯರು ಪ್ರಶಂಸೆಗೆ ಅರ್ಹರು ಎಂದರು.
ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ದಾದಿಯರು ಜೀವದ ಹಂಗನ್ನೇ ತೊರೆದು ಹಗಲಿರುಳು ಶ್ರಮಿಸಿದ್ದರು. ಜೀವನ್ಮರಣದ ನಡುವೆ ಹೋರಾಡುತ್ತಿದ್ದವರ ಶುಶ್ರೂಷೆಗಾಗಿ ಅವರು ತೋರಿದ ಉತ್ಸಾಹ ಮತ್ತು ಕಾಳಜಿ ಅನುಕರಣೀಯ. ದಾದಿಯರು ನಮ್ಮೆಲ್ಲರ ಪಾಲಿಗೆ ಎರಡನೇ ತಾಯಂದಿರಿದ್ದಂತೆ. ರೋಗಿಗಳ ಶುಶ್ರೂಷೆಗೆ ಸಹಾಯ ಮಾಡುವ ಎಲ್ಲ ಸಿಬ್ಬಂದಿ ಶ್ಲಾಘನೆಗೆ ಅರ್ಹರು ಎಂದು ಹೇಳಿದರು.ಪೌಷ್ಟಿಕ ದಿನ ಪ್ರಯುಕ್ತ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಆರೋಗ್ಯಕರ ಹಾಗೂ ಪೌಷ್ಟಿಕ ಆಹಾರ ಪದಾರ್ಥಗಳ ಮಹತ್ವ ಪ್ರತಿಬಿಂಬಿಸುವ ವಿವಿಧ ನ್ಯೂಟ್ರಿಷನ್ ಆಹಾರ ಪದಾರ್ಥ ಸಿದ್ಧಪಡಿಸಿ ವಿವಿಧ ತಂಡಗಳಿಂದ ಪ್ರದರ್ಶಿಸಲಾಯಿತು.
ಜನನಿ ಗ್ರುಪ್ ಆಫ್ ಇನ್ಸ್ಟಿಟ್ಯೂಟ್ ಅಧ್ಯಕ್ಷ ರಂಗನಾಥ ವಲ್ಮಕೊಂಡಿ ಅಧ್ಯಕ್ಷತೆ ವಹಿಸಿದ್ದರು.