ಆರೋಗ್ಯವಂತ ಸಮಾಜಕ್ಕೆ ಪೌಷ್ಟಿಕ ಆಹಾರ ಅಗತ್ಯ: ನ್ಯಾ. ಬಸವರಾಜ

KannadaprabhaNewsNetwork | Published : Sep 13, 2024 1:38 AM

ಸಾರಾಂಶ

Nutritious food is essential for a healthy society: Ny. Basavaraja

-ಪೌಷ್ಟಿಕ ಆಹಾರ ಕುರಿತು ಅರಿವು ಕಾರ್ಯಕ್ರಮದಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತ

-----

ಕನ್ನಡಪ್ರಭ ವಾರ್ತೆ ಶಹಾಪುರ

ಪೌಷ್ಟಿಕಾಂಶ ಎಲ್ಲರಿಗೂ ಬೇಕು. ಅದರಲ್ಲೂ ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಇದು ಅತ್ಯಗತ್ಯ. ಆದರೆ, ಇತ್ತೀಚೆಗೆ ಮಕ್ಕಳು ಮಾತ್ರವಲ್ಲದೆ ಹರೆಯದವರಲ್ಲೂ ಅಪೌಷ್ಟಿಕತೆ ಹಾಗೂ ವಿಟಮಿನ್ "ಡಿ " ಕೊರತೆ ಹೆಚ್ಚಾಗಿ ಕಂಡು ಬರುತ್ತಿದೆ. ಅಪೌಷ್ಟಿಕತೆ ನಿವಾರಣೆಗೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೆಚ್ಚುವರಿ ನ್ಯಾಯಾಧೀಶರಾದ ಬಸವರಾಜ ಹೇಳಿದರು.

ನಗರದ ಹಳಿಸಗರ ಬಡಾವಣೆಯ ಯಲ್ಲಾಲಿಂಗ ಕಲ್ಯಾಣ ಮಂಟಪದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಹಾಪುರ, ತಾಲೂಕು ಕಾನೂನು ಸೇವಾ ಸಮಿತಿ ಶಹಾಪುರ, ತಾಲೂಕು ಆಡಳಿತ, ತಾಲೂಕು ಪಂಚಾಯ್ತಿ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಗಳ ಸಹಯೋಗದಲ್ಲಿ ತಾಲೂಕು ಮಟ್ಟದ ಪೋಷಣ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ನಡೆದ ಪೌಷ್ಟಿಕ ಆಹಾರ ಕುರಿತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಿಡುವಿಲ್ಲದ ಬದುಕಿನಲ್ಲಿ ಪೌಷ್ಟಿಕಾಂಶಭರಿತ ಆಹಾರವನ್ನು ಮರೆತುಬಿಟ್ಟಿದ್ದೇವೆ. ಸಿದ್ಧ ಆಹಾರ, ಎಣ್ಣೆ ಪದಾರ್ಥಗಳು ಹಾಗೂ ಸತ್ವ ರಹಿತ ತಿನಿಸು ಸೇವಿಸಿ, ನಮ್ಮ ಆರೋಗ್ಯದ ಮೇಲೆ ನಾವೇ ಕಲ್ಲುಹಾಕಿಕೊಳ್ಳುತ್ತಿದ್ದೇವೆ. ಜನರಲ್ಲಿ ಆರೋಗ್ಯಕ್ಕೆ ಪೌಷ್ಟಿಕ ಆಹಾರದ ಮಹತ್ವ ಕುರಿತು ಜಾಗೃತಿ ಮೂಡಿಸುವುದು ಅತ್ಯವಶ್ಯ ಎಂದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಲ್ಲಣ್ಣ ದೇಸಾಯಿ ಮಾತನಾಡಿ, ದೇಶದ ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ ಅಪೌಷ್ಟಿಕತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ, 2018ರ ಸೆಪ್ಟೆಂಬರ್‌ನಲ್ಲಿ ಪೋಷಣ ಅಭಿಯಾನ ಆರಂಭಿಸಿತ್ತು. ಇಲಾಖೆ ವತಿಯಿಂದ ಈಗಾಗಲೇ ಗರ್ಭಿಣಿ, ಬಾಣಂತಿಯರಿಗೆ, ಶಿಶುಗಳಿಗೆ, ಕಿಶೋರಿಯರಿಗೆ ಆರೋಗ್ಯ ತಪಾಸಣೆ ಶಿಬಿರ, ಗರ್ಭಿಣಿ ಬಾಣಂತಿಯರ ತೂಕ ಮತ್ತು ಆರೋಗ್ಯ, ಪೂರಕ ಪೌಷ್ಟಿಕ ಆಹಾರದ ಮಹತ್ವ ಸೇರಿದಂತೆ ವರ್ಷವಿಡಿ ಅನೇಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಆದರೂ ಆಹಾರದ ಬಗ್ಗೆ ನಿಷ್ಕಾಳಜಿ ವಹಿಸುತ್ತಿರುವುದು. ಕಂಡು ಬರುತ್ತದೆ ಎಂದರು.

ಹಿರಿಯ ವಕೀಲೆ ಬಸಮ್ಮ ರಾಂಪುರೆ ಮಾತನಾಡಿ, ಮಹಿಳೆಯರು ಹಾಗೂ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿ ಕಂಡು ಬರುತ್ತಿದ್ದು, ಇವರ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದರು.

ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಬಿರಾದಾರ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿದ್ದಣ್ಣ ಬಿರಾದಾರ್, ಡಾ. ಅಭಿಷೇಕ್ ರೆಡ್ಡಿ, ಡಾ. ಗುರುರಾಜ್, ಪಿಎಸ್ಐ ಶಾಮ್ ಸುಂದರ ನಾಯಕ್, ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಅಮರೇಶ್ ಇಟಗಿ, ಉಪಾಧ್ಯಕ್ಷ ಜೈಲಾಲ್, ಶಿಕ್ಷಣ ಇಲಾಖೆ ಸಿದ್ದರಾಮಪ್ಪ ಇದ್ದರು.

-----

......ಕೋಟ್.... ತಾಯಿ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅಪೌಷ್ಟಿಕತೆ ಕುರಿತು ಪ್ರತಿಯೊಬ್ಬರೂ ಅರಿವು ಮೂಡಿಸಿಕೊಂಡು ಉತ್ತಮ ಆಹಾರ ಸೇವನೆಗೆ ಗಮನ ನೀಡುವುದು ಅಗತ್ಯ. ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ಕಾರ್ಯ ನಡೆಯಬೇಕು.- ಶೋಭಾ, ಪ್ರಧಾನ ನ್ಯಾಯಾಧೀಶೆ, ಸದಸ್ಯ ಕಾರ್ಯದರ್ಶಿಗಳು, ತಾಲೂಕ ಕಾನೂನು ಸೇವಾ ಸಮಿತಿ ಶಹಾಪುರ.

---------

11ವೈಡಿಆರ್16: ಶಹಾಪುರ ನಗರದ ಹಳಿಸಗರ ಬಡಾವಣೆಯ ಯಲ್ಲಾಲಿಂಗ ಕಲ್ಯಾಣ ಮಂಟಪದಲ್ಲಿ ಪೌಷ್ಟಿಕ ಆಹಾರ ಕುರಿತು ಅರಿವು ಕಾರ್ಯಕ್ರಮದಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ನಡೆಯಿತು.

Share this article