ಕನಕಗಿರಿ: ಜು.1ರಿಂದ ಪಟ್ಟಣದ ಎಪಿಎಂಸಿ ಶ್ರಮಿಕ ಭವನದಲ್ಲಿ ತಾಲೂಕು ಕೋರ್ಟ್ ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳಬೇಕೆಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಜಿಲ್ಲಾ ನ್ಯಾಯಾಲಯದ ಆಡಳಿತಾಧಿಕಾರಿ ಸಿ.ಎಂ. ಪೂಣಚ್ಛ ಸೂಚಿಸಿದರು.
ಭಾನುವಾರ ಪಟ್ಟಣದ ಎಪಿಎಂಸಿ ಶ್ರಮಿಕ ಭವನಕ್ಕೆ ಭೇಟಿ ನೀಡಿ ಕಟ್ಟಡ ಪರಿಶೀಲನೆ ನಡೆಸಿದರು. ಕೋರ್ಟ್ ಆರಂಭಕ್ಕೆ ವಿಳಂಬವಾಗಿರುವುದು ಕಂಡು ಬಂದಿದೆ. ಈಗಾಗಲೇ ಕೆಲ ಹೊಸ ತಾಲೂಕು ಕೇಂದ್ರಗಳಲ್ಲಿ ನ್ಯಾಯಾಲಯದ ತಾತ್ಕಾಲಿಕ ಸಂಕೀರ್ಣ ಆರಂಭಗೊಂಡಿವೆ. ಕನಕಗಿರಿಯಲ್ಲಿಯೂ ಕೋರ್ಟ್ ಆರಂಭವಾಗಬೇಕಾಗಿತ್ತು. ಜಾಗೆ, ಕಟ್ಟಡದ ಸಮಸ್ಯೆಯಿಂದ ಮುಂದೂಡಲಾಗುತ್ತಿದೆ. ಈಗ ಎಪಿಎಂಸಿ ವ್ಯಾಪ್ತಿಯ ಶ್ರಮಿಕ ಭವನದಲ್ಲಿ ಕೋರ್ಟ್ ಕಾರ್ಯ ಆರಂಭಿಸಲು ಸ್ಥಳೀಯರು, ಅಧಿಕಾರಿಗಳು ನಿರ್ಣಯಿಸಿದಂತೆ ತಕ್ಷಣವೇ ಕಾರ್ಯ ಪ್ರವೃತ್ತರಾಗಿ ನ್ಯಾಯಾಲಯಕ್ಕೆ ಬಣ್ಣ, ಪೀಠೋಪಕರಣಗಳು ಒದಗಿಸಲು ಕ್ರಮ ಕೈಗೊಳ್ಳಬೇಕು. ಕೈಗೊಂಡ ಕಾರ್ಯಗಳ ಕುರಿತು ಕಾಲಕಾಲಕ್ಕೆ ಮಾಹಿತಿ ನೀಡಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜೂ.1ಕ್ಕೆ ಕೋರ್ಟ್ ಆರಂಭಕ್ಕೆ ಹರ್ಷ: ಸಚಿವರ ಹಾಗೂ ಸ್ಥಳೀಯರ ಇಚ್ಛಾಸಕ್ತಿ ಕೊರತೆಯಿಂದ ಕೋರ್ಟ್ ಆರಂಭ ವಿಳಂಬವಾಗಿತ್ತು. ಇದೀಗ ಬೆಂಗಳೂರಿನಿಂದ ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಂ.ಪೂಣಚ್ಛ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೋರ್ಟ್ ಕಾರ್ಯಾರಂಭಕ್ಕೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದು, ಕನಕಗಿರಿಯಲ್ಲಿ ಜೂ.1ಕ್ಕೆ ಕೋರ್ಟ್ ಆರಂಭವಾಗಬೇಕೆನ್ನುವ ನ್ಯಾಯಮೂರ್ತಿಗಳ ಸೂಚನೆಗೆ ಸ್ಥಳೀಯ ವಕೀಲರು ಹರ್ಷ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಸತ್ರ ಪ್ರಧಾನ ನ್ಯಾಯಾಧೀಶ ಸಿ.ಚಂದ್ರಶೇಖರ, ಗಂಗಾವತಿಯ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ, ಹಿರಿಯ ಶ್ರೇಣಿ ನ್ಯಾಯಾಧೀಶ ಬಸವಣ್ಣೆಪ್ಪ ಗುಂಡೆಪ್ಪ ಹಳ್ಳಕಾಯಿ, ಪ್ರಧಾನ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮೇಘಾ ಸೋಮಣ್ಣನವರ್, ತಹಸೀಲ್ದಾರ ವಿಶ್ವನಾಥ ಮುರುಡಿ, ಎಪಿಎಂಸಿ ಕಾರ್ಯದರ್ಶಿ ಸಾವಿತ್ರಿ ಪಾಟೀಲ್, ಲೋಕೋಪಯೋಗಿ ಇಲಾಖೆಯ ಎಇಇ ವಿಶ್ವನಾಥ, ಗಂಗಾವತಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಎನ್ ನಾಯಕ, ಉಪಾಧ್ಯಕ್ಷ ಪ್ರಕಾಶ ಕುಸುಬಿ, ಕಾರ್ಯದರ್ಶಿ, ಎಚ್.ಎಂ ಮಂಜುನಾಥ, ವಕೀಲರಾದ ಹನುಮೇಶ ಮಹಿಪತಿ, ರಾಮಣ್ಣ ಹುಲಿಹೈದರ, ಉಮೇಶ, ಮಾರುತಿ ಮೆತಗಲ್, ನಿರುಪಾದಿ ಚಿಂಚಲಿ, ಸುಭಾಷಚಂದ್ರ ಹುಲಿಹೈದರ, ರಮೇಶ ಪಾಲಿ, ನಾಗರಾಜ ಗದ್ದಿ, ಹನುಮೇಶ ಹೆಬ್ಬುಲಿ,ಗಂಗಾಧರಸ್ವಾಮಿ, ಶರಣಪ್ಪ ಭತ್ತದ ಇತರರಿದ್ದರು.