ಕುಕನೂರು: ಮೌಢ್ಯತೆ ಮತ್ತು ಅಂಧಶ್ರದ್ಧೆ ದೂರ ಮಾಡಿ ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಿ ಎಂದು ಆರ್ಕಿಟೆಕ್ ಸಾಫ್ಟ್ವೇರ್ ಇಂಜಿನಿಯರ್ ಆನಂದರಾಜ ಹೇಳಿದರು.
ತಾಲೂಕಿನ ಬಿನ್ನಾಳ ಗ್ರಾಮದ ಶ್ರೀಷಣ್ಮುಕೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಬೆಂಗಳೂರಿನ ಬ್ರೇಕ್ ಥ್ರೂ ಸೈನ್ಸ್ ಸೋಸೈಟಿಯಿಂದ ಜರುಗಿದ ವಿಜ್ಞಾನ ಅರಿವು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು,ಸಮಾಜದಲ್ಲಿ ಇನ್ನೂ ಕೆಲವು ಕಡೆ ಮೌಢ್ಯತೆ ಹಾಗೂ ಅಂಧಶ್ರದ್ಧೆ ಬೇರು ಬಿಟ್ಟಿರುವುದು ದುಃಖಕರ ಸಂಗತಿ. ಇಂತಹ ತಪ್ಪು ನಂಬಿಕೆಗಳಿಂದ ಹೊರಬರಲು ವಿಜ್ಞಾನಾಧಾರಿತ ಚಿಂತನೆ ಅತ್ಯಂತ ಅಗತ್ಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮದ ಪತ್ರಕರ್ತ ಜಗದೀಶ ಚಟ್ಟಿ ಮಾತನಾಡಿ, ಮಕ್ಕಳು ಮತ್ತು ಯುವಕರು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು.ಯಾವುದೇ ಘಟನೆ ಅಥವಾ ವಿಷಯ ಅಂಧವಾಗಿ ನಂಬುವುದಕ್ಕಿಂತ ಅದರ ಹಿಂದೆ ಇರುವ ವೈಜ್ಞಾನಿಕ ಕಾರಣ ಅರಿತುಕೊಳ್ಳುವುದು ಮುಖ್ಯ ಎಂದು ಸಲಹೆ ನೀಡಿದರು.
ಸರ್ಕಾರಿ ಪ್ರಾಥಮಿಕ ಶಾಲಾ ವಿಜ್ಞಾನ ಶಿಕ್ಷಕ ಗುರುರಾಜ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣದ ಕೊರತೆಯಿಂದ ಮೌಢ್ಯ ಇನ್ನು ಜೀವಂತವಾಗಿದೆ. ಎಲ್ಲಿಯವರೆಗೆ ಎಲ್ಲರಿಗೂ ವೈಜ್ಞಾನಿಕ ಶಿಕ್ಷಣದ ಅರಿವು ಆಗುವುದಿಲ್ಲವೋ ಅಲ್ಲಿಯವರೆಗೂ ನಾವು ಮೌಢ್ಯದಿಂದ ಹೊರಬರಲು ಸಾಧ್ಯವಾಗದು ಎಂದರು.ಅತಿಥಿ ಶಿಕ್ಷಕ ಬಸವರಾಜ ತಹಸೀಲ್ದಾರ, ಉಪನ್ಯಾಸಕ ವಿರುಪಾಕ್ಷ ಪಂತರ, ಗ್ರಾಮದ ಶಿಕ್ಷಣ ಪ್ರೇಮಿ ಬಸವರಾಜ ಮಲ್ಲಪ್ಪ ಮೆಣಸಿನಕಾಯಿ, ಭೀಮಣ್ಣ ಕುರಿ, ಜಗದೀಶ ದಂಡಿನ ಸೇರಿದಂತೆ ಇನ್ನಿತರರು ಇದ್ದರು.