ಕನ್ನಡಪ್ರಭ ವಾರ್ತೆ ಬೆಂಗಳೂರು
ಮನೆಯಲ್ಲಿ ಏಕಾಂಗಿಯಾಗಿ ನೆಲೆಸಿದ್ದ ಬಿಎಸ್ಎನ್ಎಲ್ ನಿವೃತ್ತ ನೌಕರರೊಬ್ಬರ ಪತ್ನಿಯ ಮೃತದೇಹ ಕೊಳತೆ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಗಿರಿನಗರದಲ್ಲಿ ನಡೆದಿದೆ.ಗಿರಿನಗರದ ಸಮೀಪದ ಚಾಮುಂಡಿ ನಗರದ ಸ್ಲಂ ಬೋರ್ಡ್ ವಸತಿ ಸಮುಚ್ಛಯದ ನಿವಾಸಿ ಪದ್ಮಾವತಿ (59) ಮೃತ ಮಹಿಳೆ. ಮನೆಯಲ್ಲಿ ದುರ್ವಾಸನೆ ಹಾಗೂ ಹುಳುಗಳು ಹಾರಾಡುತ್ತಿದ್ದನ್ನು ನೋಡಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು, ಮೃತರ ಮೊಮ್ಮಗನನ್ನು ಕರೆಸಿ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಕೊಳತೆ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
2012ರಲ್ಲಿ ಅನಾರೋಗ್ಯದಿಂದ ಪದ್ಮಾವತಿ ಪತಿ ಮುನಿಯಪ್ಪ ಮೃತಪಟ್ಟಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಮದುವೆಯಾಗಿ ಅವರ ಕುಟುಂಬದ ಜತೆ ನೆಲೆಸಿದ್ದಾರೆ. ಪತಿ ನಿಧನ ಬಳಿಕ ಬರುತ್ತಿದ್ದ ಪಿಂಚಣಿಯಲ್ಲಿ ಪದ್ಮಾವತಿ ಜೀವನ ಸಾಗಿಸುತ್ತಿದ್ದರು. ವೈಯಕ್ತಿಕ ಕಾರಣಗಳಿಗೆ ಬೇಸರಗೊಂಡು ತಮ್ಮ ಮಕ್ಕಳ ಜತೆ ಸಹ ಅವರು ಸೌಹಾರ್ದತೆ ಅಥವಾ ಭಾವುಕ ಸಂಬಂಧ ಹೊಂದಿರಲಿಲ್ಲ.10 ದಿನಗಳ ಹಿಂದೆ ಮನೆ ಹೊರಗೆ ಕಾಣಿಸಿಕೊಂಡಿದ್ದ ಪದ್ಮಾವತಿ, ನಂತರ ಮನೆಯ ಹೊರಗಡೆ ಬಂದಿರಲಿಲ್ಲ. ವಯೋಸಹಜ ಕಾಯಲೆಗಳಿಂದ ಬಳಲುತ್ತಿದ್ದ ಅವರು ಸೂಕ್ತವಾದ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರಲಿಲ್ಲ. ಮನೆಯಲ್ಲಿ ಹೃದಯಾಘಾತಕ್ಕೀಡಾಗಿ ಅವರು ಮೃತಪಟ್ಟಿರಬಹುದು. ನೆರೆಹೊರೆಯವರು ಜತೆ ಬಾಂಧವ್ಯವಿಲ್ಲದ ಕಾರಣಕ್ಕೆ ಅವರ ಬಗ್ಗೆ ಯಾರು ಕಾಳಜಿ ತೋರಿಲ್ಲ.
ಮೃತರ ಮನೆಯಿಂದ ದುರ್ವಾಸನೆ ಬಂದಿದೆ. ಅಲ್ಲದೆ ಬಾಗಿಲಲ್ಲಿ ಹುಳುಗಳು ಹಾರಾಡುತ್ತಿದ್ದವು. ಕೊನೆಗೆ ದುರ್ಗಂಧ ಸಹಿಸಲಾರದೆ ನೆರೆಮನೆಯವರು ಮಂಗಳವಾರ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಮೃತರ ಮೊಮ್ಮಗನನ್ನು ಕರೆದು ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಕೊಳತೆ ಸ್ಥಿತಿಯಲ್ಲಿ ಪದ್ಮಾವತಿ ಅವರ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
