ಗದಗ ಶಿವಾನಂದ ಮಠದ ಜಾತ್ರೆ, ಭಕ್ತರ ಸಭೆಗೆ ಹಿರಿಯ ಶ್ರೀಗಳ ಆಕ್ಷೇಪ

KannadaprabhaNewsNetwork | Published : Mar 1, 2024 2:21 AM

ಸಾರಾಂಶ

ಗದಗ ಶಿವಾನಂದ ಮಠದ ಹಿರಿಯ, ಕಿರಿಯ ಶ್ರೀಗಳ ವ್ಯಾಜ್ಯ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದ್ದು, ಇದರ ಮಧ್ಯೆ ಗುರುವಾರ ಶ್ರೀ ಮಠದ ಆವರಣದಲ್ಲಿ ನೂರಾರು ಭಕ್ತರು, ಹಿರಿಯರು ಸಭೆ ಸೇರಿ ಜಾತ್ರೆ ಆಚರಿಸುವ ನಿರ್ಧಾರ ಕೈಕೊಂಡಿರುವುದು ಸಾಕಷ್ಟು ಗೊಂದಲಕ್ಕೆ ಕಾರಣವಾಯಿತು.

ಗದಗ: ಇಲ್ಲಿನ ಶಿವಾನಂದ ಮಠದ ಹಿರಿಯ, ಕಿರಿಯ ಶ್ರೀಗಳ ವ್ಯಾಜ್ಯ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದ್ದು, ಇದರ ಮಧ್ಯೆ ಗುರುವಾರ ಶ್ರೀ ಮಠದ ಆವರಣದಲ್ಲಿ ನೂರಾರು ಭಕ್ತರು, ಹಿರಿಯರು ಸಭೆ ಸೇರಿ ಜಾತ್ರೆ ಆಚರಿಸುವ ನಿರ್ಧಾರ ಕೈಕೊಂಡಿರುವುದು ಸಾಕಷ್ಟು ಗೊಂದಲಕ್ಕೆ ಕಾರಣವಾಯಿತು.

ಕಳೆದರಡು ವರ್ಷಗಳಿಂದ ಮಠದ ಜಾತ್ರೆ ಹೀಗೆಯೆ ಗೊಂದಲ ಗೂಡಾಗಿಯೇ ನಡೆಯುತ್ತಿರುವುದು ಮಠದ ಭಕ್ತರಲ್ಲಿ ಸಾಕಷ್ಟು ಬೇಸರ ಮೂಡಿಸಿದೆ.

ಈ ಶಿವಾನಂದ ಮಠಕ್ಕೆ ಅಭಿನವ ಶಿವಾನಂದ ಶ್ರೀಗಳು ಹಿರಿಯ ಶ್ರೀಗಳಾಗಿದ್ದು, ಅವರೇ ಮುಂದೆ ನಿಂತು ಕಿರಿಯ ಶ್ರೀಗಳಾದ ಸದಾ ಶಿವಾನಂದ ಭಾರತಿ ಶ್ರೀಗಳಿಗೆ ಪಟ್ಟಾಧಿಕಾರ ಮಾಡಿ, ಉತ್ತರಾಧಿಕಾರಿ ಎಂದು ಉಪನೋಂದಣಿ ಕಚೇರಿಯಲ್ಲಿ ನೋಂದಾಯಿಸಿದ್ದಾರೆ.

ಆದರೆ ಕೆಲ ವರ್ಷಗಳ ನಂತರ ಅದೇಕೋ ಹಿರಿಯ ಮತ್ತು ಕಿರಿಯ ಶ್ರೀಗಳ ನಡುವೆ ತೀವ್ರ ಭಿನ್ನಾಭಿಪ್ರಾಯ ಮೂಡಿದ್ದು, ಪರಸ್ಪರ ಇಬ್ಬರೂ ಶ್ರೀಗಳ ಭಕ್ತರು ಬಹಿರಂಗವಾಗಿಯೇ ಆರೋಪ, ಪ್ರತ್ಯಾರೋಪ ಮಾಡಿಕೊಂಡಿದ್ದರು. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಕಿರಿಯ ಶ್ರೀಗಳ ಉತ್ತರಾಧಿಕಾರಿ ನೇಮಕವೇ ಅಸಿಂಧು ಎನ್ನುವ ರೀತಿಯ ಪ್ರಕರಣ ದಾಖಲಾಗಿ ವಿಚಾರಣೆ ನಡೆಸುತ್ತಿದೆ. ಕೋರ್ಟ್‌ ಪ್ರಕರಣ ವಿಚಾರಣೆ ಮಧ್ಯೆ ಮತ್ತೆ ಜಾತ್ರೆ ಬಂದಿದ್ದು ಜಾತ್ರೆ ಆಚರಣೆ ವಿಷಯವೇ ಮತ್ತೆ ಗೊಂದಲಕ್ಕೆ ಕಾರಣವಾಗಿದೆ.

ಶ್ರೀ ಮಠದಲ್ಲಿ ಸಭೆ: ಪ್ರತಿ ಶಿವರಾತ್ರಿಯಂದು ಜರುಗುವ ಜಾತ್ರೆ ಆಚರಣೆಗೆ ಈಗಾಗಲೇ ಜಾತ್ರಾ ಸಮಿತಿ ಮಠದ ಭಕ್ತರ ಒಂದು ಭಾಗ ಮಾಡಿದೆ. ಆದರೆ ಬಹಿರಂಗ ಪಡಿಸಿಲ್ಲ. ಕಳೆದ ಸಾಲಿನಂತೆ ಈ ಬಾರಿಯೂ ತೊಂದರೆಯಾಗುವುದು ಬೇಡ ಎಂದು ‍ಶಿವಾನಂದ ಮಠದ ನೂರಾರು ಭಕ್ತರು ಗುರುವಾರ ಶ್ರೀ ಮಠದ ಆವರಣದಲ್ಲಿ ಸಭೆ ನಡೆಸಿ, ನಾವು ಮಠದ ಭಕ್ತರು, ನಮಗೆ ಇಬ್ಬರೂ ಶ್ರೀಗಳು ಅಷ್ಟೇ, ಇಬ್ಬರನ್ನೂ ಕರೆದುಕೊಂಡು ಜಾತ್ರೆ ಮಾಡೋಣ, ಇಬ್ಬರೂ ಶ್ರೀಗಳನ್ನು ಭಕ್ತರೆಲ್ಲಾ ಸೇರಿ ಒಪ್ಪಿಸೋಣ ಎಂದು ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಂಡು ಉಭಯ ಶ್ರೀಗಳು ಭೇಟಿ ಮಾಡಿದರು. ಹಿರಿಯ ಶ್ರೀ ಅಸಮಾಧಾನ: ತಮ್ಮನ್ನು ಭೇಟಿ ಮಾಡಿದ ಭಕ್ತರಿಗೆ ಹಿರಿಯ ಶ್ರೀ ನೀವು ಏಕಾಏಕಿ ಬಂದು ಸಭೆ ಮಾಡಿದ್ದೀವಿ, ಒಪ್ಪಿಕೊಳ್ಳಿ ಎಂದರೆ ಹೇಗೆ ? ಈ ಬಗ್ಗೆ ನನಗೆ ಮೊದಲೇ ತಿಳಿಸಿಲ್ಲ. ನನಗೂ ಭಕ್ತ ಸಮೂಹವಿದೆ. ಅವರೊಂದಿಗೆ ಚರ್ಚಿಸಿ ಹೇಳುತ್ತೇನೆ ಎಂದು ಖಾರವಾಗಿಯೇ ಹೇಳಿದರು. ಶ್ರೀಗಳ ಕೋಣೆಯಲ್ಲಿ ನಡೆದ ಈ ಚರ್ಚೆಯ ವೇಳೆ ಶ್ರೀಗಳು ಸಾಕಷ್ಟು ಆಕ್ರೋಶ ಭರಿತರಾಗಿದ್ದರು.

ಈ ವಿದ್ಯಮಾನದ ಬಗ್ಗೆ ಅಭಿಪ್ರಾಯ ಕೇಳಿದ ಮಾಧ್ಯಮ ಪ್ರತಿನಿಧಿಗಳನ್ನು ಹೊರಗೆ ಹೋಗುವಂತೆ ಸೂಚಿಸಿದ ಶ್ರೀಗಳು ಬಾಗಿಲು ಹಾಕಿಕೊಂಡರು.ಹೈಕೋರ್ಟ್‌ ಆದೇಶವಿದೆ: ಉತ್ತರಾಧಿಕಾರಿಗಳ ಹಕ್ಕುಗಳನ್ನು ಗೌರವಿಸಬೇಕು ಎಂದು ಹೈಕೋರ್ಟ್ ಆದೇಶವಿದೆ. ಹೀಗಾಗಿ ಹಿರಿಯ ಮತ್ತು ಕಿರಿಯ ಶ್ರೀಗಳು ಒಟ್ಟುಗೂಡಿ ಜಾತ್ರೆ ಮಾಡಬೇಕು. ಮಠದ ಪರಂಪರೆ, ಸಂಪ್ರದಾಯಗಳು ಜಾತ್ರೆಯ ಮೂಲಕ ಗೌರವಯುತವಾಗಿ ನಡೆಯಬೇಕು ಎಂದು ಕಿರಿಯ ಶ್ರೀಗಳು ಹೇಳಿದರು. ಮಾಧ್ಯಮಗಳಿಗೆ ಪ್ರತಿಕ್ರೀಯಿಸಿದ ಅವರು, ಮಠದ ಕೆಲ ವಿಚಾರವಾಗಿ ಹೈಕೋರ್ಟಿನಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿದೆ. ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಹೈಕೋರ್ಟ್ ಆದೇಶ ಪಾಲನೆ ಆಗಬೇಕು. ಮಠದ ಭಕ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾತ್ರೆ ಮಾಡಬೇಕು. ಜಾತ್ರೆ ನಡೆಸುವ ಕೆಲ ವಿಷಯಗಳಲ್ಲಿ ಹಿರಿಯ ಗುರುಗಳು ಅಸಮ್ಮತಿ ಇದೆ ಎಂದು ಭಕ್ತರ ಆರೋಪವಾಗಿದೆ. ತೇರು, ಪಲ್ಲಕ್ಕಿ ಉತ್ಸವಗಳನ್ನು ಭಕ್ತರ ಸಂತೋಷ ಮತ್ತು ಏಳ್ಗೆಗಾಗಿ ಮಾಡಬೇಕು. ನಾವು ಹಠಕ್ಕಾಗಿ ಮಾಡುವುದಲ್ಲ. ಜಾತ್ರೆಯು ಪರಸ್ಪರ ಒಮ್ಮತದಿಂದ ಸರಾಗವಾಗಿ ನಡೆಯಬೇಕು. ಹಿರಿಯ ಶ್ರೀಗಳನ್ನು ಪತ್ರ ಮೂಲಕ ಸಂಪರ್ಕ ಮಾಡಿದ್ದೇವೆ. ಅವರಿಂದ ಇನ್ನೂ ಉತ್ತರ ಬಂದಿಲ್ಲ. ಜಾತ್ರೆಯನ್ನು ಸ್ವಯಂ ಸಂಕಲ್ಪದಿಂದ ಹಿರಿಯ ಶ್ರೀಗಳು ನಡೆಸಬೇಕು. ಆದರೆ ಕೆಲವರ ಮಾತು ಕೇಳಿ ಹಿರಿಯ ಶ್ರೀಗಳು ಹೀಗೆ ಮಾಡುತ್ತಿದ್ದಾರೆ ಎಂದು ವಿಷಾದಿಸಿದರು.

Share this article