ಉಡುಪಿಯಲ್ಲಿ ಸಾಗರ ಕವಚ ಕಾರ್ಯಾಚರಣೆ

KannadaprabhaNewsNetwork | Published : Oct 18, 2024 12:08 AM

ಸಾರಾಂಶ

ಅನಿರೀಕ್ಷಿತವಾಗಿ ಯಾವುದೇ ವಿದ್ವಂಸಕ ಕೃತ್ಯ ನಡೆದಾಗ ನೌಕಾಪಡೆ, ಕರಾವಳಿ ಕಾವಲು ಪೊಲೀಸರು ಹೇಗೆ ಸಿದ್ಧರಿರಬೇಕು ಎಂಬುದನ್ನು ತಿಳಿಯಲು ಈ ಕಾರ್ಯಾಚರಣೆಯನ್ನು ನಡಸಲಾಗುತ್ತಿದೆ. ಕಾರ್ಯಾಚರಣೆ ಶುಕ್ರವಾರವೂ (ಅ.18) ಮುಂದುವರಿಯಲಿದೆ.

ಕನ್ನಡಪ್ರಭ ವಾರ್ತೆ ಉಡುಪಿದೇಶದ ಪ್ರಮುಖ ಮೀನುಗಾರಿಕಾ ಬಂದರು ಮಲ್ಪೆ ಪರಿಸರದಲ್ಲಿಯೇ ಇತ್ತೀಚೆಗೆ ಬಾಂಗ್ಲಾದೇಶದ ಅಕ್ರಮ ವಲಸೆದಾರರು ಪತ್ತೆಯಾದ ಹಿನ್ನೆಲೆಯಲ್ಲಿ ಮುಂಜಾಗರೂಕ ಕ್ರಮವಾಗಿ ಗುರುವಾರ ಭಾರತೀಯ ನೌಕಾಪಡೆ, ಕರಾವಳಿ ಕಾವಲು ಪಡೆ, ಜಿಲ್ಲಾ ಪೊಲೀಸ್ ವತಿಯಿಂದ ಸಾಗರ ರಕ್ಷಾ ಕವಚ ಎಂಬ ಅಣಕು ಕಾರ್ಯಾಚರಣೆಯನ್ನು ನಡೆಸಲಾಯಿತು.

ಅನಿರೀಕ್ಷಿತವಾಗಿ ಯಾವುದೇ ವಿದ್ವಂಸಕ ಕೃತ್ಯ ನಡೆದಾಗ ನೌಕಾಪಡೆ, ಕರಾವಳಿ ಕಾವಲು ಪೊಲೀಸರು ಹೇಗೆ ಸಿದ್ಧರಿರಬೇಕು ಎಂಬುದನ್ನು ತಿಳಿಯಲು ಈ ಕಾರ್ಯಾಚರಣೆಯನ್ನು ನಡಸಲಾಗುತ್ತಿದೆ. ಕಾರ್ಯಾಚರಣೆ ಶುಕ್ರವಾರವೂ (ಅ.18) ಮುಂದುವರಿಯಲಿದೆ.

ಮಲ್ಪೆ ಬಂದರು ಮಾತ್ರವಲ್ಲದೇ ಕಾಪುವಿನ ಹೆಜಮಾಡಿ ಬಂದರು, ಲೈಟ್‌ಹೌಸ್‌, ಗಂಗೊಳ್ಳಿ ಬಂದರು, ಉಡುಪಿಯ ಶ್ರೀಕೃಷ್ಣ ಮಠದ ಪರಿಸರದಲ್ಲೂ ಕಾರ್ಯಾಚರಣೆ ನಡೆಸಲಾಯಿತು. ಸಂಶಯಾಸ್ಪದ ಆಗಂತುಕರು ಈ ಪರಿಸರಕ್ಕೆ ಬಂದಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸರಿಗೆ ನೀಡಿ ಅವರನ್ನು ಪತ್ತೆ ಮಾಡಿ ಹಿಡಿಯುವ ಟಾಸ್ಕ್ ನೀಡಲಾಗಿತ್ತು.ಈ ಬಗ್ಗೆ ಕರಾವಳಿ ಕಾವಲು ಪೊಲೀಸ್ ಎಸ್ಪಿ ಮಿಥುನ್ ಎಚ್.ಎನ್. ಪ್ರತಿಕ್ರಿಯಿಸಿ, ಇಂಡಿಯನ್ ಕೋಸ್ಟ್ ಗಾರ್ಡ್ ನೇತೃತ್ವದಲ್ಲಿ ಸಾಗರ ಕವಚ ನಡೆಯುತ್ತಿದೆ. ಕರ್ನಾಟಕ ಮತ್ತು ಕೇರಳದ ಬಂದರುಗಳಲ್ಲಿಯೂ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕರಾವಳಿಯ ಬಂದರುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸಮುದ್ರ ಮಾರ್ಗವಾಗಿ ರಾಷ್ಟ್ರದೋಹಿಗಳ ಯಾವುದೇ ದಾಳಿಯನ್ನು ತಡೆಯಲು ಪೊಲೀಸ್ ಇಲಾಖೆಯ ಸನ್ನದ್ಧತೆಯನ್ನು ಪರೀಕ್ಷಿಸಲು ಈ ಅಣಕು ಕಾರ್ಯಾಚರಣೆಯನ್ನು ನಡೆಸಲಾಗುತ್ತದೆ ಎಂದಿದ್ದಾರೆ.ಈ ಕಾರ್ಯಾಚರಣೆಯಲ್ಲದೇ ಈಗಾಗಲೇ ಈ ಭಾಗದ ಸಮುದ್ರದಲ್ಲಿ ಸಂಶಯಾಸ್ಪದ ಬೋಟುಗಳನ್ನು ಪರಿಶೀಲಿಸಲಾಗುತ್ತಿದೆ, ಮುಂದಿನ ತಿಂಗಳು ಸಮುದ್ರದ ನಡುವೆ ಸೀ ವಿಜಿಲ್ ಕಾರ್ಯಾಚರಣೆ ನಡೆಯಲಿದೆ. ಕಳೆದ ಎರಡು ವಾರಗಳಲ್ಲಿ 135 ಮೀನುಗಾರರ ಮೀಟಗ್ಗ್‌ಗಳನ್ನು ಮಾಡಿದ್ದೇವೆ. ಮೀನುಗಾರರೇ ನಮಗೆ ಮೊದಲ ಮಾಹಿತಿದಾರರು, ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದರೆ ಇಲಾಖೆಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ ಎಂದವರು ತಿಳಿಸಿದ್ದಾರೆ.

ಕರಾವಳಿಯ 3 ಜಿಲ್ಲೆಗಳಲ್ಲಿ ಬುಧವಾರ ಮತ್ತು ಗುರುವಾರ 36 ಗಂಟೆಗಳ ಕಾಲ ಈ ಸಾಗರ ಕವಚ ಕಾರ್ಯಾಚರಣೆ ನಡೆದಿದೆ. ಒಟ್ಟು 25 ಕಡೆಗಳಲ್ಲಿ ಅಣಕು ವಿದ್ವಂಸಕ ಕೃತ್ಯಗಳನ್ನು ನಡೆಸಲಾಗಿದ್ದು, ಅವುಗಳನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ.

Share this article