ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಂಗಳವಾರ ಕೋಟೆ ರಸ್ತೆಯ ಕೋರ್ಪಲಯ್ಯನ ಛತ್ರದ ಬಳಿ ಇರುವ ತುಂಗಾ ಮಂಟಪದಲ್ಲಿ ತುಂಬಿದ ತುಂಗೆಗೆ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಪ್ರಸ್ತುತ ಪರಿಸ್ಥಿತಿ ನೋಡಿದರೆ ದುಃಖವಾಗುತ್ತದೆ. ಎಲ್ಲಾ ಪಕ್ಷಗಳಲ್ಲೂ ಗೊಂದಲವುಂಟಾಗಿದೆ. ಯಾವ ಪಕ್ಷದಲ್ಲೂ ಶಿಸ್ತಿಲ್ಲ, ಸರ್ಕಾರ ಬರೀ ಹೇಳಿಕೆ ನೀಡಿ, ಕಾಲ ತಳ್ಳುತ್ತಿದೆ. ರಾಜ್ಯದಲ್ಲಿ ರಾಜಕೀಯ ಅಸ್ಥಿರತೆವುಂಟಾಗಿದೆ. ದಲಿತ, ಹಿಂದುಳಿದವರಿಗೆ ನ್ಯಾಯ ಸಿಗಲಿ ಎಂದು ನಾನು ತಾಯಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದರು.
ಹಿಂದುಳಿದ ವರ್ಗದ ಸರ್ಕಾರ ಎಂದು ಹೇಳಿ ಅಧಿಕಾರಕ್ಕೆ ಬಂದ ಈ ಸರ್ಕಾರ ಅವರ ಅಭಿವೃದ್ಧಿಗೆ ಮೀಸಲಿಟ್ಟ 37 ಸಾವಿರ ಕೋಟಿ ರು.ಗಳನ್ನು ಅನ್ಯ ಉದ್ದೇಶಕ್ಕೆ ಬಳಸಿ ಅವರಿಗೆ ಮೋಸ ಮಾಡಿದೆ. ಸ್ವತಃ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ನನಗೆ ಮತ್ತು ನನ್ನ ಸರ್ಕಾರಕ್ಕೆ ಇಷ್ಟು ವರ್ಷವಾದರೂ ಹಿಂದುಳಿದ ವರ್ಗವನ್ನು ಮೇಲಕ್ಕೆತ್ತಲು ಆಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚಾಗಿದೆ. ಹೆಣ್ಣು ಮಕ್ಕಳಿಗೆ ಗೌರವ ಸಿಗುತ್ತಿಲ್ಲ. ಹೆಣ್ಣು ಮಕ್ಕಳಿಗೆ, ರೈತರಿಗೆ, ದಲಿತರಿಗೆ, ಹಿಂದುಳಿದ ವರ್ಗದವರಿಗೆ, ಜನಸಾಮಾನ್ಯರಿಗೆ ನ್ಯಾಯ ಸಿಗಲಿ ಎಂದು ತುಂಗಾಮಾತೆಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ವಿವರಿಸಿದರು.ಧರ್ಮಸ್ಥಳದ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಮಂಜುನಾಥನನ್ನು ನಂಬಿದ ಕೋಟ್ಯಾಂತರ ಭಕ್ತರಿದ್ದಾರೆ. ಕ್ಷೇತ್ರದ ಗೌರವ ಕಡಿಮೆಯಾಗದಿರಲಿ, ಎಸ್ಐಟಿ ಬೇಗನೆ ತನಿಖೆ ನಡೆಸಿ ಭಕ್ತರಲ್ಲಿ ಉಂಟಾದ ಗೊಂದಲವನ್ನು ದೂರ ಮಾಡಲಿ ಎಂದರು.
ಈ ಸಂದರ್ಭದಲ್ಲಿ ಕೆ.ಈ. ಕಾಂತೇಶ್, ಈ. ವಿಶ್ವಾಸ, ಬಾಲು, ಜಾದವ್, ಶಿವಾಜಿ, ಸುವರ್ಣಾಶಂಕರ್, ಸತ್ಯನಾರಾಯಣ್, ರಮೇಶ್ ಮತ್ತಿತರರಿದ್ದರು.