ಅಧಿಕಾರಿಗಳು ಕಚೇರಿ ಕೆಲಸಗಳಲ್ಲಿ ಇತರರಿಗೆ ಮಾದರಿಯಾಗಿ

KannadaprabhaNewsNetwork |  
Published : Jul 27, 2025, 12:00 AM IST
 ಜಿಲ್ಲೆಗೆ ಹೊಸದಾಗಿ ಆಗಮಿಸಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಯಳಂದೂರು ತಹಶೀಲ್ದಾರ್ ನಯನ, ಗುಂಡ್ಲುಪೇಟೆ ತಹಶೀಲ್ದಾರ್ ತನ್ಮಯ್ ಹಾಗೂ ಹನೂರು ತಹಶೀಲ್ದಾರ್ ಚೈತ್ರಾ ಅವರನ್ನು ಸ್ವಾಗತಿಸಲಾಯಿತು.  | Kannada Prabha

ಸಾರಾಂಶ

ನಿರ್ಗಮಿತ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಗುಂಡ್ಲುಪೇಟೆ ತಹಸೀಲ್ದಾರ್ ರಮೇಶ್ ಬಾಬು ಹಾಗೂ ಹನೂರು ತಹಸೀಲ್ದಾರ್ ಗುರುಪ್ರಸಾದ್ ಅವರಿಗೆ ಜಿಲ್ಲಾಡಳಿತದಿಂದ ಆತ್ಮೀಯ ಬಿಳ್ಕೋಡುಗೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ನಿರ್ಗಮಿತ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಗುಂಡ್ಲುಪೇಟೆ ತಹಸೀಲ್ದಾರ್ ರಮೇಶ್ ಬಾಬು ಹಾಗೂ ಹನೂರು ತಹಸೀಲ್ದಾರ್ ಗುರುಪ್ರಸಾದ್ ಅವರಿಗೆ ಜಿಲ್ಲಾಡಳಿತದಿಂದ ಆತ್ಮೀಯ ಬಿಳ್ಕೋಡುಗೆ ನೀಡಲಾಯಿತು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ನಿರ್ಗಮಿತರಿಗೆ ಸನ್ಮಾನಿಸಿ ಬಿಳ್ಕೋಡುಗೆ ನೀಡುವುದರ ಜೊತೆಗೆ ಜಿಲ್ಲೆಗೆ ಹೊಸದಾಗಿ ಆಗಮಿಸಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಯಳಂದೂರು ತಹಸೀಲ್ದಾರ್ ನಯನ, ಗುಂಡ್ಲುಪೇಟೆ ತಹಸೀಲ್ದಾರ್ ತನ್ಮಯ್ ಹಾಗೂ ಹನೂರು ತಹಸೀಲ್ದಾರ್ ಚೈತ್ರಾರನ್ನು ಸ್ವಾಗತಿಸಲಾಯಿತು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ, ನಿರ್ಗಮಿತ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಗುಂಡ್ಲುಪೇಟೆ ತಹಸೀಲ್ದಾರ್ ರಮೇಶ್ ಬಾಬು ಹಾಗೂ ಹನೂರು ತಹಸೀಲ್ದಾರ್ ಗುರುಪ್ರಸಾದ್ ಜಿಲ್ಲೆಯಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಜೊತೆಗೆ ಜಿಲ್ಲೆಯ ಜನರೊಂದಿಗೆ ಒಡನಾಟ ಹೊಂದಿದ್ದರು. ಅಧಿಕಾರಿಗಳು ಕಚೇರಿ ಕೆಲಸಗಳಲ್ಲಿ ಇತರರಿಗೆ ಮಾದರಿಯಾಗಬೇಕು. ಅಧಿಕಾರದಲ್ಲಿ ಉದ್ವೇಗಕ್ಕೆ ಒಳಗಾಗಬಾರದು. ಸಾರ್ವಜನಿಕರ ಸೇವೆಯೇ ನಮಗೆ ಸಿಕ್ಕಿರುವ ಭಾಗ್ಯವಾಗಿದೆ ಎಂದರು.ನಿರ್ಗಮಿತ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಮಾತನಾಡಿ, ಜಿಲ್ಲೆಯಲ್ಲಿ ಪ್ರೊಬೇಷನರಿ ತಹಸೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿರುವುದು ತೃಪ್ತಿ ತಂದಿದೆ. ಚಾಮರಾಜನಗರವನ್ನು ನನ್ನ ಸ್ವಂತ ಜಿಲ್ಲೆಯಾಗಿ ಭಾವಿಸಿ ಕೆಲಸ ಮಾಡಿದ್ದೇನೆ. ನನ್ನ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳಾ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರ ಮಾರ್ಗದರ್ಶನದಲ್ಲಿ ಉತ್ತಮ ಕೆಲಸ ಮಾಡಿದ ಅನುಭವವಿದೆ. ಜಿಲ್ಲೆಯಲ್ಲಿ ಸಲ್ಲಿಸಿದ ಸೇವೆಯನ್ನು ಜೀವನಪೂರ್ತಿ ಸ್ಮರಿಸಿಕೊಳ್ಳುವೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಟಿ ಜವರೇಗೌಡ ಮಾತನಾಡಿ, ವರ್ಗಾವಣೆ ಎನ್ನುವುದು ಸಹಜ ಪ್ರಕ್ರಿಯೆಯಾಗಿದೆ. ಒಂದೊಂದು ಜಿಲ್ಲೆಯಲ್ಲಿಯೂ ವಿಭಿನ್ನ ಸವಾಲುಗಳಿರುತ್ತವೆ. ಅವುಗಳನ್ನು ಸೂಕ್ತವಾಗಿ ನಿಭಾಯಿಸುವ ಗುರಿ ಇರಬೇಕು. ಆಡಳಿತ ನಿರ್ವಹಣೆಗೆ ಇಲ್ಲಿನ ಅಧಿಕಾರಿಗಳು, ಸಿಬ್ಬಂದಿ ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದರು.

ಜಿಪಂ ಸಿಇಒ ಮೋನಾ ರೋತ್, ಬಿ.ಆರ್. ಮಹೇಶ್, ಬಸವರಾಜು, ರಮೇಶ್ ಬಾಬು, ಗುರುಪ್ರಸಾದ್, ಯೋಗಾನಂದ, ಉಲ್ಲಾಸ್, ಶ್ರೀಧರ್, ಹಳ್ಳಿಕೆರೆ ಭಾಗ್ಯರಾಜ್ ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ