ರಸಗೊಬ್ಬರ ಮಾರಾಟ ಮೇಲೆ ನಿಗಾ ಇಡಲು ಅಧಿಕಾರಿಗಳಿಗೆ ಸೂಚನೆ

KannadaprabhaNewsNetwork |  
Published : May 15, 2026, 02:00 AM IST
ಹಾನಗಲ್ಲಿನಲ್ಲಿ ನಡೆದ ಕೃಷಿ ಪರಿಕರ ಮಾರಾಟಗಾರರು, ರೈತ ಸಂಘ, ರೈತರು, ಕೃಷಿ ಅಧಿಕಾರಿಗಳ ಸಭೆಯನ್ನು ತಹಸೀಲ್ದಾರ್ ಎಸ್. ರೇಣುಕಾ ಉದ್ಘಾಟಿಸಿದರು. | Kannada Prabha

ಸಾರಾಂಶ

ಹಾನಗಲ್ಲ ಪಟ್ಟಣದ ಡಾ. ಬಾಬು ಜಗಜೀವನರಾಂ ಭವನದಲ್ಲಿ ಕೃಷಿ ಇಲಾಖೆ ಕೃಷಿ ಪರಿಕರ ಮಾರಾಟಗಾರರು, ರೈತ ಸಂಘಟನೆಗಳು, ರೈತರು, ಕೃಷಿ ಅಧಿಕಾರಿಗಳ ಜಂಟಿ ಸಭೆ ನಡೆಯಿತು.

ಹಾನಗಲ್ಲ: ರಸಗೊಬ್ಬರದ ಅಕ್ರಮ ಸಂಗ್ರಹ, ಕಾಳಸಂತೆಯಲ್ಲಿ ಮಾರಾಟ, ಎಂಆರ್‌ಪಿ ದರ ಉಲ್ಲಂಘಿಸಿ ಮಾರಾಟ ಕಾನೂನು ಬಾಹೀರವಾಗಿದ್ದು, ಇಂತಹ ಪ್ರಕರಣಗಳ ಬಗ್ಗೆ ಖರೀದಿದಾರರು ನಿರ್ದಾಕ್ಷಿಣ್ಯವಾಗಿ ದೂರು ನೀಡಿ, ಕೃಷಿ ಇಲಾಖೆ ಕೂಡ ಅಂಥವರ ಮೇಲೆ ನಿಗಾ ಇಡಬೇಕು ಎಂದು ತಹಸೀಲ್ದಾರ್‌ ಎಸ್. ರೇಣುಕಾ ಕಟ್ಟಪ್ಪಣೆ ಮಾಡಿದರು.

ಗುರುವಾರ ಸಂಜೆ ಪಟ್ಟಣದ ಡಾ. ಬಾಬು ಜಗಜೀವನರಾಂ ಭವನದಲ್ಲಿ ಕೃಷಿ ಇಲಾಖೆ ಕೃಷಿ ಪರಿಕರ ಮಾರಾಟಗಾರರು, ರೈತ ಸಂಘಟನೆಗಳು, ರೈತರು, ಕೃಷಿ ಅಧಿಕಾರಿಗಳ ಜಂಟಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ರೈತರು ಕೃಷಿ ಪರಿಕರ ಮಾರಾಟಗಾರರ ನಡುವೆ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ಸರ್ಕಾರದ ನಿಯಮದಂತೆ ರಸಗೊಬ್ಬರ ಮಾರಾಟ ಮಾಡಬೇಕು. ಎಫ್‌ಐಡಿ ನಿಯಮದಂತೆ ಗೊಬ್ಬರ ಮಾರಾಟ ಮಾಡಬೇಕು. ವಿಶೇಷವಾಗಿ ಯೂರಿಯಾ ಗೊಬ್ಬರ ಕಾನೂನುಬಾಹೀರವಾಗಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ ಎಂಬ ದೂರುಗಳಿವೆ. ಕೃಷಿ ಹಾಗೂ ಕಂದಾಯ ಇಲಾಖೆಗಳು ಇಂತಹ ಪ್ರಕರಣಗಳ ವಿಷಯದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹಾವೇರಿ ಕೃಷಿ ಇಲಾಖೆ ಉಪ ಕೃಷಿ ನಿರ್ದೇಶಕ ಶಿವಕುಮಾರ ಮಲ್ಲಾಡದ ಮಾತನಾಡಿ, ರಸಗೊಬ್ಬರದ ಕೊರತೆ ಇಲ್ಲ. ಕಳಪೆ ಗುಣಮಟ್ಟದ ರಸಗೊಬ್ಬರ ಮಾರಾಟಕ್ಕೂ ಅವಕಾಶವಿಲ್ಲ. ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ರಸೀದಿ ಸಹಿತ ಮಾರಾಟ ಮಾಡಬೇಕು. ನ್ಯಾನೋ ಗೊಬ್ಬರ ಮಾರಾಟದ ಪ್ರಾತ್ಯಕ್ಷಿಕೆಯನ್ನು ಪ್ರತಿ ಹಳ್ಳಿಯಲ್ಲಿ ನಡೆಸಲಾಗುವುದು. ನ್ಯಾನೋ ರಸಗೊಬ್ಬರ ಬಳಕೆಗೆ ಆದ್ಯತೆ ನೀಡಿ ಎಂದರು.

ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪೂರ, ತಾಲೂಕು ರೈತರ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ, ಎಂ.ಎಸ್. ಪಾಟೀಲ, ಚನ್ನಬಸನಗೌಡ ಹಾವಣಗಿ, ರುದ್ರಪ್ಪ ಹಣ್ಣಿ, ಶ್ರೀಕಾಂತ ದುಂಡಣ್ಣನವರ ಮಾತನಾಡಿ, ಕೃಷಿ ಇಲಾಖೆಗೆ ರಸಗೊಬ್ಬರ ಮಾರಾಟದ ವಿಷಯದಲ್ಲಿ ಸ್ಪಷ್ಟ ನಿಲುವು ಇಲ್ಲ. ರಸಗೊಬ್ಬರದ ಜತೆಗೆ ಪೋಷಕಾಂಶಗಳನ್ನು ಲಿಂಕ್ ಮಾಡುವುದು ಕಡ್ಡಾಯ ಮಾಡಬಾರದು. ರೈತರನ್ನು ಅವಿಶ್ವಾಸದಿಂದ ನೋಡಬೇಡಿ. ವಾಮಮಾರ್ಗದಲ್ಲಿ ರಸಗೊಬ್ಬರ ಮಾರಾಟಕ್ಕೆ ಇಲಾಖೆ ತಡೆ ಒಡ್ಡಬೇಕು ಎಂದು ಒತ್ತಾಯಿಸಿದರು. ಒಂದು ಸಂದರ್ಭದಲ್ಲಿ ರೈತರು ಅಧಿಕಾರಿಗಳ ನಡುವೆ ಮಾತಿನ ಚಕಮಕಿಯೂ ನಡೆದು, ಅಂತಿಮವಾಗಿ ಎಂಆರ್‌ಪಿ ದರದಲ್ಲಿಯೇ ರಸಗೊಬ್ಬರ ಮಾರಾಟ ಮಾಡಬೇಕು ಎಂದು ಒತ್ತಾಯಿಸಿದರು.

ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ, ಸಂಕನಗೌಡ ದೇವಿಕೊಪ್ಪ, ಮಹೇಶ ಬಣಕಾರ, ನಾಗಣ್ಣ ಒಡೆಯರ, ಬಸವರಾಜ ಉತ್ತಂಗಿ, ಬಸವಂತಪ್ಪ ಮೆಳ್ಳಳ್ಳಿ, ಸಹಾಯಕ ಕೃಷಿ ನಿರ್ದೇಶಕ ಸಿ.ಟಿ. ಸುರೇಶ, ತೋಟಗಾರಿಕೆ ಸಹಾಯಕ ನಿರ್ದೇಶಕ ವೀರಭದ್ರಯ್ಯ, ಸಂಗಮೇಶ ಹಕ್ಲಪ್ಪನವರ, ಶಿವಲಿಂಗಪ್ಪ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾನತೆಯ ಹೆಸರಿನಲ್ಲಿ ಮಹಿಳೆಯರ ಶೋಷಣೆ
ಸಿಐಟಿಯು ಕಾರ್ಯಕರ್ತರಿಂದ ಪ್ರತಿಭಟನೆ