ಕನ್ನಡಪ್ರಭ ವಾರ್ತೆ ಮದ್ದೂರು
ಆನೆಗಳ ದಾಳಿಯಿಂದಾಗಿ ರೈತರು ಬೆಳೆದಿದ್ದ ಲಕ್ಷಾಂತರ ರು. ಬೆಳೆ ನಾಶವಾಗಿದೆ. ತಾಲೂಕು ಬಸವನ ಬೆಟ್ಟದ ಅರಣ್ಯ ಪ್ರದೇಶದಿಂದ ಆಹಾರ ಅರಸಿ ವಲಸೆ ಬಂದಿದ್ದ ಎರಡು ಸಲಗ ಹಾಗೂ ಒಂದು ಹೆಣ್ಣಾನೆ ಭಾನುವಾರ ರಾತ್ರಿ ತೈಲೂರು ಕೆರೆ ಮತ್ತು ಮಾದನಾಯಕನಹಳ್ಳಿ ಗಡಿಭಾಗದಲ್ಲಿ ಪೊದೆಯೊಂದರಲ್ಲಿ ಬಿಡು ಬಿಟ್ಟಿದ್ದವು.
ಆನೆಗಳ ಹಿಂಡನ್ನು ಕಂಡ ದಾರಿಹೋಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ನಂತರ ಸ್ಥಳಕ್ಕೆ ಧಾವಿಸಿದ ಮದ್ದೂರು ವಲಯ ಅರಣ್ಯ ಅಧಿಕಾರಿಗಳು ಆನೆಗಳು ಆಸು ಪಾಸಿನ ಗ್ರಾಮಗಳಿಗೆ ಮೇಲೆ ದಾಳಿ ಮಾಡದಂತೆ ತೀವ್ರ ಕಟ್ಟೆಚರ ವಹಿಸಿದ್ದರು.ರಾತ್ರಿ 11ರ ಸುಮಾರಿಗೆ ಮಂಡ್ಯ ಎಸಿಎಫ್ ಮಹದೇವಸ್ವಾಮಿ ಹಾಗೂ ಮದ್ದೂರು ವಲಯ ಅರಣ್ಯ ಅಧಿಕಾರಿ ಗವಿಯಪ್ಪ ಮತ್ತು ಸಿಬ್ಬಂದಿ ಜಂಟಿ ಕಾರ್ಯಚರಣೆ ನಡೆಸುವ ಮೂಲಕ ಆನೆಗಳ ಹಿಂಡನ್ನು ಮತ್ತೆ ಕಾಡಿಗಟ್ಟಲು ಕ್ರಮ ಕೈಗೊಂಡಿದ್ದರು.
ಆನೆಗಳ ಹಿಂಡು ಈಗ ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಕೆರೆಯಲ್ಲಿ ಬಿಡು ಬಿಟ್ಟಿದ್ದು. ಅಲ್ಲಿಂದ ಕಾಡಾನೆಗಳನ್ನು ಮತ್ತೆ ಕಾಡಿಗಟ್ಟಲು ಸಂಜೆ ವೇಳೆಗೆ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.