ಹುಡೇಜಾಲಿ ಗ್ರಾಮಕ್ಕೆ ಅಧಿಕಾರಿಗಳ ಭೇಟಿ, ಪರಿಶೀಲನೆ

KannadaprabhaNewsNetwork |  
Published : Feb 03, 2026, 02:30 AM IST
ಫೆ. 2ರಂದು ಕನ್ನಡಪ್ರಭ ಪ್ರಕಟಿಸಿದ್ದ ವರದಿ | Kannada Prabha

ಸಾರಾಂಶ

ಚರ್ಮರೋಗ ಕಾಣಿಸಿಕೊಂಡ ತಾಲೂಕಿನ ಚಿಕ್ಕಮಾದಿನಾಳ ಗ್ರಾಪಂ ವ್ಯಾಪ್ತಿಯ ಜಾಲಿಹುಡಾ ಗ್ರಾಮಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನಕಗಿರಿ: ಚರ್ಮರೋಗ ಕಾಣಿಸಿಕೊಂಡ ತಾಲೂಕಿನ ಚಿಕ್ಕಮಾದಿನಾಳ ಗ್ರಾಪಂ ವ್ಯಾಪ್ತಿಯ ಜಾಲಿಹುಡಾ ಗ್ರಾಮಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗ್ರಾಮದಲ್ಲಿರುವ ಎರಡು ಬೋರ್‌ವೆಲ್ ಗಳ ಪೈಕಿ ಚಿಕ್ಕಮಾದಿನಾಳ ರಸ್ತೆಯಲ್ಲಿನ ಬೋರ್‌ವೆಲ್ ತಿಪ್ಪೆಗುಂಡಿಯಲ್ಲಿದ್ದು, ಈ ನೀರಿನಿಂದಲೇ ಚರ್ಮರೋಗಗಳು ಕಾಣಿಸಿಕೊಳ್ಳುತ್ತಿವೆ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿ ಬಂದಿತ್ತು. ಚರ್ಮ ರೋಗದ ಕುರಿತಾಗಿ ಫೆ. ೨ರಂದು "ಕನ್ನಡಪ್ರಭ " "ಚರ್ಮರೋಗಕ್ಕೆ ಆತಂಕಗೊಂಡ ಗ್ರಾಮಸ್ಥರು " ಎನ್ನುವ ಶಿರ್ಷಿಕೆಯಡಿ ವಿಸ್ತೃತ ವರದಿ ಸುದ್ದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತುಕೊಂಡಿರುವ ತಹಸೀಲ್ದಾರ್ ವಿಶ್ವನಾಥ ಮುರುಡಿ, ತಾಪಂ ಕಾರ್ಯನಿರ್ವಾಹಕಾಧಿಕಾರಿ ರಾಜಶೇಖರ, ಗ್ರಾಪಂ ಆಡಳಿತಾಧಿಕಾರಿ ವಿರೂಪಾಕ್ಷಿ, ಪಿಡಿಒ ಬಸವರಾಜ ಸಂಕನಾಳ ಜಂಟಿಯಾಗಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರು.

ಈ ಬೋರ್‌ವೆಲ್ ಇರುವ ಪ್ರದೇಶ ಮೊದಲು ತಗ್ಗು ಪ್ರದೇಶವಾಗಿತ್ತು. ಇದೀಗ ಸಮತಟ್ಟಾಗಿದೆ. ಈ ನೀರು ಕುಡಿಯಲು ಯೋಗ್ಯವಾಗಿಲ್ಲ. ಅದಕ್ಕಾಗಿ ಬಳಕೆಗೆ ಮಾತ್ರ ಉಪಯೋಗಿಸುತ್ತಿದ್ದೇವು. ಆದರೆ, ಗ್ರಾಮದ ಹಲವರಲ್ಲಿ ಚರ್ಮರೋಗ ಕಾಣಿಸಿಕೊಂಡಿದ್ದು, ಈ ನೀರಿನ ಬಳಕೆಯಿಂದಲೇ ಎನ್ನುವ ಅನುಮಾನವಿದ್ದು, ಕೂಡಲೇ ಈ ನೀರಿನ ಪರೀಕ್ಷೆ ನಡೆಸಬೇಕು ಎಂದು ಕನಕಪ್ಪ ಮಮ್ಮಳಿ, ರೈತ ಮುಖಂಡ ನಿಂಗಪ್ಪ ಅಧಿಕಾರಿಗಳ ಗಮನಕ್ಕೆ ತಂದರು.

ಈ ಬೋರವೆಲ್ ನೀರು ಬಳಕೆಗೆ ಯೋಗ್ಯ ಇದೆಯೋ ಇಲ್ಲವೋ ಎನ್ನುವುದನ್ನು ಕೂಡಲೇ ತಪಾಸಣೆ ಮಾಡಿಸುವಂತೆ ಪಿಡಿಒ ಬಸವರಾಜ ಸಂಕನಾಳರಿಗೆ ತಹಸೀಲ್ದಾರ್ ಸೂಚಿಸಿದರು.

ಚರ್ಮರೋಗದ ತಪಾಸಣೆ:

ಚರ್ಮರೋಗ ಸಂಬಂಧಿಸಿದಂತೆ ಎಚ್ಚೆತ್ತುಕೊಂಡಿರುವ ತಾಲೂಕಿನ ಮುಸಲಾಪೂರದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ಚರ್ಮರೋಗದ ಕುರಿತು ತಪಾಷಣೆ ನಡೆಸಿದರು. ನೀರು, ಅನೈರ್ಮಲ್ಯ, ಆಹಾರದಿಂದಲೂ ಈ ರೀತಿಯ ಚರ್ಮರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ತಹಸೀಲ್ದಾರ್‌ಗೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ 33 ಹಳ್ಳಿಗಳಲ್ಲಿ ಪ್ರತಿ ದಿನ ಸಂಜೆ 7- 9 ಗಂಟೆವರೆಗೆ ಮೊಬೈಲ್‌, ಟಿವಿ ಬಂದ್‌
ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ರು ಸಚಿವೆ ಲಕ್ಷ್ಮೀ