ಕೂಡ್ಲಿಗಿಯ ಕಂದಗಲ್ಲು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಅಧಿಕಾರಿಗಳ ಭೇಟಿ

KannadaprabhaNewsNetwork |  
Published : Aug 08, 2024, 01:40 AM IST
ವಿಜಯನಗರ ಜಿಲ್ಲಾ ಸಮಾಜಕಲ್ಯಾಣಾಧಿಕಾರಿ ಹೆಚ್.ವಿ.ಮಂಜುನಾಥ ಅವರು ಬುಧವಾರ ಕಂದಗಲ್ಲು ಮುರಾರ್ಜಿದೇಸಾಯಿ ವಸತಿಶಾಲೆಗೆ ಭೇಟಿ ನೀಡಿ ಪ್ರಾಂಶುಪಾಲರು, ಸಿಬ್ಬಂಧಿ ಹಾಗೂ ವಿದ್ಯಾರ್ಥಿಗಳೊಂದಿಗೆ ಇಲ್ಲಿಯ ಸಮಸ್ಯೆ ಹಾಗೂ ಪರಿಹಾರಗಳ ಬಗ್ಗೆ ಚರ್ಚಿಸಿ ಸ್ಥಳದಲ್ಲಿಯೇ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದರು.   | Kannada Prabha

ಸಾರಾಂಶ

ಕಂದಗಲ್ಲು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಉಪನ್ಯಾಸಕ ಕೊರತೆ ಸೇರಿದಂತೆ ಅಲ್ಲಿಯ ಮೂಲಭೂತ ಸಮಸ್ಯೆಗಳ ಬಗ್ಗೆ ಆ.6, 7ರಂದು ಕನ್ನಡಪ್ರಭ ಸರಣಿ ವರದಿ ಪ್ರಕಟಿಸಿತ್ತು.

ಕೂಡ್ಲಿಗಿ: ತಾಲೂಕಿನ ಕಂದಗಲ್ಲು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಬುಧವಾರ ಭೇಟಿ ನೀಡಿದ ವಿಜಯನಗರ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎಚ್.ವಿ. ಮಂಜುನಾಥ ಅಲ್ಲಿನ ಸಮಸ್ಯೆ ಆಲಿಸಿದರು. ಬಳಿಕ ಉಪನ್ಯಾಸಕರ ಕೊರತೆ, ಮೂಲಭೂತ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಿದರು.

ಕಂದಗಲ್ಲು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಉಪನ್ಯಾಸಕ ಕೊರತೆ ಸೇರಿದಂತೆ ಅಲ್ಲಿಯ ಮೂಲಭೂತ ಸಮಸ್ಯೆಗಳ ಬಗ್ಗೆ ಆ.6, 7ರಂದು ಕನ್ನಡಪ್ರಭ ಸರಣಿ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ವಿಜಯನಗರ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎಚ್.ವಿ. ಮಂಜುನಾಥ ಬುಧವಾರ ಶಾಲೆಗೆ ಭೇಟಿ ನೀಡಿ ಪ್ರಾಂಶುಪಾಲರು, ಸಿಬ್ಬಂದಿ, ವಿದ್ಯಾರ್ಥಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಟ್ಟರು.

ಇಬ್ಬರು ಉಪನ್ಯಾಸಕರ ಆಗಮನ:

ವಸತಿ ಶಾಲೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ವಿಷಯಗಳಿಗೆ 2 ತಿಂಗಳಿಗೂ ಹೆಚ್ಚು ಕಾಲ ಉಪನ್ಯಾಸಕರು ಇರಲಿಲ್ಲ. ಅತಿಥಿ ಉಪನ್ಯಾಸಕರು ಇದ್ದರೂ ಸರಿಯಾಗಿ ಬರುತ್ತಿರಲಿಲ್ಲ. ಪಾಠ ಮಾಡುವುದು ವಿದ್ಯಾರ್ಥಿಗಳಿಗೆ ಅರ್ಥವಾಗುತ್ತಿರಲಿಲ್ಲ ಎಂಬುದು ವಿದ್ಯಾರ್ಥಿಗಳ ದೂರಾಗಿತ್ತು. ಉಪನ್ಯಾಸಕರನ್ನು ಬೇರೆ ಶಾಲೆಯಿಂದ ಡೆಪ್ಯೂಟೇಶನ್ ಮೇಲೆ ಕರೆಸಿ ಪಾಠ ಮಾಡಿಸಿದರು.

ಊಟದ ಬಗ್ಗೆ ತಕರಾರು ತೆಗೆಯದ ವಿದ್ಯಾರ್ಥಿಗಳು:

ಗುಣಮಟ್ಟದ ಆಹಾರ ನಿರಂತರ ನೀಡಲಾಗುತ್ತಿದೆ. ಗ್ರೈಂಡರ್‌ ರಿಪೇರಿ ಇದ್ದ ಕಾರಣ ದೋಸೆ ಮಾತ್ರ ಮೆನು ಪ್ರಕಾರ ನೀಡಿಲ್ಲ. ಉಳಿದಂತೆ ಮೆನು ಪ್ರಕಾರ ನೀಡುತ್ತಿದ್ದಾರೆ ಎಂದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಸಮಾಜ ಕಲ್ಯಾಧಿಕಾರಿಗಳಿಗೆ ವಿದ್ಯಾರ್ಥಿಗಳು ಮುಕ್ತಮನಸ್ಸಿನಿಂದ ತಿಳಿಸಿದರು.

24 ಗಂಟೆಯೊಳಗೆ ಯುಪಿಎಸ್ ಬ್ಯಾಟರಿ ವ್ಯವಸ್ಥೆ:

ವಸತಿಶಾಲೆ ಮಕ್ಕಳು ವಿದ್ಯುತ್ ಇಲ್ಲದಿದ್ದಾಗ ಕತ್ತಲಲ್ಲಿ ಇರಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ವರದಿ ಪ್ರಕಟವಾದ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು 24 ತಾಸಿನೊಳಗೆ ಯುಪಿಎಸ್ ಸರಿಪಡಿಸಲಾಗುವುದು. ವಿದ್ಯುತ್ ಇಲ್ಲದಿದ್ದರೂ ಮಕ್ಕಳಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುವುದಾಗಿ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಪ್ರಾಂಶುಪಾಲ, ಸಿಬ್ಬಂದಿಗೆ ಡ್ರಿಲ್:

ವಸತಿ ಶಾಲೆಯಲ್ಲಿ ಯಾವುದೇ ಸಮಸ್ಯೆಗಳಿದ್ದರೆ ತಕ್ಷಣವೇ ಪರಿಹರಿಸಬೇಕು. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಿ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪ್ರಾಂಶುಪಾಲರು, ಡಿ ಗ್ರೂಪ್ ನೌಕರರಿಗೆ ಎಚ್ಚರಿಸಿದ್ದಾರೆ. ಶೌಚಾಲಯಗಳನ್ನು ಸದಾ ಸುಸ್ಥಿತಿಯಲ್ಲಿಡಬೇಕೆಂದು ಕಿವಿಮಾತು ಹೇಳಿದ್ದಾರೆ.

ವಿದ್ಯಾರ್ಥಿಗಳ ಸಂತಸ:

ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಣ್ಣಪುಟ್ಟ ಸಮಸ್ಯೆಗಳು ನೀಗಿವೆ. ಉಪನ್ಯಾಸಕರನ್ನು ಸಹ ಡೆಪ್ಯುಟೇಶನ್ ಮೇಲೆ ನಿಯೋಜಿಸಿದ್ದರಿಂದ ಕನ್ನಡಪ್ರಭ ಕಾಳಜಿಗೆ ಇಲ್ಲಿಯ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ