ಸರ್ಕಾರವು ಸಮುದ್ರ ಪ್ರತಿಬಂಧಕ ಕಾಮಗಾರಿಗಳಿಗೆ ಕರಾವಳಿ ತೀರದ 3 ಜಿಲ್ಲೆಗಳಿಗೆ 200 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿ ಅಲ್ಲಲ್ಲಿ ಅಲ್ಪ ಸ್ವಲ್ಪ ಕಾಮಗಾರಿ ನಡೆಸುವ ಬದಲು ಅತಿ ಹೆಚ್ಚು ಕಡಲ ಕೊರೆತ ಉಂಟಾಗುವ ಪ್ರದೇಶಗಳಲ್ಲಿ ನಿರ್ದಿಷ್ಟ ಕಾಮಗಾರಿ ನಡೆಸಿ ಪೂರ್ಣಗೊಳಿಸುವಂತೆ ಖಾದರ್ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಕಡಲ್ಕೊರೆತ ಕಾಮಗಾರಿಗಳನ್ನು ನಡೆಸುವಾಗ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ನಡೆಸುವಂತೆ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಸೂಚಿಸಿದ್ದಾರೆ.ನಗರದ ಸರ್ಕ್ಯೂಟ್ ಹೌಸ್ನಲ್ಲಿ ಈ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಕಡಲ್ಕೊರೆತ ಕಾಮಗಾರಿ ನಡೆಸುವಾಗ ಅಧಿಕಾರಿಗಳು ಸ್ಥಳೀಯ ಪ್ರದೇಶಕ್ಕೆ ಸೂಕ್ತವಲ್ಲದ ತಂತ್ರಜ್ಞಾನದಿಂದ ಕಾಮಗಾರಿ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಆಕ್ಷೇಪಣೆ ಬರುತ್ತಿದೆ. ಕಡಲ ಅಲೆಗಳ ಅಬ್ಬರವು ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯಲ್ಲಿರುತ್ತದೆ. ಸ್ಥಳೀಯ ಮೀನುಗಾರರು ಹಾಗೂ ಇತರೆ ಕಡಲತೀರ ನಿವಾಸಿಗಳು ಹಲವು ದಶಕಗಳಿಂದ ಕಡಲತೀರದಲ್ಲಿ ವಾಸಿಸುತ್ತಿದ್ದು, ಕಡಲ ಅಲೆಗಳ ಏರಿಳಿತದ ಬಗ್ಗೆ ಅನುಭವದ ಮಾಹಿತಿ ಹೊಂದಿದ್ದಾರೆ. ಇವರ ಅಭಿಪ್ರಾಯ ಆಲಿಸಿ ಕಾಮಗಾರಿ ನಡೆಸಬೇಕು ಎಂದು ತಿಳಿಸಿದರು.
ಈಗಾಗಲೇ ಸರ್ಕಾರವು ಸಮುದ್ರ ಪ್ರತಿಬಂಧಕ ಕಾಮಗಾರಿಗಳಿಗೆ ಕರಾವಳಿ ತೀರದ 3 ಜಿಲ್ಲೆಗಳಿಗೆ 200 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿ ಅಲ್ಲಲ್ಲಿ ಅಲ್ಪ ಸ್ವಲ್ಪ ಕಾಮಗಾರಿ ನಡೆಸುವ ಬದಲು ಅತಿ ಹೆಚ್ಚು ಕಡಲ ಕೊರೆತ ಉಂಟಾಗುವ ಪ್ರದೇಶಗಳಲ್ಲಿ ನಿರ್ದಿಷ್ಟ ಕಾಮಗಾರಿ ನಡೆಸಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಉಳ್ಳಾಲ ಜೆಟ್ಟಿ:
ಉಳ್ಳಾಲ ಕೋಟೆಪುರದಲ್ಲಿ ಮೀನುಗಾರಿಕೆ ಜೆಟ್ಟಿ ಕಾಮಗಾರಿಯನ್ನು ಶೀಘ್ರವೇ ಪ್ರಾರಂಭಿಸಬೇಕು. 150 ಮೀಟರ್ ಜೆಟ್ಟಿಗೆ ಸೂಕ್ತ ಸ್ಥಳ ನೀಡಬೇಕು. ಇದಕ್ಕೆ ಸಂಬಂಧಪಟ್ಟ ಎಲ್ಲ ಪ್ರಕ್ರಿಯೆಗಳನ್ನು ತ್ವರಿತ ಗತಿಯಲ್ಲಿ ಮುಗಿಸುವಂತೆ ಯು.ಟಿ. ಖಾದರ್ ಸೂಚಿಸಿದರು.
ಸಭೆಯಲ್ಲಿ ಕರ್ನಾಟಕ ಜಲ ಸಾರಿಗೆ ಮಂಡಳಿಯ ಚೀಫ್ ಎಂಜಿನಿಯರ್ ದಿವಾಕರ್ ನಾಯಕ್, ಮೀನುಗಾರಿಕೆ ಜಂಟಿ ನಿರ್ದೇಶಕ ಸಿದ್ದಯ್ಯ, ಉಪ ನಿರ್ದೇಶಕ ದಿಲೀಪ್, ಸಿ.ಆರ್.ಝೆಡ್ ಪ್ರಾದೇಶಿಕ ನಿರ್ದೇಶಕ ರಘು, ಸುಶ್ಮಿತಾ, ಉಳ್ಳಾಲ ತಹಸೀಲ್ದಾರ್ ಪುಟ್ಟರಾಜು ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.