ಒಕ್ಕಲಿಗರ ಜಾತಿಕಾರ್ಡ್ ಲೋಕಸಭೆ ಚುನಾವಣೆಯಲ್ಲಿ ವರ್ಕ್ ಆಗಲ್ಲ: ಅಶ್ವಥ್ ನಾರಾಯಣ್ ವ್ಯಂಗ್ಯ

KannadaprabhaNewsNetwork |  
Published : Apr 09, 2024, 12:46 AM IST
08ಎಸ್‍ಪಿಟಿ04:ಭಾರತೀಯ ಜನತಾಪಕ್ಷದ ವತಿಯಿಂದ ಸೋಮವಾರಪೇಟೆಯ ಜೇಸೀ ವೇದಿಕೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅಭ್ಯರ್ಥಿ ಯದುವೀರ್ ಮಾತನಾಡಿದರು.08ಎಸ್‍ಪಿಟಿ05:ಭಾರತೀಯ ಜನತಾಪಕ್ಷದ ವತಿಯಿಂದ ಸೋಮವಾರಪೇಟೆಯ ಜೇಸೀ ವೇದಿಕೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಅಶ್ವತ್ ನಾರಾಯಣ್  ಮಾತನಾಡಿದರು. | Kannada Prabha

ಸಾರಾಂಶ

ಒಕ್ಕಲಿಗರ ಜಾತಿ ಕಾರ್ಡ್‌ ಲೋಕಸಭಾ ಚುನಾವಣೆಯಲ್ಲಿ ವರ್ಕ್‌ ಆಗಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ್‌ ನಾರಾಯಣ್‌ ಹೇಳಿದರು. ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಒಕ್ಕಲಿಗರ ಜಾತಿಕಾರ್ಡ್ ಲೋಕಸಭೆ ಚುನಾವಣೆಯಲ್ಲಿ ವರ್ಕ್ ಆಗಲ್ಲ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದಿಡೀರ್ ಆಗಿ ಒಕ್ಕಲಿಗರ ಮೇಲೆ ಪ್ರೀತಿ ಬಂದಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಎಂದು ವ್ಯಂಗ್ಯವಾಡಿದರು.

ತಾಲೂಕು ಬಿಜೆಪಿ ಘಟಕದ ವತಿಯಿಂದ ಸೋಮವಾರ ಇಲ್ಲಿನ ಜೇಸೀ ವೇದಿಕೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಒಕ್ಕಲಿಗರ ಜಾತಿ ಕಾರ್ಡ್ ಬಳಸಿ ಚುನಾವಣಾ ತಂತ್ರಗಾರಿಕೆ ನಡೆಸುತ್ತೇವೆ ಎಂಬುದು ಕೇವಲ ಭ್ರಮೆ. ಒಕ್ಕಲಿಗರನ್ನು ಈ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನಾಗಿಸಲು ಕಾಂಗ್ರೆಸ್‍ಗೆ ನಾಲ್ಕು ದಶಕಗಳು ಕಾಯಬೇಕಾಗಿತ್ತಾ ಎಂದು ವ್ಯಂಗ್ಯವಾಡಿದರು. ಜನರನ್ನು ಮೋಸಗೊಳಿಸಲು ಜಾರಿಗೆ ತಂದ ಗ್ಯಾರಂಟಿ ಯೋಜನೆಗೆ ಕಾಂಗ್ರೆಸಿಗರು ಎಸ್‍ಟಿಪಿ ಮತ್ತು ಟಿಎಸ್‍ಪಿ ಹಣವನ್ನು ಬಳಸಿಕೊಂಡಿದ್ದಾರೆ. ಈಗಾಗಲೇ ಆರ್ಥಿಕ ದಿವಾಳಿಯತ್ತ ಸಾಗಿರುವ ಕಾಂಗ್ರೆಸ್‍ ಸರ್ಕಾರ ಲೋಕಸಭಾ ಚುನಾವಣೆ ನಂತರ ಸಂಪೂರ್ಣ ನಿರ್ನಾಮಗೊಳ್ಳಲಿದೆ ಎಂದರು.

ದೇಶದಲ್ಲಿ ಮೋದಿ ಬೇಕು ಎಂಬ ಕೂಗು ಎಲ್ಲೆಡೆಯಲ್ಲಿಯೂ ಕೇಳಿ ಬರುತ್ತಿದೆ. ಸಮರ್ಥ ನಾಯಕತ್ವದ ಗುಣ ಹೊಂದಿರುವ ಮೋದಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬುದನ್ನು ಜನರು ಅರಿತಿದ್ದಾರೆ. ಕೊಡಗು ಜಿಲ್ಲೆ ಯಾವತ್ತಿಗೂ ಬಿಜೆಪಿ ಭದ್ರಕೋಟೆ. ಸುಶಿಕ್ಷಿತ, ಬುದ್ಧಿವಂತ ಮತದಾರರಿರುವ ಕೊಡಗಿನಲ್ಲಿ ವಿದ್ಯಾವಂತ ಮಾಹಿತಿ ತಂತ್ರಜ್ಞಾನದ ಬಗ್ಗೆ ಅಪಾರ ಜ್ಞಾನ ಹೊಂದಿರುವ ಸುಸಂಸ್ಕೃತ ಕುಟುಂಬದ ಹಿನ್ನೆಲೆಯುಳ್ಳ ಯದುವೀರ್ ಅತ್ಯಧಿಕ ಮತಗಳ ಅಂತರದಿಂದ ಜಯಗಳಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರು ಕೊಡಗು ಕ್ಷೇತ್ರದ ಲೋಕಸಭಾ ಅಭ್ಯರ್ಥಿ ಯದುವೀರ್ ಮಾತನಾಡಿ, ಭವಿಷ್ಯದಲ್ಲಿ ಶ್ರೇಷ್ಠ ಭಾರತ ನಿರ್ಮಾಣ ಮೋದಿಯವರಿಂದ ಮಾತ್ರ ಸಾಧ್ಯ. ಇಂದು ದೇಶ ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದುವರೆದಿದ್ದು , ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮಂಚೂಣಿಯಲ್ಲಿದೆ ಎಂದಾದರೆ ಅದು ಮೋದಿಯಂತಹ ಸಮರ್ಥ ನಾಯಕರನ್ನೂಳಗೊಂಡ ತಂಡದಿಂದ ಮಾತ್ರ ಸಾಧ್ಯ. ಈಗಾಗಲೇ ಭಾರತ ವಿಭಜನೆ ಮಾಡುವಂತಹ ಹೇಳಿಕೆಗಳನ್ನು ನೀಡುವಂತಹ ಹುನ್ನಾರ ನಡೆಯುತ್ತಿರುವುದು ಕೂಡ ಆತಂಕಕಾರಿ ವಿಷಯವಾಗಿದೆ ಎಂದ ಅವರು ಭವಿಷ್ಯದಲ್ಲಿ ಆರ್ಥಿಕ ಪ್ರಗತಿ, ಭಾರತದ ಸಂಸ್ಕೃತಿ, ಪರಂಪರೆಯ ರಕ್ಷಣೆ, ಶ್ರೇಷ್ಠ ಭಾರತ ನಿರ್ಮಾಣ ಆಗಬೇಕಾದರೆ ಜಿಲ್ಲೆಯ ಪ್ರಬುಧ್ಧ ಮತದಾರರು ಯೋಚಿಸಿ ಮತದಾನ ಮಾಡುವ ಅಗತ್ಯವಿದೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಗೌತಮ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಜೆಡಿಎಸ್ ಪಕ್ಷದ ಪ್ರಮುಖರಾದ ಸಿ.ಎಲ್.ವಿಶ್ವ ಮಾತನಾಡಿದರು.

ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ, ಮಡಿಕೇರಿ ನಗರ ಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಜಿಲ್ಲಾ ಹಾಗೂ ತಾಲೂಕು ಘಟಕದ ಬಿಜೆಪಿ ಪದಾಧಿಕಾರಿಗಳು, ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.

PREV

Recommended Stories

ಸ್ವಾತಂತ್ರ್ಯಕ್ಕಾಗಿ 6.72 ಲಕ್ಷ ಜನ ಮರಣ
ಸಿಡಿದೆದ್ದ ಧರ್ಮಸ್ಥಳ ಭಕ್ತ ಅಭಿಮಾನಿಗಳು