ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಸಂವಿಧಾನ ಉಳಿಯಲು ಸಾಧ್ಯ: ಜಿ.ಎಸ್. ಮಂಜುನಾಥ್

KannadaprabhaNewsNetwork | Published : Apr 9, 2024 12:46 AM

ಸಾರಾಂಶ

ದೇಶದ ಆಡಳಿತ ಕಾಂಗ್ರೆಸ್ ಕೈಗೆ ಬಂದರೆ ಮಾತ್ರ ಸಂವಿಧಾನ ಉಳಿಯುತ್ತದೆ ಎಂದು ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್. ಮಂಜುನಾಥ್ ಹೇಳಿದರು.

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ದೇಶದ ಆಡಳಿತ ಕಾಂಗ್ರೆಸ್ ಕೈಗೆ ಬಂದರೆ ಮಾತ್ರ ಸಂವಿಧಾನ ಉಳಿಯುತ್ತದೆ ಎಂದು ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್. ಮಂಜುನಾಥ್ ಹೇಳಿದರು.

ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಚಿತ್ರದುರ್ಗ ಲೋಕಸಭಾ ಕ್ಷೇತ್ರ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗ ಮಹಿಳಾ ಘಟಕದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಭಾರತ ಕಷ್ಟಕರ ಪರಿಸ್ಥಿತಿಯಲ್ಲಿದೆ. ಕಾಂಗ್ರೆಸ್ ಪಕ್ಷಕ್ಕೆ ತತ್ವ ಸಿದ್ದಾಂತವಿದೆ. ತ್ಯಾಗ ಬಲಿದಾನದ ಇತಿಹಾಸವುಳ್ಳ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮಾತ್ರ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಬದುಕಲು ಸಾಧ್ಯವಾಗುತ್ತದೆ. ಜಮೀನು ಇಲ್ಲದವರಿಗೆ ಭೂಮಿ ನೀಡಿದ್ದು ಕಾಂಗ್ರೆಸ್. ಬಡ ಮಕ್ಕಳು ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆಂದರೆ ಕಾಂಗ್ರೆಸ್‍ನ ಸಾಮಾಜಿಕ ನ್ಯಾಯ ಕಾರಣವೆಂದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಧರ್ಮಸೇನ ಮಾತನಾಡಿ, ಮಹಿಳೆಯರಿಗೆ ದೊಡ್ಡ ಶಕ್ತಿ ತುಂಬಿದ್ದು ಕಾಂಗ್ರೆಸ್ ಪಕ್ಷ ಎನ್ನುವುದನ್ನು ಯಾರು ಮರೆಯುವಂತಿಲ್ಲ. ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಹತ್ತು ವರ್ಷಗಳ ಹಿಂದೆಯೇ ಮಹಿಳೆಯರ ಮೀಸಲಿಗಾಗಿ ಹೋರಾಟ ನಡೆಸಿದಾಗ ಇದೆ ಬಿಜೆಪಿಯವರು ತಡೆದರು. ದಲಿತರಿಗೆ ಅತಿ ಹೆಚ್ಚಿನ ಜಮೀನು ನೀಡಿರುವುದು ಕಾಂಗ್ರೆಸ್, ಉಳುವವನೆ ಭೂಮಿ ಒಡೆಯ ಎನ್ನುವ ಕಾಯಿದೆ ಜಾರಿಗೊಳಿಸಿ ಜಮೀನು ಇಲ್ಲದವನು ಭೂ ಮಾಲೀಕನಾಗುವಂತೆ ಅವಕಾಶ ಕೊಟ್ಟಿದೆ. ಮದ್ಯಪಾನ ನಿಷೇಧ, ಅಂಗನವಾಡಿ ಪ್ರಾರಂಭ, ಜೀತಮುಕ್ತ ಪದ್ದತಿ ಇವುಗಳೆಲ್ಲಾ ಕಾಂಗ್ರೆಸ್ ಕೊಡುಗೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿ ರುವುದರಿಂದ ಅಭ್ಯರ್ಥಿ ಬಿ.ಎನ್. ಚಂದ್ರಪ್ಪನವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸುವಂತೆ ಮಹಿಳೆಯರಲ್ಲಿ ವಿನಂತಿಸಿದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಮಾತನಾಡಿ ಕಾಂಗ್ರೆಸ್‍ನಲ್ಲಿ ಅನೇಕ ಆಕಾಂಕ್ಷಿಗಳಿದ್ದರೂ ಪಕ್ಷದ ವರಿಷ್ಠ ಮಂಡಳಿ ಅಳೆದು ತೂಗಿ ನನ್ನನ್ನು ಅಭ್ಯರ್ಥಿಯನ್ನಾಗಿ ಘೋಷಿಸಿ ಚುನಾವಣಾ ಕಣಕ್ಕಿಳಿಸಿದೆ. ಪ್ರತಿ ಕಾರ್ಯಕರ್ತರ ಮೇಲೆ ನನ್ನನ್ನು ಗೆಲ್ಲಿಸುವ ಜವಾಬ್ದಾರಿಯಿದೆ. ಭ್ರಷ್ಟಾಚಾರ, ಜಾತೀಯತೆ, ರಾಮಜನ್ಮಭೂಮಿ ಹೀಗೆ ಅನೇಕ ಅಜೆಂಡಾಗಳನ್ನು ಮುಂದಿಟ್ಟುಕೊಂಡು ಹೋಗುತ್ತಿರುವ ಬಿಜೆಪಿಯಿಂದ ಸಂವಿಧಾನ ಉಳಿಯು ವುದು ಕಷ್ಟ. ಇವಿಎಂ ಮೂಲಕ ಹತ್ತು ವರ್ಷಗಳ ಕಾಲ ದೇಶದ ಜನರ ಕಣ್ಣಿಗೆ ಮಣ್ಣೆರಚಿಕೊಂಡು ಬರುತ್ತಿರುವುದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಚ್ಚರಿಕೆಯಿಂದ ಮತ ಚಲಾಯಿಸುವಂತೆ ಮನವಿ ಮಾಡಿದರು.

ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ ಮಾತನಾಡಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಪ್ರತಿ ಮನೆಗೆ ಹೋಗಿ ಕಾಂಗ್ರೆಸ್ ಪಕ್ಷದ ಸಾಧನೆ, ಬಡವರಿಗೆ ನೀಡಿರುವ ಯೋಜನೆಗಳನ್ನು ತಿಳಿಸಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪನವರ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಮಹಿಳೆಯರಲ್ಲಿ ವಿನಂತಿಸಿದರು.

ಪ್ರಸನ್ನಕುಮಾರ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಎಸ್ಸಿ ಘಟಕದ ಉಪಾಧ್ಯಕ್ಷ ಶ್ರೀಧರ್, ಜಿಲ್ಲಾಧ್ಯಕ್ಷ ಜಯಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್‍ಪೀರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತ ನಂದಿನಿಗೌಡ, ಚಿದಾನಂದಮೂರ್ತಿ, ಪ್ರಕಾಶ್ ರಾಮನಾಯ್ಕ, ಪಾಂಡುರಂಗಪ್ಪ, ಮೊಹಿದ್ದೀನ್, ಅಶ್ವಿನ್, ಸುನಿಲ್, ಲಕ್ಷ್ಮಣ್ ವೇದಿಕೆಯಲ್ಲಿದ್ದರು.

Share this article