ಅನಾಥಾಶ್ರಮಕ್ಕಿಂತ ವೃದ್ಧಾಶ್ರಮಗಳೇ ಹೆಚ್ಚಾಗುತ್ತಿವೆ: ಎಂ.ಕೆ.ಶ್ರೀನಿವಾಸ್

KannadaprabhaNewsNetwork | Published : Mar 10, 2025 12:16 AM

ಸಾರಾಂಶ

ವಿದ್ಯಾರ್ಥಿಗಳು ನೀವು ವ್ಯಾಸಂಗ ಮಾಡುವ ಜೊತೆಯಲ್ಲಿ ಕ್ರೀಡೆಗೆ ಆದ್ಯತೆ ನೀಡಬೇಕು. ಇದರಿಂದ ಉತ್ತಮ ಆರೋಗ್ಯ ಹೊಂದಲು ಸಹಕಾರಿಯಾಗುತ್ತದೆ. ಸಂಸ್ಥೆ ಆರಂಭದಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳು 300ಕ್ಕೂ ಹೆಚ್ಚು ಮಂದಿ ವ್ಯಾಸಂಗ ಪಡೆಯುತ್ತಿದ್ದಾರೆ. ಇದಕ್ಕೆ ಶಿಕ್ಷಕರು ಮಕ್ಕಳಿಗೆ ನೀಡುತ್ತಿರುವ ಉತ್ತಮ ಬೋಧನೆ ಹಾಗೂ ಪೋಷಕರ ಸಲಹೆ ಸಹಕಾರದಿಂದ ಸಾಧ್ಯವಾಗಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಮಕ್ಕಳಿಗೆ ತಮ್ಮ ಹಿರಿಯ ಜೀವಗಳ ಬಗ್ಗೆ ಇರುವ ತಾತ್ಸಾರ ಮನೋಭಾವದಿಂದ ಇತ್ತೀಚಿನ ದಿನಗಳಲ್ಲಿ ಅನಾಥಶ್ರಮಗಳಿ ಗಿಂತ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ ಎಂದು ಕ್ಷೇತ್ರ ಶಿಕ್ಷಣ ಸಂಯೋಜನಾಧಿಕಾರಿ ಎಂ.ಕೆ.ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.ಸಮೀಪದ ಹುಸ್ಕೂರು ಗ್ರಾಮದ ಸ್ಪಂದನ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನಡೆದ ಸ್ಪಂದನ ಸಂಭ್ರಮ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಚಿಕ್ಕ ವಯಸ್ಸಿನಲ್ಲೆ ಮಕ್ಕಳಿಗೆ ಹಿರಿಯರ ಬಗ್ಗೆ ಗೌರವ ನೀಡುವುದನ್ನು ಕಲಿಸದೆ, ಬೆಳೆಸಿದ ರೀತಿ ಸರಿಯಾಗಿಲ್ಲದ ಕಾರಣ ತಂದೆ ಮತ್ತು ಮಕ್ಕಳ ಸಂಬಂಧ ಹಾಳಾಗುತ್ತಿರುವುದು ಇತ್ತೀಚೆಗೆ ಕಂಡು ಬರುತ್ತಿದೆ ಎಂದರು.ಶ್ರೀಮಂತರೇ ಮಕ್ಕಳಿಗೆ ಬೇಕಾಗಿರುವುದು ಹಣದಿಂದ ತುಂಬಿದ ಜೀವನ ಅಲ್ಲ. ಪರಸ್ಪರ ಪ್ರೀತಿ ವಿಶ್ವಾಸ. ಇದನ್ನು ಕಲಿಸದ ಪೋಷಕರು ತಾವು ವೃದ್ಧಾರಾದಾಗ ತಮ್ಮ ಮಕ್ಕಳಿಂದ ಪ್ರೀತಿ ಸಿಗುತ್ತಿಲ್ಲ. ಆದ್ದರಿಂದ ಮಕ್ಕಳಿಗೆ ಚಿಕ್ಕಂದಿನಲ್ಲಿ ಮನೆಗಳಲ್ಲಿ ಪರಸ್ಪರ ಪ್ರೀತಿ, ಕರುಣೆ, ದಯೆ, ಅನುಕಂಪದ ಜೊತೆಗೆ ಮೌಲ್ಯ ಶಿಕ್ಷಣ ತುಂಬಿದರೆ ಮಾತ್ರ ತಂದೆ ತಾಯಿಗಳ ಮೇಲೆ ಪ್ರೀತಿ ಬರುತ್ತದೆ ಎಂದರು.

ಕಲಿಕಾ ಸಮಯದಲ್ಲಿ ಮಗುವಿನ ಮೇಲೆ ಒತ್ತಡ ಹೇರದೆ ವಿದ್ಯಾರ್ಥಿಗಳಿಗೆ ಆಸಕ್ತಿ ಇರುವ ವಲಯಗಳಲ್ಲಿ ಸೂಕ್ತ ಅವಕಾಶಗಳನ್ನು ಸೃಷ್ಟಿಸುವ ಕೆಲಸ ಮಾಡಬೇಕು ಎಂದು ಪೋಷಕರಿಗೆ ಸಲಹೆ ನೀಡಿದರು.

ನಾ ನಿನ್ನ ಬಿಡಲಾರೆ ಧಾರಾವಾಹಿ ನಟ ಶರತ್ ಮಾತನಾಡಿ, ವಿದ್ಯಾರ್ಥಿಗಳು ನೀವು ವ್ಯಾಸಂಗ ಮಾಡುವ ಜೊತೆಯಲ್ಲಿ ಕ್ರೀಡೆಗೆ ಆದ್ಯತೆ ನೀಡಬೇಕು. ಇದರಿಂದ ಉತ್ತಮ ಆರೋಗ್ಯ ಹೊಂದಲು ಸಹಕಾರಿಯಾಗುತ್ತದೆ ಎಂದರು.

ಬಾಲಾಜಿ ಎಜುಕೇಶನ್ ಟ್ರಸ್ಟಿನ ಕಾರ್ಯದರ್ಶಿ ಕೃಷ್ಣಮೂರ್ತಿ ಮಾತನಾಡಿ, ಸಂಸ್ಥೆ ಆರಂಭದಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳು 300ಕ್ಕೂ ಹೆಚ್ಚು ಮಂದಿ ವ್ಯಾಸಂಗ ಪಡೆಯುತ್ತಿದ್ದಾರೆ. ಇದಕ್ಕೆ ಶಿಕ್ಷಕರು ಮಕ್ಕಳಿಗೆ ನೀಡುತ್ತಿರುವ ಉತ್ತಮ ಬೋಧನೆ ಹಾಗೂ ಪೋಷಕರ ಸಲಹೆ ಸಹಕಾರದಿಂದ ಸಾಧ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಾಲಾಜಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಕೆಂಪೇಗೌಡ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಬಹುಮಾನ ವಿತರಿಸಲಾಯಿತು.

ಈ ವೇಳೆ ಟ್ರಸ್ಟ್ ಸಹ ಕಾರ್ಯದರ್ಶಿ ಎಚ್.ಕೆ.ದೇವರಾಜು, ಬಿ.ಆರ್‌ಪಿ ರಂಗಸ್ವಾಮಿ, ಸಾಹಿತಿ ಹುಸ್ಕೂರು ಕೃಷ್ಣೇಗೌಡ, ಡಾ.ಸೋನಾಲಿ ಉಚಿಲ್, ಶಿಕ್ಷಕಿ ಸ್ವರ್ಣ ಕುಮಾರಿ, ಕಿರುತೆರೆ ನಟ ಶರತ್, ನಿವೃತ್ತ ಯೋಧ ರಮೇಶ್, ಗ್ರಾಮದ ಹಿರಿಯರಾದ ಶಿವಲಿಂಗೇಗೌಡ, ಡಾ.ನಾಗೇಶ್, ಮುಖ್ಯ ಶಿಕ್ಷಕಿ ಬಿ.ಕಮಲಾ ಸೇರಿದಂತೆ ಹಲವರು ಭಾಗವಹಿಸಿದ್ದರು.

Share this article