ಡಿ.19ರಂದು ಹೃದಯ ಶಿವ ಗೌರವ ಗ್ರಂಥ ಬಿಡುಗಡೆ: ಪ್ರೊ.ಎಂ.ಕೃಷ್ಣೇಗೌಡ

KannadaprabhaNewsNetwork | Published : Dec 16, 2023 2:00 AM

ಸಾರಾಂಶ

ಡಿ.19ರಂದು ‘ಹೃದಯ ಶಿವ ಗೌರವ’ ಗ್ರಂಥ ಬಿಡುಗಡೆ, ಎಸ್‌.ಎಂ.ಕೃಷ್ಣರಿಂದ ಪ್ರೊ.ಬಿ.ಶಿವಲಿಂಗಯ್ಯ ‘ಅಭಿನಂದನಾ ಗ್ರಂಥ’ ಲೋಕಾರ್ಪಣೆ: ಪ್ರೊ.ಎಂ.ಕೃಷ್ಣೇಗೌಡ

ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ, ಕ್ರೆಡಲ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ. ಶಿವಲಿಂಗಯ್ಯ ಅವರ ಅಭಿನಂದನೆ ಮತ್ತು ‘ಹೃದಯ ಶಿವ’ ಗೌರವಗ್ರಂಥ ಬಿಡುಗಡೆ ಸಮಾರಂಭ ಡಿ.19ರಂದು ನಗರದ ಅಂಬೇಡ್ಕರ್‌ ಭವನದಲ್ಲಿ ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ.ಕೃಷ್ಣೇಗೌಡ ತಿಳಿಸಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶ್ರೀಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅಧ್ಯಕ್ಷತೆಯನ್ನು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ‘ಹೃದಯ ಶಿವ’ ಗೌರವಗ್ರಂಥವನ್ನು ಬಿಡುಗಡೆ ಮಾಡಿ ಡಾ.ಬಿ.ಶಿವಲಿಂಗಯ್ಯ ಅವರನ್ನು ಅಭಿನಂದಿಸುವರು. ಚಲನಚಿತ್ರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್ ಅಭಿನಂದನಾ ಭಾಷಣ ಮಾಡುವರು. ಗೌರವಗ್ರಂಥ ಕುರಿತು ಪ್ರಧಾನ ಸಂಪಾದಕ ಪ್ರೊ. ಎಂ.ಕೃಷ್ಣೇಗೌಡ ಮಾತನಾಡುವರು ಎಂದರು.

ಸಂಸದೆ ಸುಮಲತಾ ಅಂಬರೀಶ್, ಶಾಸಕರಾದ ಪಿ.ರವಿಕುಮಾರ್, ಪಿ.ಎಂ.ನರೇಂದ್ರಸ್ವಾಮಿ, ಮರಿತಿಬ್ಬೇಗೌಡ, ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಮಧು ಜಿ.ಮಾದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಎಚ್.ಟಿ.ಮಂಜು, ಕೆ.ಎಂ.ಉದಯ, ದಿನೇಶ್ ಗೂಳಿಗೌಡ, ಮಾಜಿ ಸಚಿವರಾದ ಎಂ.ಎಸ್.ಆತ್ಮಾನಂದ, ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಕೆ.ಸಿ.ನಾರಾಯಣಗೌಡ, ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ಡಾ.ಕೆ.ಅನ್ನದಾನಿ, ರವೀಂದ್ರ ಶ್ರೀಕಂಠಯ್ಯ, ಸುರೇಶ್‌ಗೌಡ, ಕೆ.ಟಿ.ಶ್ರೀಕಂಠೇಗೌಡ, ಎಸ್‌ಬಿಇಟಿ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಭಾಗವಹಿಸುವರು ಎಂದು ವಿವರಿಸಿದರು.

400 ಪುಟಗಳ ಗೌರವ ಗ್ರಂಥ:

ಡಾ.ಬಿ.ಶಿವಲಿಂಗಯ್ಯ ಅವರಿಗೀಗ 72 ವರ್ಷ. 70 ವರ್ಷ ತುಂಬಿದ ಹಿನ್ನೆಲೆಯಲ್ಲಿ ಗೌರವಗ್ರಂಥ ಹೊರತರುವ ಹಾಗೂ ಅವರನ್ನು ಅಭಿನಂದಿಸುವ ಪ್ರಯತ್ನ ನಡೆದಿತ್ತು. ಆದರೆ, ಕೋವಿಡ್ ಕಾರಣದಿಂದ ಸಾಧ್ಯವಾಗಿರಲಿಲ್ಲ. ಇದೀಗ ಕಾ ನಡೆಸಲಾಗುತ್ತಿದೆ. 80ಕ್ಕೂ ಹೆಚ್ಚು ಲೇಖಕರು ನೀಡಿರುವ ಲೇಖನಗಳನ್ನು ಒಳಗೊಂಡಂತೆ 400 ಪುಟಗಳ ಗೌರವಗ್ರಂಥ ‘ಹೃದಯ ಶಿವ’ ಈಗಾಗಲೇ ಸಿದ್ಧವಾಗಿದೆ ಎಂದರು.

ಮಳೆ ನೀರು ನಿರ್ವಹಣೆ ಬಗ್ಗೆ 80ರ ದಶಕದಲ್ಲೇ ವಿದೇಶದಲ್ಲಿ ಪಿಎಚ್‌ಡಿ ಮಾಡಿರುವ ಡಾ. ಬಿ.ಶಿವಲಿಂಗಯ್ಯ, ಮಾಲಿನ್ಯ ನಿಯಂತ್ರಣ ಮಂಡಳಿಯ ಕೇಂದ್ರ ಸಮಿತಿ ಸದಸ್ಯರಾಗಿ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಹಾಗೂ ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ರಾಜಕಾರಣವನ್ನೂ ಪ್ರವೇಶಿಸಿ ಒಮ್ಮೆ ಮಂಡ್ಯ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೂ ಸ್ಪರ್ಧಿಸಿದ್ದರು. ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಪ್ರಸ್ತುತ ಮಂಡ್ಯದಲ್ಲಿ ಮಾಂಡವ್ಯ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಡಾ. ಬಿ.ಶಿವಲಿಂಗಯ್ಯ ಅಭಿನಂದನಾ ಸಮಿತಿ ಅಧ್ಯಕ್ಷ ಡಾ.ರಾಮಲಿಂಗಯ್ಯ, ಗೌರವಾಧ್ಯಕ್ಷ ಎಂ.ಎಸ್.ಮರಿಸ್ವಾಮಿಗೌಡ, ಉಪಾಧ್ಯಕ್ಷ ಪ್ರೊ. ಜಿ.ಟಿ.ವೀರಪ್ಪ, ಕಾರ್ಯದರ್ಶಿ ಕೆ.ಚೇತನ್‌ಕೃಷ್ಣ, ಸಹ ಕಾರ್ಯದರ್ಶಿ ಕಾರಸವಾಡಿ ಮಹದೇವು, ಕೀಲಾರ ಕೃಷ್ಣೇಗೌಡ ಹಾಜರಿದ್ದರು.

Share this article