ಅನುದಾನವಿಲ್ಲದ ನೆಪ, ವಿಶೇಷಚೇತನ ಮಹಿಳೆಯರ ಹೊರಹಾಕಲು ಮುಂದಾಗಿದ್ದ ಸಂಸ್ಥೆ

KannadaprabhaNewsNetwork |  
Published : Feb 03, 2025, 12:31 AM IST
1ಎಚ್‌ವಿಆರ್4- | Kannada Prabha

ಸಾರಾಂಶ

ಸರ್ಕಾರದ ಅನುದಾನ ಬಂದಿಲ್ಲ ಎಂಬ ಕಾರಣ ಹೇಳಿ ವಸತಿ ನಿಲಯದಲ್ಲಿದ್ದ ವಿಶೇಷಚೇತನ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರನ್ನು ಏಕಾಏಕಿ ಹೊರಗಟ್ಟಲು ಮುಂದಾಗಿದ್ದ ಘಟನೆ ಇಲ್ಲಿಯ ಬಸವೇಶ್ವರ ನಗರದಲ್ಲಿರುವ ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅನುದಾನದ ಕಲ್ಮೇಶ್ವರ ಗ್ರಾಮೀಣ ವಿದ್ಯಾಸಂಸ್ಥೆಯ ಕಲ್ಮೇಶ್ವರ ಉದ್ಯೋಗಸ್ಥ ಮಹಿಳೆಯರ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಶನಿವಾರ ನಡೆದಿದೆ.

ಹಾವೇರಿ: ಸರ್ಕಾರದ ಅನುದಾನ ಬಂದಿಲ್ಲ ಎಂಬ ಕಾರಣ ಹೇಳಿ ವಸತಿ ನಿಲಯದಲ್ಲಿದ್ದ ವಿಶೇಷಚೇತನ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರನ್ನು ಏಕಾಏಕಿ ಹೊರಗಟ್ಟಲು ಮುಂದಾಗಿದ್ದ ಘಟನೆ ಇಲ್ಲಿಯ ಬಸವೇಶ್ವರ ನಗರದಲ್ಲಿರುವ ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅನುದಾನದ ಕಲ್ಮೇಶ್ವರ ಗ್ರಾಮೀಣ ವಿದ್ಯಾಸಂಸ್ಥೆಯ ಕಲ್ಮೇಶ್ವರ ಉದ್ಯೋಗಸ್ಥ ಮಹಿಳೆಯರ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಶನಿವಾರ ನಡೆದಿದೆ. ಹತ್ತಾರು ವರ್ಷಗಳಿಂದ ಆಶ್ರಯ ನೀಡಿ ಅನೇಕ ವಿಶೇಷಚೇತನ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರ ಶಿಕ್ಷಣ, ಉದ್ಯೋಗ ಸೇರಿದಂತೆ ಸ್ವತಂತ್ರರಾಗಿ ಘನತೆ ಬದುಕು ಕಟ್ಟಿಕೊಳ್ಳಲು ಸಹಾಯಕಾರಿಯಾಗಿದ್ದ ಕಲ್ಮೇಶ್ವರ ವಿದ್ಯಾ ಸಂಸ್ಥೆಯು ಸರ್ಕಾರದ ಯಾವುದೇ ಆದೇಶಗಳಿಲ್ಲದೆ ಏಕಾಏಕಿ ವಸತಿ ನಿಲಯದಲ್ಲಿದ್ದ ಐದು ಜನ ವಿಶೇಷಚೇತನರನ್ನು ಹೊರದೂಡುವ ಕಾರ್ಯವನ್ನು ಎಸ್‌ಎಫ್‌ಐ ಹಾವೇರಿ ಜಿಲ್ಲಾ ಸಮಿತಿ ಹಾಗೂ ಅಂಗವಿಕಲರ ಒಕ್ಕೂಟವು ತೀವ್ರವಾಗಿ ಖಂಡಿಸಿದೆ.ಈ ವೇಳೆ ವಿಶೇಷಚೇತನ ವಿದ್ಯಾರ್ಥಿನಿ ಹೇಮಾ ಪ್ರಕಾಶ ಮಾತನಾಡಿ, ಎಂಟು ವರ್ಷಗಳಿಂದ ಆಶ್ರಯ ಪಡೆದು ಪಿಯುಸಿ, ಪದವಿ ಮುಗಿಸಿ ಮಾಸ್ಟರ್ ಪದವಿ ಮುಂದುವರೆಸುತ್ತಿದ್ದೇನೆ. ನೂರಾರು ಕನಸುಗಳನ್ನು ಕಟ್ಟಿಕೊಂಡು ನನ್ನ ಕಾಲಮೇಲೆ ನಾನೆ ನಿಂತು ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕೆಂಬ ಆಸೆಗೆ ಆಶ್ರಯ ಬೇಕಿದೆ. ಸರ್ಕಾರದ ಅನುದಾನ ಬರುತ್ತಿಲ್ಲ ಎಂದು ಸಂಸ್ಥೆ ಮುಖ್ಯಸ್ಥರು ನಿಮ್ಮ ಮನೆಗಳಿಗೆ ಹೋಗಿ ಎಂದಿದ್ದಾರೆ. ಮನೆಗೆ ಹೋದರೆ ಸಮಾಜದಲ್ಲಿ ಬದುಕುವುದು ಬಹಳಷ್ಟು ಕಷ್ಟವಾಗುತ್ತದೆ. ಬಸ್‌ಗಳಲ್ಲಿ, ರಸ್ತೆಗಳಲ್ಲಿ ವಿಪರೀತ ಜನಸಂದಣಿಯ ಮಧ್ಯೆ ಓಡಾಡಲು ಕಷ್ಟವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.ಅಂಗವಿಕಲ ಒಕ್ಕೂಟದ ಸಾಮಾಜಿಕ ಕಾರ್ಯಕರ್ತೆ ಹಸೀನಾ ಹೆಡಿಯಲ ಮಾತನಾಡಿ, 2012ರಲ್ಲಿ ರಾಜ್ಯ ಸರ್ಕಾರ ಅಂಗವಿಕಲ ಮಹಿಳೆಯರಿಗಾಗಿ ಪುನರ್ವಸತಿ ಕೇಂದ್ರ ಜಾರಿಗೆ ತಂದಿದೆ. ಆದರೆ ಅನುದಾನ ನೆಪ ಹೇಳಿ, ಕೇವಲ ಐದು ಜನ ಇದ್ದಾರೆ ಎಂದು ಆಶ್ರಯ ತಾಣವನ್ನು ಮುಚ್ಚುವುದು ಸರಿಯಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಅನುದಾನ ಬಿಡುಗಡೆ ಮಾಡಬೇಕು. ಜಿಲ್ಲಾವಾರು ಜಾಹೀರಾತು ನೀಡಿ ಅನೇಕ ವಿಶೇಷಚೇತನ ಮಹಿಳೆಯರಿಗೆ ನೆರವಾಗಬೇಕೆಂದರು.ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ವಿಶೇಷಚೇತನ ವಿದ್ಯಾರ್ಥಿನಿಯರು, ಮಹಿಳೆಯರ ಪುನರ್ವಸತಿಗಾಗಿ ಇಡೀ ಜಿಲ್ಲೆಯಲ್ಲಿ ಏಕೈಕ ವಸತಿ ನಿಲಯವಾಗಿದ್ದ ಕಲ್ಮೇಶ್ವರ ಸಂಸ್ಥೆ ಅನುದಾನದ ನೆಪದಿಂದಾಗಿ ಆಶ್ರಯ ಪಡೆಯುತ್ತಿರುವವರನ್ನು ಹೊರದೂಡುವ ಕೆಲಸ ಖಂಡನೀಯ. ಏಕಾಏಕಿ ಮುಚ್ಚುವುದು ಸರ್ಕಾರದ ನಿಯಮಗಳ ಉಲ್ಲಂಘನೆ ಆಗಿದೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಅನುದಾನಿತ ಸಂಸ್ಥೆಗಳನ್ನು ಮುಚ್ಚಿ ನೇರವಾಗಿ ಇಲಾಖೆಯೇ ನಿರ್ವಹಣೆ ಮಾಡಬೇಕು ಶಾಶ್ವತ ಪರಿಹಾರವನ್ನು ಒದಗಿಸಬೇಕು. ನಿರ್ಲಕ್ಷ್ಯ ತೋರಿದರೆ ಜಿಲ್ಲಾಡಳಿತ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಶ್ರೀನಿವಾಸ ಆಲದರ್ತಿ ಮಾತನಾಡಿ, ಕಲ್ಮೇಶ್ವರ ಸಂಸ್ಥೆ ಮುಖ್ಯಸ್ಥ ದಯಾನಂದ ಅವರಿಗೆ ದೂರವಾಣಿ ಸಂಪರ್ಕ ಮಾಡಿ ಯಾವುದೇ ಕಾರಣಕ್ಕೂ ವಿಶೇಷಚೇತನರನ್ನು ಹೊರಗಡೆ ಕಳಿಸಬೇಡಿ ಎಂದು ತರಾಟೆಗೆ ತೆಗೆದುಕೊಂಡರು. ತಾವೇ ಸ್ವತಃ ಗುಂಟುಮೂಟೆಗಳನ್ನು ಒಳಗಡೆ ಇರಿಸಿದರು. ವಿಶೇಷಚೇತನರಿಗೆ ಯಾವುದೇ ತೊಂದರೆ ನೀಡಿದಂತೆ ಕ್ರಮಕೈಗೊಳಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ವಿಶೇಷಚೇತನ ವಿದ್ಯಾರ್ಥಿನಿ ಸುಮಾ ದೊಡ್ಡಗೌಡರ, ಯಲ್ಲಮ್ಮ ವಾಲ್ಮೀಕಿ, ಲಲಿತಾ ಲಮಾಣಿ, ಗಿರಿಜಾ ಗೌಳಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ