ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ದೇಶದ ಜನತೆ ಒಪ್ಪಿಕೊಂಡಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿಯನ್ನು ಚುನಾಯಿಸುವ ಮೂಲಕ ಮೂರನೇ ಬಾರಿಗೆ ಅವಕಾಶ ನೀಡಲಿದ್ದಾರೆ ಎಂದು ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಹೇಳಿದರು.ಪಟ್ಟಣದ ಈಶ್ವರ ನಗರದಲ್ಲಿ ಮತ್ತೊಮ್ಮೆ ಮೋದಿ ಎಂಬ ಗೋಡೆ ಬರಹದ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಮನೆ ಮನೆಗೆ ತೆರಳಿ ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರ ವಿತರಿಸಿ ಮಾತನಾಡಿದ ಅವರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.
ತಮಗೆ ನೀಡಿದ ಅಧಿಕಾರವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಭಾರತ ದೇಶ ವಿಶ್ವದಲ್ಲಿಯೇ ಅಭಿವೃದ್ದಿ ಶೀಲ ರಾಷ್ಟ್ರವಾಗುವಂತೆ ಮಾಡಿದ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳ ಯೋಚನೆ ಮತ್ತು ಯೋಜನೆಗಳು ಜಗತ್ತಿನಲ್ಲಿಯೇ ಜನಮನ್ನಣೆ ಗಳಿಸಿದ್ದು, ಇದು ನಾವೆಲ್ಲರೂ ಹೆಮ್ಮೆ ಪಡುವ ವಿಚಾರವಾಗಿದೆ ಎಂದು ತಿಳಿಸಿದರು.ಈ ಬಾರಿ ದೇಶದಲ್ಲಿ 400 ಸ್ಥಾನಗಳನ್ನು ಬಿಜೆಪಿ ಗಳಿಸಲಿದ್ದು, ರಾಜ್ಯದಲ್ಲಿ ಎಲ್ಲ 28 ಕ್ಷೇತ್ರಗಳಲ್ಲಿಯೂ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ವಿಜಯ ಪತಾಕೆ ಹಾರಿಸಲಿದ್ದು, ಹೆಚ್ಚು ಬಹುಮತ ಪಡೆಯುವತ್ತ ಎಲ್ಲರೂ ಗಮನ ಹರಿಸಬೇಕೆಂದರು.
ಇಂದಿನಿಂದಲೇ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕೇಂದ್ರ ಸರ್ಕಾರದ ಅಭಿವೃದ್ದಿ ಮತ್ತು ಜನಪರವಾದ ಕೆಲಸ ಹಾಗೂ ಕಾರ್ಯಕ್ರಮಗಳನ್ನು ಮತದಾರರಿಗೆ ತಿಳಿಸಿ ಬೆಂಬಲ ನೀಡುವಂತೆ ಮನವಿ ಮಾಡಬೇಕೆಂದು ಸೂಚನೆ ನೀಡಿದರು.ಆನಂತರ ಅವರು ಈಶ್ವರ ನಗರ ಸೇರಿದಂತೆ ಹಾಸನ-ಮೈಸೂರು ರಸ್ತೆ ಮತ್ತು ಚೌಕಹಳ್ಳಿ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಗೋಡೆ ಬರಹ ಅಭಿಯಾನ ಹಾಗೂ ಕರಪತ್ರ ವಿತರಿಸಿದರು. ಇದೇ ವೇಳೆ ಬಿಜೆಪಿ ಮುಖಂಡರು ಜಿಲ್ಲಾಧ್ಯಕ್ಷರನ್ನು ಸನ್ಮಾನಿಸಿದರು.
ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಜಿಲ್ಲಾ ಗ್ರಾಮಾಂತರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಿರಣ್ ಜಯರಾಮ್, ತಾಲೂಕು ಬಿಜೆಪಿ ಅಧ್ಯಕ್ಷ ಕೆ.ವೈ. ಮಂಜು, ಜಿಲ್ಲಾ ಗೋಡೆ ಬರಹ ಅಭಿಯಾನದ ಸಂಚಾಲಕ ಪರೀಕ್ಷಿತ್ ರಾಜೇ ಅರಸ್, ಸಹ ಸಂಚಾಲಕ ಸಾ.ರಾ. ತಿಲಕ್, ಪುರಸಭೆ ಮಾಜಿ ಸದಸ್ಯರಾದ ಉಮಾಶಂಕರ್, ರಂಗಸ್ವಾಮಿ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಪ್ರಭಾಕರ್ ಜೈನ್, ಬಿಜೆಪಿ ಮುಖಂಡರಾದ ಮಾರ್ಕಂಡೇಯಸ್ವಾಮಿ, ಮಲ್ಲಿಕಾರ್ಜುನಪ್ಪ, ಬಿ.ಆರ್. ಗೋಪಾಲರಾಜ್, ಎಚ್.ವಿ. ಅನಿಲ್, ಕೃಷ್ಣಯ್ಯ, ಧರ್ಮ, ಎ.ಜೆ. ನಂಜೇಶ್, ಕೃಷ್ಣ, ಮಂಜುನಾಥ್, ರೇವಣ್ಣ, ಪುನೀತ್, ಜಗದೀಶ್, ಕೆ.ಆರ್. ಮಂಜುನಾಥ್, ಶಿವರಾಜು, ಮುಕ್ಕೋಟಿ, ಜೆಡಿಎಸ್ ಮುಖಂಡ ಎಲ್.ಎಸ್. ಮಹೇಶ್, ಪಾಪಣ್ಣ ಇದ್ದರು.