ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಬಿಜೆಪಿಯಿಂದ ನಗರದ ಖಾಸಗಿ ಹೊಟೇಲ್ನಲ್ಲಿ ಭಾನುವಾರ ಆಯೋಜಿಸಿದ್ದ ‘ಒಂದು ರಾಷ್ಟ್ರ ಒಂದು ಚುನಾವಣೆ’ ಕುರಿತು ಸಾಮಾಜಿಕ ಜಾಲತಾಣ ಪ್ರಭಾವಿಗಳು ಹಾಗೂ ಚಿಂತಕರ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಅವರು, 5 ವರ್ಷಕ್ಕೆ ಒಂದು ಬಾರಿ ಚುನಾವಣೆಯಿಂದ ದೇಶದ ಶಿಕ್ಷಣ ಕ್ಷೇತ್ರಕ್ಕೆ ವ್ಯಯಿಸುವ ಶೇ.33ರಷ್ಟು ಹಣ ಉಳಿತಾಯ ಆಗುತ್ತದೆ. ಪದೇ ಪದೆ ನೀತಿ ಸಂಹಿತೆಯಿಂದ ಅಭಿವೃದ್ಧಿ ಕೆಲಸ ಸ್ಥಗಿತಗೊಳಿಸುವ ಬದಲು 4.5 ವರ್ಷ ನಿರಂತರವಾಗಿ ದೇಶದ ಅಭಿವೃದ್ಧಿಗೆ ಸಮಯ ಮೀಸಲಿಡಲು ಸಾಧ್ಯವಾಗುತ್ತದೆ ಎಂದರು.
ಪ್ರತಿ ವರ್ಷ ಒಂದಲ್ಲ ಒಂದು ಚುನಾವಣೆ ನಡೆದು ಪ್ರಧಾನಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಶಾಸಕರು, ಸಂಸದರು, ವಿವಿಧ ಹುದ್ದೆಗಳಲ್ಲಿರುವವರು, ಅಧಿಕಾರಿಗಳು, ಪೊಲೀಸರು, ಅರೆಸೇನಾ ಪಡೆಗಳು, ಇನ್ನಿತರ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ಎಲ್ಲಾ ದೈನಂದಿನ ಕೆಲಸ ಬಿಟ್ಟು ಬರೀ ಪ್ರಚಾರ ಮಾಡಬೇಕು, ಚುನಾವಣೆ ಗೆಲ್ಲಬೇಕು ಎನ್ನುವುದರಲ್ಲೇ ಕಾಲ ಕಳೆಯುತ್ತಾರೆ. ಇದರಿಂದ ಎಲ್ಲರ ಸಮಯ ವ್ಯರ್ಥವಾಗುತ್ತದೆ ಎಂದು ಚೌಹಾಣ್ ಹೇಳಿದರು.ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ತಮಗೆ ಇಷ್ಟದ ಪಕ್ಷಕ್ಕೆ ಮತ ಹಾಕುವ ಪ್ರಬುದ್ಧತೆಯನ್ನು ನಮ್ಮ ಜನ ಬೆಳೆಸಿಕೊಂಡಿದ್ದಾರೆ. ಯಾವುದೇ ಪಕ್ಷ ಆಯ್ಕೆಯಾದರೂ ಜನರ ಕಲ್ಯಾಣದ ಕಡೆ ಗಮನ ಹರಿಸಬೇಕು. ಒಂದು ವೇಳೆ ಮಧ್ಯದಲ್ಲಿ ಸರ್ಕಾರ ಬಿದ್ದು ಹೋದರೆ ಉಳಿದ ಅವಧಿಗೆ ಮಾತ್ರ ಚುನಾವಣೆ ನಡೆಸಬೇಕು.
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನಿಲ್ ಅಂತೋನಿ ಮಾತನಾಡಿ, ದೇಶದಲ್ಲಿ ಒಂದರ ಹಿಂದೆ ಒಂದು ಚುನಾವಣೆ ನಡೆಯುವುದರಿಂದ ಸರ್ಕಾರ ಮತ್ತು ಆಡಳಿತ ಸಾಮರ್ಥ್ಯ ಕಡಿಮೆಯಾಗುತ್ತದೆ. ಇದು ಒಟ್ಟಾರೆ ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತಿದೆ. 2047ರ ವೇಳೆಗೆ ವಿಕಸಿತ ಭಾರತದ ಕನಸು ನನಸಾಗಬೇಕೆಂದರೆ ಏಕ ಚುನಾವಣೆ ಅನಿವಾರ್ಯ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಕೆ.ಎಸ್. ನವೀನ್, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವಥನಾರಾಯಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಲಿಫ್ಟ್ನಲ್ಲಿ ಪರದಾಡಿದ ಚೌಹಾಣ್ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ನಗರದ ಕಟ್ಟಡದ ಲಿಫ್ಟ್ವೊಂದರಲ್ಲಿ ಸಿಲುಕಿ ಪರದಾಡಿದ ಘಟನೆ ನಡೆದಿದ್ದು, ಇದನ್ನು ಸ್ವತಃ ಸಚಿವರೇ ಹಾಸ್ಯಭರಿತವಾಗಿ ಮತ್ತು ಆಂಗಿಕವಾಗಿ ವಿವರಿಸಿದರು.ಕಟ್ಟಡವೊಂದರ ಲಿಫ್ಟ್ನಲ್ಲಿ ನನ್ನ ಜೊತೆಗಿದ್ದವರು ಅತಿ ಉತ್ಸಾಹದಲ್ಲಿ ಬೇರೆ ಬೇರೆ ಬಟನ್ಗಳನ್ನು ಒತ್ತಿಬಿಟ್ಟರು. ಆಗ ಲಿಫ್ಟ್ ಅದ್ಭುತವಾಗಿ ವರ್ತಿಸಲು ಆರಂಭಿಸಿತು. ಎಲ್ಲೂ ನಿಲ್ಲದೆ ಮೇಲೆ-ಕೆಳಗೆ ಓಡಾಡುತ್ತಲೇ ಇತ್ತು. ಎಲ್ಲೂ ಬಾಗಿಲು ತೆಗೆದುಕೊಳ್ಳದ ಕಾರಣ ಗಾಬರಿಯಾಯಿತು. ಆಗ ಮಧ್ಯದಿಂದ ಸ್ವಲ್ಪ ಬೆಳಕು ಕಾಣಿಸಿಕೊಳ್ಳುತ್ತಿದ್ದಂತೆ ಬಾಗಿಲು ತೆರೆದು ಹೊರ ಬಂದೆವು ಎಂದು ಹೇಳಿದರು.