ಕನ್ನಡಪ್ರಭ ವಾರ್ತೆ ಕೋಟ
ಎಳವೆಯಲ್ಲಿಯೇ ಮಕ್ಕಳಲ್ಲಿ ಪರಿಸರದ ಜೊತೆ ಭಾವನಾತ್ಮಕ ಬೆಸುಗೆಯಾಗಬೇಕು, ಪರಿಸರ ಸಂರಕ್ಷಣೆ ಉದ್ದೇಶ ಅವರ ಮನದಲ್ಲಿ ಮೂಡಿದಾಗ ಇನ್ನಷ್ಟೂ ಕ್ರಾಂತಿಕಾರಿ ಬದಲಾವಣೆ ಸಾಧ್ಯವಾಗುತ್ತದೆ. ಬೇಸಿಗೆ ಶಿಬಿರಗಳಲ್ಲಿ ಪರಿಸರದ ವಿಷಯಾಧಾರಿತ ಕಾರ್ಯಕ್ರಮ ಆಯೋಜನೆ ಶ್ಲಾಘನೀಯ ಎಂದು ಪತ್ರಕರ್ತ ರವೀಂದ್ರ ಕೋಟ ಅವರು ಹೇಳಿದರು.ಅವರು ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಕೋಟತಟ್ಟು ಗ್ರಾಪಂ, ಗೀತಾನಂದ ಫೌಂಡೇಶನ್ ಮಣೂರು ಪಡುಕೆರೆ, ಉಸಿರು ಕೋಟ, ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಆಶ್ರಯದಲ್ಲಿ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ದಿ.ಕೆ.ಸಿ ಕುಂದರ್ ಸ್ಮರಣಾರ್ಥವಾಗಿ ನಡೆಯುವ 24ನೇ ವರ್ಷದ ಬೇಸಿಗೆ ಶಿಬಿರ ವಿಕಸನ-2024 ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಸಂಪನ್ಮೂಲ ವ್ಯಕ್ತಿಗಳಾದ ಗಿರೀಶ್ ಆಚಾರ್ಯ ವಕ್ವಾಡಿ, ಸುಮನ ಹೇರ್ಳೆ, ಮಂಜುನಾಥ ಗುಂಡ್ಮಿ, ಪ್ರದೀಪ್ ಬಸ್ರೂರು, ಶಿಬಿರದ ನಿರ್ದೇಶಕ ನರೇಂದ್ರ ಕುಮಾರ್ ಕೋಟ, ಸತೀಶ್ ವಡ್ಡರ್ಸೆ, ಶಿಬಿರದ ತಂಡಗಳ ನಾಯಕರು ಉಪಸ್ಥಿತರಿದ್ದರು.ವಿಶಿಷ್ಟ ರೀತಿಯಲ್ಲಿ ಆಯೋಜನೆ: ಬೇಸಿಗೆ ಶಿಬಿರದಲ್ಲಿ ಸುಮಾರು 160 ಕ್ಕೂ ಅಥಿಕ ವಿದ್ಯಾರ್ಥಿಗಳು ಭಾಗವಹಿಸಿದ್ದು 24ನೇ ವರ್ಷದ ಯಶಸ್ವಿ ಶಿಬಿರ ಆಯೋಜನೆ ಇದಾಗಿದೆ. ಶಿಬಿರವನ್ನು ವಿಶೇಷವಾಗಿ ಶಿಬಿರಾರ್ಥಿಗಳಿಗೆ ಥೀಂ ಪಾರ್ಕನ ನಾಲ್ಕು ಮನೆಗಳಲ್ಲಿ ನಾಲ್ಕ ತಂಡಗಳಾಗಿ ಪರಿವರ್ತಿಸಲಾಗಿದೆ. ಶಿಬಿರಾರ್ಥಿಗಳು ಮುಖ್ಯ ಅತಿಥಿಗಳನ್ನು ಸ್ವಾಗತಿಸುವ ಅವರ ಬಗ್ಗೆ ಪ್ರಸ್ತಾಪಿಸುವ ಇನ್ನಿತರ ಮಾತುಗಾರಿಕೆಯನ್ನು ಮುನ್ನಲ್ಲೆಗೆ ತರುವ ಪ್ರಯತ್ನ ಮಾಡಲಾಗಿದೆ. ನಾಲ್ಕು ತಂಡಗಳಿಗೆ ನಾಲ್ಕು ಹೆಸರನ್ನು ಇರಿಸಲಾಗಿದ್ದು ಆ ತಂಡಗಳಿಗೆ ದಿನಕ್ಕೊಬ್ಬರಂತೆ ನಾಯಕತ್ವ ನೀಡಲಾಗಿದೆ. ದಿನಕ್ಕೆ ನಾಲ್ವರು ವಿಶಿಷ್ಟ ತರಬೇತಿ ಹೊಂದಿದ ತರಬೇತುದಾರರಿಂದ ತರಬೇತಿ ನೀಡಲಾಗುತ್ತಿದೆ. ಚಿತ್ರ ಬಿಡಿಸುವುದು, ರಂಗೋಲಿ, ಹಾಡುಗಾರಿಕೆ, ನೃತ್ಯ, ಪೈಂಟಿಂಗ್, ಸೇರಿದಂತೆ ಇನ್ನಿತರ ಚಟುವಟಿಗೆಗಳನ್ನು ಈ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ನೀಡಲಾಗಿದೆ.