ಶರೀರ ಬಳಸಿಕೊಂಡು ಲೋಕ ಕಲ್ಯಾಣಕ್ಕಾಗಿ ಶ್ರಮಿಸಬೇಕು: ಪಟ್ಟಣಶೆಟ್ಟಿ

KannadaprabhaNewsNetwork |  
Published : Jan 12, 2024, 01:46 AM IST
ಗದಗ ಜ.ತೋಂಟದಾರ್ಯ ಮಹಾವಿದ್ಯಾಲಯ ಆವರಣದಲ್ಲಿ ಕೆ.ಎಲ್.ಇ ಅಂಗ ಸಂಸ್ಥೆಗಳ ವತಿಯಿಂದ ತ್ಯಾಗವೀರ ಸಿರಸಂಗಿ ಲಿಂಗರಾಜರ ೧೬೩ನೇ ಜಯಂತಿ ಕಾರ್ಯಕ್ರಮ ಜರುಗಿತು. | Kannada Prabha

ಸಾರಾಂಶ

ನಮ್ಮ ಭಾರತದಲ್ಲಿ ಅನೇಕ ಶರಣರು, ಸಾಧು-ಸಂತರು, ಶಿವಯೋಗಿಗಳು, ಮಹಾಪುರುಷರಾಗಿ ಹೋಗಿದ್ದಾರೆ. ಅವರಲ್ಲಿ ತ್ಯಾಗವೀರ ಸಿರಸಂಗಿ ಲಿಂಗರಾಜರು ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಜ. ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಹೇಳಿದರು.

ಗದಗ: ಸಾಮಾನ್ಯವಾಗಿ ಶ್ರೇಷ್ಠತೆಯ ಜೀವನ ನಡೆಸುವುದರ ಹಿಂದೆ ಒಬ್ಬ ಮಹಾಪುರುಷನ ಆಶೀರ್ವಾದ ಕಾರಣವಾಗಿರುತ್ತದೆ. ನಮ್ಮ ಭಾರತದಲ್ಲಿ ಅನೇಕ ಶರಣರು, ಸಾಧು-ಸಂತರು, ಶಿವಯೋಗಿಗಳು, ಮಹಾಪುರುಷರಾಗಿ ಹೋಗಿದ್ದಾರೆ. ಅವರಲ್ಲಿ ತ್ಯಾಗವೀರ ಸಿರಸಂಗಿ ಲಿಂಗರಾಜರು ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಜ. ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಹೇಳಿದರು.

ಅವರು ನಗರದ ಜ.ತೋಂಟದಾರ್ಯ ಮಹಾವಿದ್ಯಾಲಯ ಆವರಣದಲ್ಲಿ ಕೆ.ಎಲ್.ಇ ಅಂಗ ಸಂಸ್ಥೆಗಳು ಆಯೋಜಿಸಿದ್ದ ತ್ಯಾಗವೀರ ಸಿರಸಂಗಿ ಲಿಂಗರಾಜರ ೧೬೩ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಲಿಂಗರಾಜರು ಸಮಾಜದಲ್ಲಿ ಉತ್ತಮ ಕೆಲಸ-ಕಾರ್ಯಗಳಿಗೆ ಪ್ರೇರಣೆ, ಪ್ರೋತ್ಸಾಹ ನೀಡುತ್ತಾ ಸಮಾಜದ ಅಭಿವೃದ್ಧಿ ಪರವಾಗಿ ದುಡಿಯುತ್ತಿದ್ದರು. ರಾಜನ ಸ್ಥಾನದಲ್ಲಿದ್ದ ಲಿಂಗರಾಜರು ಐಷಾರಾಮಿ ಜೀವನ ನಡೆಸಬಹುದಾಗಿತ್ತು. ಆದರೆ ಅವರು ಕೃಷಿ, ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ತಂದು ಜನಮುಖಿ ಕಾರ್ಯಗಳನ್ನು ಕೈಗೊಂಡು ಜನರ ಪ್ರೀತಿಗೆ ಪಾತ್ರರಾಗಿದ್ದರು. ನಾವು ಮಾಡುವ ದಾನ-ಧರ್ಮ ಮುಂತಾದ ಕೆಲಸ ಕಾರ್ಯಗಳಿಂದ ಸಮಾಜದ ಉದ್ದಾರಕ್ಕೆ ಬಂದಿರುವ ಈ ಶರೀರವನ್ನು ಬಳಸಿಕೊಂಡು ಲೋಕ ಕಲ್ಯಾಣಕ್ಕಾಗಿ ಶ್ರಮಿಸಬೇಕು ಎಂಬ ರಹಸ್ಯವನ್ನು ಅರಿತುಕೊಂಡವರಾಗಿದ್ದರು ಎಂದರು.

ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಎಸ್.ಪಿ. ಸಂಶಿಮಠ ಮಾತನಾಡಿ, ಸಿರಸಂಗಿ ಲಿಂಗರಾಜರು ಲಿಂಗಾಯತ ಸಮಾಜದ ಅಭಿವೃದ್ಧಿಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಉತ್ತರ ಕರ್ನಾಟಕದ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಯಲ್ಲಿ ಲಿಂಗರಾಜರ ಹೆಸರು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ ಎಂದರು.

ಈ ಸಂದರ್ಭದಲ್ಲಿ ವೈ.ಆರ್.ಸಿ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ೫೬ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ತ್ಯಾಗವೀರ ಸಿರಸಂಗಿ ಲಿಂಗರಾಜರ ಜಯಂತಿ ಅಂಗವಾಗಿ ಆಯೋಜಿಸಿದ್ದ ವಚನಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಸ್ಥಾನಿಕ ಆಡಳಿತ ಮಂಡಳಿತ ಸದಸ್ಯರಾದ ಈಶಣ್ಣ ಮುನವಳ್ಳಿ, ಡಾ. ಪವಾಡಶೆಟ್ಟರ್, ವೀರೇಶ್ ಕೂಗು, ಶೆಳ್ಳಿಕೇರಿ ವಕೀಲರು, ಸಿ.ಬಿ.ಎಸ್.ಸಿ ಪ್ರೌಢಶಾಲೆಯ ಪ್ರಾ.ಕಲ್ಪನ ಚಚಡಿ, ಜೆಟಿ ಪಪೂ ಕಾಲೇಜಿನ ಪ್ರಾ.ಎಸ್.ಬಿ. ಹಾವೇರಿ, ಔಷಧ ಮಹಾವಿದ್ಯಾಲಯದ ಡಾ. ರಮೇಶ.ವಿ. ಹಾಗೂ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಪ್ರಾ.ಪಿ.ಜಿ. ಪಾಟೀಲ ಸ್ವಾಗತಿಸಿದರು. ಪ್ರಾ.ಡಾ. ಎ.ಕೆ. ಮಠ ಪರಿಚಯಿಸಿದರು. ನೇತ್ರ ನಾಗಲೋಟಿಮಠ ಮತ್ತು ರಾಜೇಶ್ವರಿ ರಾಜೂರ್ ನಿರೂಪಿಸಿದರು. ಪ್ರಾ.ಪ್ರೊ. ಜೈಹನುಮಾನ ವಂದಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ