ನಟ ಯಶ್ ಕಟೌಟ್ ದುರಂತಕ್ಕೆ ಒಂದು ವರ್ಷ

KannadaprabhaNewsNetwork |  
Published : Jan 08, 2025, 12:16 AM IST
ಯಶ... | Kannada Prabha

ಸಾರಾಂಶ

ಮೃತಪಟ್ಟ ಯುವಕರ ಕುಟುಂಬಗಳಿಗೆ ಎರಡು ಎಕರೆ ಜಮೀನು ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಸರ್ಕಾರ ಮಾಡಿದ ಘೋಷಣೆ ಇನ್ನೂ ಈಡೇರದೆ ಆ ಕುಟುಂಬಗಳು ಬಡತನದ ಬೇಗೆಯಲ್ಲಿ ಬೇಯುವಂತಾಗಿದೆ

ಅಶೋಕ ಡಿ. ಸೊರಟೂರ ಲಕ್ಷ್ಮೇಶ್ವರ

ಬಡ ಕುಟುಂಬದ ಯುವಕರು ನಟ ಯಶ್‌ ಅಪ್ಪಟ ಅಭಿಮಾನಿಗಳು, ಅವರೇ ಕುಟುಂಬಕ್ಕೆ ಆಸರೆ, ಬೆನ್ನೆಲುಬಾಗಿದ್ದರು, ಕಟೌಟ್‌ ಕಟ್ಟುವಾಗ ನಡೆದ ದುರಂತದಲ್ಲಿ ದುಡಿಯುವ ಮಕ್ಕಳನ್ನು ಕಳೆದುಕೊಂಡು ಒಂದು ವರ್ಷ ಕಳೆದರೂ ಆ ಕುಟುಂಬಗಳು ಇಂದಿಗೂ ಕಣ್ಣೀರನಲ್ಲಿ ಕೈತೊಳೆಯುತ್ತಿದೆ.

ಲಕ್ಷ್ಮೇಶ್ವರ ಸಮೀಪದ ಸೂರಣಗಿ ಗ್ರಾಮದಲ್ಲಿ ಅಂಬೇಡ್ಕರ್ ಓಣಿಯ ಯುವಕರು ಜ. 8,2024 ರಂದು ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಜ. 7 ರಂದು ರಾತ್ರಿ 11 ಗಂಟೆಯ ಸುಮಾರಿಗೆ ಯಶ್ ಅವರ 25 ಅಡಿ ಎತ್ತರದ ಬೃಹತ್ ಗಾತ್ರದ ಕಟೌಟ್ ಕಟ್ಟುತ್ತಿದ್ದ ವೇಳೆ ವಿದ್ಯುತ್ ತಂತಿಗೆ ತಗುಲಿದ್ದರಿಂದ ನವೀನ ಗಾಜಿ (ಹರಿಜನ) ಹನಮಂತ ಪೂಜಾರ (ಹರಿಜನ) ಹಾಗೂ ಮುರಳಿ ನಡುವಿನಮನಿ ಎಂಬ ಮೂವರು ಯುವಕರು ಸ್ಥಳದಲ್ಲಿಯೇ ಮೃತಪಟ್ಟು 4 ಜನ ಯುವಕರು ಗಾಯಗೊಂಡಿದ್ದರು.

ಸಪ್ರೈಜ್ ತಂದಿಟ್ಟ ಅನಾಹುತ: ಜ. 8 ರಂದು ನಟ ಯಶ್ ಜನ್ಮದಿನಕ್ಕೆ ಓಣಿಯಲ್ಲಿನ ಸಾರ್ವಜನಿಕರಿಗೆ ಸಪ್ರೈಜ್ ನೀಡಬೇಕು ಎನ್ನುವ ಉದ್ದೇಶದಿಂದ ಜ. 7 ರಂದು ತಡರಾತ್ರಿ 25 ಅಡಿ ಎತ್ತರದ ಬೃಹತ್ ಗಾತ್ರದ ಕಟೌಟ್ ಕಟ್ಟಿ ಸಂಭ್ರಮಿಸಬೇಕಿದ್ದ ಯುವಕರು ವಿದ್ಯುತ್ ತಂತಿ ಕಟೌಟ್ ಗೆ ತಗುಲಿ ವಿದ್ಯುತ್ ಪ್ರವಹಿಸಿ 3 ಯುವಕರು ಕ್ಷಣ ಮಾತ್ರದಲ್ಲಿ ಮೃತಪಟ್ಟರೆ, 4 ಜನ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ದುರಂತದ ಸುದ್ದಿ ರಾಜ್ಯಾದ್ಯಂತ ಕಾಡ್ಗಿಚ್ಚಿನಂತೆ ಹರಡಿ ರಾಜ್ಯಕ್ಕೆ ರಾಜ್ಯವೇ ಮರುಗಿತ್ತು.

ಜಮೀನು ಸಿಕ್ಕಿಲ್ಲ: ಕುಟುಂಬಕ್ಕೆ ಆಸರೆಯಾಗಿದ್ದ ಯುವಕರು ದುರಂತ ಅಂತ್ಯ ಕಂಡಿದ್ದು ಕುಟುಂಬಸ್ಥರಲ್ಲಿ ಹಾಗೂ ಗ್ರಾಮಸ್ಥರಲ್ಲಿ ಆ ಕಹಿ ಘಟನೆ ಇನ್ನೂ ಮಾಸಿಲ್ಲ. ಅಂದು ಸರ್ಕಾರ, ಮೃತಪಟ್ಟ ಯುವಕರ ಕುಟುಂಬಗಳಿಗೆ ಸರ್ಕಾರ ತಲಾ ₹2 ಲಕ್ಷ ಹಣ ನೀಡಿ ಕೈ ತೊಳೆದುಕೊಂಡಿದೆ. ಮೃತಪಟ್ಟ ಯುವಕರ ಕುಟುಂಬಗಳಿಗೆ ಎರಡು ಎಕರೆ ಜಮೀನು ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಸರ್ಕಾರ ಮಾಡಿದ ಘೋಷಣೆ ಇನ್ನೂ ಈಡೇರದೆ ಆ ಕುಟುಂಬಗಳು ಬಡತನದ ಬೇಗೆಯಲ್ಲಿ ಬೇಯುವಂತಾಗಿದೆ.

ರಾಕಿಂಗ್ ಸ್ಟಾರ್ ನಟ ಯಶ್ ಜನ್ಮ ದಿನದ ಹಿನ್ನೆಲೆಯಲ್ಲಿ ಕಟೌಟ್ ಕಟ್ಟಲು ಹೋಗಿ 3 ಯುವಕರು ಮೃತಪಟ್ಟಿರುವ ಘಟನೆ ಇನ್ನೂ ಮಾಸಿಲ್ಲ. ಆ ಕುಟುಂಬಕ್ಕೆ ಆಧಾರ ಸ್ಥಂಭವಾಗಿದ್ದ ಯುವಕರನ್ನು ಕಳೆದುಕೊಂಡು ನಿತ್ಯವೂ ಕಣ್ಣೀರು ಹಾಕುತ್ತಿವೆ. ಆದರೆ ಆ ಕುಟುಂಬಗಳು ಸ್ಥಿತಿ ಮಾತ್ರ ಚಿಂತಾಜನಕವಾಗಿವೆ. ದುಡಿಯುವ ಮಕ್ಕಳನ್ನು ಕಳೆದುಕೊಂಡ ಕುಟುಂಬಗಳು ಬಡತನದ ಬೇಗೆಯಲ್ಲಿ ಸುಟ್ಟು ಹೋಗುತ್ತಿವೆ. ಸರ್ಕಾರ ಈಗಲಾದರೂ ಆ ಕುಟುಂಬಗಳಿಗೆ 2 ಎಕರೆ ಜಮೀನು ನೀಡಿ, ಕೊಳವೆ ಬಾವಿ ಕೊರೆಯಿಸಿ ಅವರ ಗೋಳು ತಪ್ಪಿಸಬೇಕು ಎಂಬುದು ನಮ್ಮೆಲ್ಲರ ಆಗ್ರಹವಾಗಿದೆ ಎಂದ ಸೂರಣಗಿ ಗ್ರಾಪಂ ಸದಸ್ಯ ಹೆಗ್ಗಪ್ಪ ಪೂಜಾರ ತಿಳಿಸಿದ್ದಾರೆ.

ನಟ ಯಶ್ ಕಟೌಟ್ ದುರಂತದಲ್ಲಿ ಮೃತಪಟ್ಟ ನಮ್ಮ ಗ್ರಾಮದ ಯುವಕರಿಗೆ ಯಶೋಮಾರ್ಗ ಫೌಂಡೇಶನ್ ವತಿಯಿಂದ ತಲಾ ₹ 5 ಲಕ್ಷ, ಗಾಯಗೊಂಡವರಿಗೆ ತಲಾ ₹ 1.5 ಲಕ್ಷ ಪರಿಹಾರ ನೀಡಲಾಗಿದೆ. ಆದರೆ ಸರ್ಕಾರದಿಂದ ಆ ಕುಟುಂಬಗಳ ಶಾಶ್ವತ ಆದಾಯಕ್ಕಾಗಿ 2 ಎಕರೆ ಜಮೀನು ನೀಡಬೇಕು ಎಂದು ಸೂರಣಗಿ ತಾಪಂ ಮಾಜಿ ಸದಸ್ಯ ಕೋಟೆಪ್ಪ ವರ್ದಿ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ