ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನವನಗರದ ಜಿಲ್ಲಾಡಳಿತ ಭವನದ ಎದುರು ಬುಧವಾರ ಪ್ರತಿಭಟನೆ ನಡೆಸಿ, ಔಷಧಿ ವ್ಯಾಪಾರಸ್ಥರ ಸಂಘದಿಂದ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರವೊಂದನ್ನು ಸಲ್ಲಿಸಿದರು.
ತಲೆಮಾರುಗಳಿಂದ ಔಷಧ ಮಾರಾಟವನ್ನೇ ನಂಬಿಕೊಂಡಿರುವ ಕುಟುಂಬಗಳ ಉಳಿವು ಈಗ ಪ್ರಶ್ನಾರ್ಥಕವಾಗಿದೆ. ಕಾರ್ಪೋರೇಟ್ ಕಂಪನಿಗಳು ನೀಡುತ್ತಿರುವ ತಾರತಮ್ಯದ ಡಿಸ್ಕೌಂಟ್ ನೀತಿಯಿಂದಾಗಿ ಸಣ್ಣ ಅಂಗಡಿಗಳು ಮುಚ್ಚುವ ಹಂತ ತಲುಪಿವೆ. ಯಾವುದೇ ಲಗಾಮಿಲ್ಲದೆ ಇ-ಪ್ಲಾಟ್ಫಾರ್ಮಗಳು ನಿಯಮಗಳನ್ನು ಗಾಳಿಗೆ ತೂರಿ ಶೆಡ್ಯೂಲ್ ಎಚ್-1 ರಂತಹ ಅಪಾಯಕಾರಿ ಹಾಗೂ ನಾಲ್ಕನೇ ತಲೆಮಾರಿನ ಆಂಟಿಬೈಯೋಟಿಕ್ಗಳನ್ನು ಮನಬಂದಂತೆ ಸರಬರಾಜು ಮಾಡುತ್ತಿವೆ. ಇದರಿಂದ ಸಾರ್ವಜನಿಕರಲ್ಲಿ ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುವ ಭೀತಿ ಎದುರಾಗಿದೆ. ಜಿ.ಎಸ್.ಆರ್ 220(ಇ) ನಿ0ುಮದ ದುರುಪಯೋಗದಿಂದಾಗಿ ಯಾವುದೇ ಕಟ್ಟುನಿಟ್ಟಿನ ನಿಯಂತ್ರಣವಿಲ್ಲದೆ ಮನೆಮನೆಗೆ ನಕಲಿ ಔಷಧಗಳು ತಲುಪುತ್ತಿದ್ದು, ಇದು ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಆನ್ಲೈನ್ ಮೂಲಕ ನಡೆಯುವ ಔಷಧ ಮಾರಾಟವನ್ನು ತಕ್ಷಣವೇ ನಿಲ್ಲಿಸಬೇಕು. ಕಾರ್ಪೋರೇಟ್ ಕಂಪನಿಗಳು ನೀಡುವ ಅತಿಯಾದ ರಿಯಾಯತಿ (ದೀಪ್ ಡಿಸ್ಕೌಂಟ್) ನೀತಿಗೆ ಬ್ರೇಕ್ ಹಾಕಬೇಕು. ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ನಕಲಿ ಔಷಧಗಳ ಮಾರಾಟವನ್ನು ತಡೆಗಟ್ಟಬೇಕು. ಜಿ.ಎಸ್.ಆರ್ 817 ನಿ0ುಮಾವಳಿ0ುನ್ನು ಸರ್ಕಾರ ತಕ್ಷಣವೇ ಹಿಂಪಡೆಯಬೇಕು ಎಂದು ಮನವಿ ಪತ್ರದ ಮೂಲಕ ಒತ್ತಾಯಿಸಿದರು.ಜಿಲ್ಲೆಯ ಜಮಖಂಡಿ, ಮುಧೋಳ, ಮಹಾಲಿಂಗಪುರ, ಬನಹಟ್ಟಿ, ಬೀಳಗಿ, ಬಾದಾಮಿ, ಗುಳೇದಗುಡ್ಡ, ಕೆರೂರ, ಇಳಕಲ್ ಹಾಗೂ ಹುನಗುಂದ ಸೇರಿದಂತೆ ವಿವಿಧ ಭಾಗಗಳಲ್ಲಿ ಔಷಧಿ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಔಷಧಿ ವ್ಯಾಪಾರಸ್ಥರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಂಘ ಜಿಲ್ಲಾಧ್ಯಕ್ಷ ಅಶೋಕ ಬಿಜ್ಜಳ, ಕಾರ್ಯದರ್ಶಿ ಬಿ.ಆರ್.ಕಟ್ಟಿ ಸೇರಿದಂತೆ ತಾಲೂಕಾಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.