)
ಕನ್ನಡಪ್ರಭ ವಾರ್ತೆ ಬೀದರ್
ಸರ್ಕಾರದ ಅಧಿಕೃತ ಆದೇಶದ ಪ್ರಕಾರ ಬೀದರ್ ಜಿಲ್ಲೆಯ ಬೀದರ್, ಬಸವಕಲ್ಯಾಣ, ಹುಮನಾಬಾದ್ ಮತ್ತು ಚಿಟಗುಪ್ಪ ತಾಲೂಕುಗಳನ್ನು ಮಾತ್ರ ''''''''ತೀವ್ರತರನಾದ ಬರಪೀಡಿತ'''''''' ತಾಲೂಕುಗಳ ಪಟ್ಟಿಗೆ ಸೇರಿಸಲಾಗಿದೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಸ್ವಕ್ಷೇತ್ರವಾಗಿರುವ ಭಾಲ್ಕಿ ತಾಲೂಕು ಸೇರಿದಂತೆ, ಮಳೆ ಅಭಾವದಿಂದ ತೀವ್ರ ಬರ ಎದುರಿಸುತ್ತಿರುವ ಔರಾದ್, ಕಮಲನಗರ ಮತ್ತು ಹುಲಸೂರು ತಾಲೂಕುಗಳನ್ನು ಸರ್ಕಾರದ ಬರ ಪಟ್ಟಿಯಿಂದ ಸಂಪೂರ್ಣವಾಗಿ ಕೈಬಿಡಲಾಗಿದೆ.
ಈಗಾಗಲೇ ಜಿಲ್ಲೆಯಲ್ಲಿ ಶೇ. 93ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಆದರೂ ಮುಂಗಾರು ಮಳೆಯ ತೀವ್ರ ಅಭಾವದಿಂದಾಗಿ ಶೇಕಡಾ 31ರಷ್ಟು ಮಳೆ ಕೊರತೆ ದಾಖಲಾಗಿದ್ದು, ಜೂನ್ ತಿಂಗಳಿನಲ್ಲಿ ಶೇ. 42ರಷ್ಟು ಮಳೆ ಕಡಿಮೆಯಾಗಿ ಕಳೆದ 50 ವರ್ಷಗಳಲ್ಲೇ 4ನೇ ಅತ್ಯಂತ ಕಡಿಮೆ ಮಳೆ ಕಂಡ ಜೂನ್ ಎಂಬಂತಾಗಿದೆ. ಇದರಿಂದಾಗಿ ಹೊಲಗದ್ದೆಗಳಲ್ಲಿ ನಿಂತಿರುವ ಬೆಳೆಗಳು ನೀರಿನ ಅಭಾವದಿಂದ ಒಣಗುವುದು, ಹಳದಿ ಬಣ್ಣಕ್ಕೆ ತಿರುಗುವುದು ಹಾಗೂ ಬೆಳವಣಿಗೆ ಕುಂಠಿತಗೊಳ್ಳುವಂತಹ ತೀವ್ರ ಹಾನಿಯನ್ನು ಅನುಭವಿಸುತ್ತಿವೆ.ಬೆಳೆ ಕಣ್ಣೆದುರೇ ಕಾಸಿಗೆ ಗತಿಯಿಲ್ಲದೇ ಕಮರಿ ಹೋಗುತ್ತಿರುವ ಈ ಸಮಯದಲ್ಲಿ ಸರ್ಕಾರ ಈ ತಾಲೂಕುಗಳನ್ನು ಕೈಬಿಟ್ಟಿರುವುದರಿಂದ ರೈತರು ಸರ್ಕಾರದ ಬರ ಪರಿಹಾರದಿಂದ ವಂಚಿತವಾಗುವ ಭೀತಿಗೆ ಸಿಲುಕಿದ್ದಾರೆ. ಶೀಘ್ರದಲ್ಲಿಯೇ ಕಂದಾಯ ಹಾಗೂ ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳು ಜಂಟಿಯಾಗಿ ಬರಪೀಡಿತ ಪ್ರದೇಶಗಳ ಸರ್ವೆ ನಡೆಸಲಿವೆ.
ಹೀಗಾಗಿ, ಪಟ್ಟಿಯಲ್ಲಿ ಬಿಟ್ಟುಹೋಗಿರುವ ಭಾಲ್ಕಿ, ಔರಾದ್, ಕಮಲನಗರ ಮತ್ತು ಹುಲಸೂರು ತಾಲೂಕುಗಳನ್ನು ತಕ್ಷಣವೇ ಜಂಟಿ ಸಮೀಕ್ಷೆಗೆ ಒಳಪಡಿಸಿ ಬರಪೀಡಿತ ಎಂದು ಘೋಷಿಸಬೇಕೆಂದು ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಶೇ. 93ರಷ್ಟು ಬಿತ್ತನೆ ಪ್ರಕ್ರಿಯೆ ಮುಗಿದಿದ್ದು, ಕರ್ನಾಟಕ ರಾಜ್ಯ ಬರ ನಿರ್ವಹಣಾ ಕೋಶದ ಮಾಹಿತಿಯಾಧರಿಸಿ ಸರ್ಕಾರ ಈಗಾಗಲೇ ಬರಪೀಡಿತ ತಾಲೂಕುಗಳನ್ನು ಘೋಷಿಸಿದೆ. ಜಿಲ್ಲೆಯಿಂದ ಬರ ಘೋಷಣೆ ಕುರಿತು ಯಾವುದೇ ವರದಿ ಸಲ್ಲಿಕೆಗೆ ಅವಕಾಶ ಇರೋಲ್ಲ. ಇದೀಗ ಬರ ಘೋಷಿತ ಆಯಾ ಪ್ರದೇಶಗಳಲ್ಲಿ ಜಂಟಿ ಸಮೀಕ್ಷೆ ನಡೆಸಲಾಗುತ್ತದೆ. ಅಲ್ಲದೆ ಆಗಸ್ಟ್ ಮಾಸಾಂತ್ಯ ಹಾಗೂ ಸೆಪ್ಟೆಂಬರ್ ವರಗಿನ ಮುಂಗಾರು ಮಳೆಯನ್ನಾಧರಿಸಿ ಸರ್ಕಾರ ಮತ್ತಷ್ಟು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಸಾಧ್ಯತೆಯಿದೆ.