ಹೊಸಕೋಟೆ: ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶವಾಗಿದ್ದರೂ ದೇಶದಲ್ಲಿ ನಾಡು-ನುಡಿಯ ಹಬ್ಬ ಆಚರಣೆ ಮಾಡುವ ಏಕೈಕ ರಾಜ್ಯ ಕರ್ನಾಟಕ ಎಂದು ತಾಲೂಕು ಕಸಾಪ ಅಧ್ಯಕ್ಷ ರಾಜ ಆರ್ಟ್ಸ್ ಮುನಿರಾಜು ತಿಳಿಸಿದರು.
ನಗರದ ದೊಡ್ಡಘಟ್ಟಿಗನಬ್ಬೆ ಮುಖ್ಯರಸ್ತೆಯ ಶೋಭಾ ಮಿಡೋಸ್ ಅಪಾರ್ಟ್ಮೆಂಟ್ ಆವರಣದಲ್ಲಿ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನ್ಯ ರಾಜ್ಯಗಳಿಂದ ಉದ್ಯೋಗ ಹಾಗೂ ಉನ್ನತ ಶಿಕ್ಷಣಕ್ಕಾಗಿ ನಗರಕ್ಕೆ ಬಂದು ನೆಲೆಸಿರುವ ಪ್ರತಿಯೊಬ್ಬರೂ ಕನ್ನಡ ಭಾಷೆ ಕಲಿತು ಕನ್ನಡ ನಾಡಿನ ಪರಂಪರೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು. ಬೆಂಗಳೂರು ನಗರ ಹಲವು ಭಾಷಿಕರು ಒಳಗೊಂಡ ನಗರವಾಗಿದ್ದರೂ ಇಲ್ಲಿನ ಸಾಂಸ್ಕೃತಿಕ ಹಿನ್ನೆಲೆ ಕನ್ನಡವಾಗಿದೆ. ಕನ್ನಡ ಪ್ರತಿಯೊಬ್ಬರೂ ಕಲಿಯಬಹುದಾದ ಭಾಷೆಯಾಗಿದೆ.ಎಂದರು.ಶೋಭಾ ಮಿಡೋಸ್ ಅಪಾರ್ಟ್ಮೆಂಟ್ ನಿವಾಸಿಗಳ ಸಂಘದ ಅಧ್ಯಕ್ಷ ಡಾ.ಸೋಮನ್ ಗೌಡ ಮಾತನಾಡಿ, ನಮ್ಮ ಬಡಾವಣೆಯಲ್ಲಿ ವಿವಿಧ ರಾಜ್ಯಗಳ ನಾಗರಿಕರು ವಾಸ ಮಾಡುತ್ತಿದ್ದರೂ ಕನ್ನಡ ರಾಜ್ಯೋತ್ಸವವನ್ನು ಸಾಮರಸ್ಯದಿಂದ ಆಚರಣೆ ಮಾಡುತ್ತಿದ್ದೇವೆ. ಕನ್ನಡಿಗರೂ ಸಾಕಷ್ಟು ಹೃದಯ ವೈಶಾಲ್ಯತೆ ಹೊಂದಿದ್ದು ಅನ್ಯ ಭಾಷಿಕರ ಜೊತೆ ಅನ್ಯ ಭಾಷೆಯಲ್ಲಿಯೇ ವ್ಯವಹರಿಸುತ್ತೇವಯೇ ವಿನಃ ಅವರಿಗೆ ಕನ್ನಡ ಕಲಿಸುವ ಕಾಯಕಕ್ಕೆ ಮುಂದಾಗಿಲ್ಲ. ಆದ್ದರಿಂದ ಕನ್ನಡ ಭಾಷೆ ನಿತ್ಯ ಜೀವನದಲ್ಲಿ ಬಳಕೆ ಮಾಡಿದರೆ ಅನ್ಯ ಭಾಷಿಕರಿಗೂ ಕನ್ನಡ ಕಲಿಸಿದಂತಾಗುತ್ತದೆ ಎಂದರು.
ಕನ್ನಡ ರಾಜ್ಯೋತ್ಸವ ಪ್ರಯುಕ್ತ ವೀರಗಾಸೆ, ಶಿವ ತಾಂಡವ ನೃತ್ಯ ಎಲ್ಲರ ಗಮನ ಸೆಳೆಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಯುವಕವಿ ರವಿಸಿರಿ, ಶೋಭಾ ಮಿಡೋಸ್ ಅಪಾರ್ಟ್ಮೆಂಟ್ ನಿವಾಸಿಗಳ ಸಂಘದ ಉಪಾಧ್ಯಕ್ಷ ರಮೇಶ್ ಬಾಬು, ಖಜಾಂಚಿ ದಿನೇಶ್ ಶೆಟ್ಟಿ, ಜಂಟಿ ಖಜಾಂಚಿ ಮಧು ಕೇಶವ್, ಕಾರ್ಯದರ್ಶಿ ಚೈತನ್ಯ, ಜಂಟಿ ಕಾರ್ಯದರ್ಶಿ ಡಾ. ಚಂದನ್ ಹಾಜರಿದ್ದರು.ಫೋಟೋ : 17 ಹೆಚ್ಎಸ್ಕೆ 1
ಹೊಸಕೋಟೆ ಶೋಭಾ ಮಿಡೋಸ್ ಅಪಾರ್ಟ್ಮೆಂಟ್ ನಿವಾಸಿಗಳ ಸಂಘದಲ್ಲಿ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕಸಾಪ ತಾಲೂಕು ಅಧ್ಯಕ್ಷ ರಾಜ ಆರ್ಟ್ಸ್ ಮುನಿರಾಜು ಉದ್ಘಾಟಿಸಿದರು.