ಕೊಪ್ಪಳದಲ್ಲಿ ಅಂಚೆ ವಿಭಾಗೀಯ ಕಚೇರಿ ಆರಂಭಿಸಿದ್ದು ಸಾರ್ಥಕತೆ ತಂದಿದೆ: ಕೊಪ್ಪಳ ಸಂಸದ ಸಂಗಣ್ಣ ಕರಡಿ

KannadaprabhaNewsNetwork |  
Published : Jan 20, 2024, 02:03 AM IST
19ಕೆಪಿಎಲ್26 ಕೊಪ್ಪಳಕ್ಕೆ ವಿಭಾಗೀಯ ಅಂಚೆ ಕಚೇರಿ ಮಂಜೂರಿಯಾದ ಹಿನ್ನೆಲೆಯಲ್ಲಿ ಕೊಪ್ಪಳ ಪ್ರಧಾನ ಅಂಚೆ ಕಚೇರಿಯಲ್ಲಿ ಸಂಭ್ರಮಾಚರಣೆ ಮಾಡಲಾಯಿತು. | Kannada Prabha

ಸಾರಾಂಶ

ಸಚಿವ ತಂಗಡಗಿ ಕನಕಗಿರಿ ಸೀಮಿತವಾಗಿದ್ದಾರೆ. ನಮ್ಮ ದುರ್ದೈವ ಎಂದರೆ ಯಾವುದೇ ಸರ್ಕಾರ ಬರಲಿ ಕೊಪ್ಪಳ ಕ್ಷೇತ್ರದವರಿಗೆ ಸಚಿವ ಸ್ಥಾನ ಸಿಗುತ್ತಿಲ್ಲ. ಇದರಿಂದ ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ಪೆಟ್ಟು ಬೀಳುತ್ತಿದೆ.

ಕೊಪ್ಪಳ: ಎಂದೋ ಆಗಬೇಕಾಗಿದ್ದ ಕಾರ್ಯ ಈಗ ಆಗಿದೆ. ನಾನು ಬಂದ 10 ವರ್ಷಗಳಲ್ಲಿ ನಿರಂತರ ಪ್ರಯತ್ನದ ಫಲವಾಗಿ ಈಗ ಕೊಪ್ಪಳ ವಿಭಾಗೀಯ ಅಂಚೆ ಕಚೇರಿ ಆರಂಭವಾಗಿರುವುದು ಪ್ರಯತ್ನಕ್ಕೆ ದೊರೆತ ಸಾರ್ಥಕತೆ ಎಂದು ಸಂಸದ ಸಂಗಣ್ಣ ಕರಡಿ ಅಭಿಪ್ರಾಯಟ್ಟರು.ಕೊಪ್ಪಳಕ್ಕೆ ವಿಭಾಗೀಯ ಕಚೇರಿಯನ್ನು ಮಂಜೂರಿ ಮಾಡಿ ಕೇಂದ್ರ ಸರ್ಕಾರ ಆದೇಶ ನೀಡಿದ ಹಿನ್ನೆಲೆಯಲ್ಲಿ ನಗರದ ಅಂಚೆ ಕಚೇರಿಯಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಸಂಭ್ರಮ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಅವರು ಮಾತನಾಡಿದರು.ಸಾಹಿತಿಗಳ, ಜನರ ಒತ್ತಾಸೆಯಂತೆ ಅಂಚೆ ಇಲಾಖೆ ಅಧಿಕಾರಿಗಳು ಪೂರಕ ಮಾಹಿತಿ ಒದಗಿಸಿದ ಪರಿಣಾಮ ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ, ವಿಭಾಗೀಯ ಅಂಚೆ ಕಚೇರಿ ಮಂಜೂರು ಮಾಡಿಸಿಕೊಂಡು ಬಂದೆ‌. ಈ ಹಿಂದಿನ ಅವಧಿಯಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಆರಂಭಿಸಿದ್ದರಿಂದ ವಿಭಾಗೀಯ ಕಚೇರಿ ತರಲು ಮತ್ತಷ್ಟು ಅನುಕೂಲವಾಯಿತು ಎಂದರು.ಹೋರಾಟಗಾರರು, ಪತ್ರಕರ್ತರು ನಮ್ಮಂತ ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಹೋರಾಟ ಮನೋಭಾವದಿಂದ ನಮಗೆ ಜ್ಞಾನೋದಯವಾಗುತ್ತದೆ. ಮತ್ತಷ್ಟು ಸಾಮಾಜಿಕ‌ ಕೆಲಸ ಮಾಡಲು ಪ್ರೇರಣೆ ಸಿಗುತ್ತದೆ ಎಂದರು.ಜೆ.ಎನ್. ಹಳ್ಳಿ ಮಾತನಾಡಿ, ಕೊಪ್ಪಳಕ್ಕೆ ವಿಭಾಗ ತರಲು ಇಲಾಖೆಗಿಂತ ಹೊರಗಿನವರು ನಮಗೆ ಹೆಚ್ಚಿನ ಸಹಕಾರ ನೀಡಿದರು ಎಂದರು.ಅಂಚೆ ನಿರೀಕ್ಷಕ ಮಹಾಂತೇಶ ತೊಗರಿ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಶರಣಪ್ಪ ಎಳಿಗಾರ, ಎಂ.ಬಿ. ಅಳವಂಡಿ, ನಿವೃತ್ತ ಪೋಸ್ಟ್ ಮಾಸ್ಟರ್ ಪಾರ್ಥರಾವ್ ಇದ್ದರು‌‌.ಶಾಸಕ ರಾಘವೇಂದ್ರ ಯೋಜನೆ ಪೂರ್ಣಗೊಳಿಸುತ್ತಿಲ್ಲ: ಈಚೆಗಿನ ರಾಜಕಾರಣದ ವ್ಯವಸ್ಥೆಯಲ್ಲಿ ಅಭಿವೃದ್ಧಿ ವಿಚಾರದಲ್ಲಿ ಸಹಕಾರ ಸಿಗುತ್ತಿಲ್ಲ. ನಾನು ಶಾಸಕನಿದ್ದ ಸಮಯದಲ್ಲಿ ಜಾರಿಗೊಳಿಸಿದ ಯೋಜನೆಗಳನ್ನು ಶಾಸಕ ರಾಘವೇಂದ್ರ ಬೇಕಂತ ಪೂರ್ಣಗೊಳಿಸುತ್ತಿಲ್ಲ ಎಂದು ಸಂಸದ ಸಂಗಣ್ಣ ಕರಡಿ ದೂರಿದರು.

18 ಸಮುದಾಯ ಭವನಗಳು ಇಂದಿಗೂ ಪೂರ್ಣಗೊಂಡಿಲ್ಲ. ನೀರಾವರಿ ಯೋಜನೆ ಕಮರಿದೆ. ರಸ್ತೆಗಳು ಹದಗೆಟ್ಟಿವೆ. ಇವುಗಳ ಕುರಿತು ಹ್ಯಾಟ್ರಿಕ್ ಹೀರೋ ರಾಘವೇಂದ್ರ ಹಿಟ್ನಾಳ್ ಮಾತನಾಡುವುದಿಲ್ಲ. ಸಚಿವ ತಂಗಡಗಿ ಕನಕಗಿರಿ ಸೀಮಿತವಾಗಿದ್ದಾರೆ. ನಮ್ಮ ದುರ್ದೈವ ಎಂದರೆ ಯಾವುದೇ ಸರ್ಕಾರ ಬರಲಿ ಕೊಪ್ಪಳ ಕ್ಷೇತ್ರದವರಿಗೆ ಸಚಿವ ಸ್ಥಾನ ಸಿಗುತ್ತಿಲ್ಲ. ಇದರಿಂದ ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ಪೆಟ್ಟು ಬೀಳುತ್ತಿದೆ. ಹಿಂದೆ ನಮ್ಮ ಸರ್ಕಾರದಲ್ಲಿಯೂ ಹೀಗೆ ಮಾಡಿದರು‌ ಎಂದು ಬೇಸರ ವ್ಯಕ್ತಪಡಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ