ಕೊಡವ ಲ್ಯಾಂಡ್‌ಗೆ ಗೌಡ ಸಮಾಜ, ಒಕ್ಕಲಿಗರ ವಿರೋಧ

KannadaprabhaNewsNetwork | Published : Jan 16, 2024 1:46 AM

ಸಾರಾಂಶ

ಕೊಡಗಿನಲ್ಲಿ ಶೇ.80 ರಿಂದ 90ರಷ್ಟು ಮಂದಿ ಗೌಡರು, ಒಕ್ಕಲಿಗರು, ಹಿಂದುಳಿದ ವರ್ಗದವರು ಹಾಗೂ ಇತರೆ ಜನಾಂಗದವರು ವಾಸಿಸುತ್ತಿದ್ದಾರೆ. ಕೇವಲ ಅಲ್ಪಸಂಖ್ಯಾತ ವರ್ಗಕ್ಕೆ ಪ್ರತ್ಯೇಕ ರಾಜ್ಯ ಅಥವಾ ಸ್ವಾಯತ್ತತೆ ನೀಡುವುದು ಎಷ್ಟು ಸಮಂಜಸ ಎಂದು ಬೆಂಗಳೂರಿನ ಕೊಡಗು ಗೌಡ ಸಮಾಜದಲ್ಲಿ ಭಾನುವಾರ ನಡೆದ ಬೆಂಗಳೂರಿನ ಎಲ್ಲ ಗೌಡ ಸಮಾಜ ಮತ್ತು ಒಕ್ಕಲಿಗ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಸಮಾಲೋಚಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿಬೆಂಗಳೂರಿನ ಕೊಡಗು ಗೌಡ ಸಮಾಜದಲ್ಲಿ ಬೆಂಗಳೂರಿನ ಎಲ್ಲ ಗೌಡ ಸಮಾಜ ಮತ್ತು ಒಕ್ಕಲಿಗ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆ ಭಾನುವಾರ ನಡೆಯಿತು.

ಕೊಡಗಿನಲ್ಲಿ ನಡೆಯುತ್ತಿರುವ ಕೊಡವ ಲ್ಯಾಂಡ್ ಬೇಡಿಕೆ ಹಾಗೂ ಡಾ.ಸುಬ್ರಮಣ್ಯಂ ಸ್ವಾಮಿ ಅವರು ಕೊಡವರ ಪರವಾಗಿ ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಹೂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮತ್ತು ಕೊಡವರನ್ನು ಪರಿಶಿಷ್ಟ ಜಾತಿ ಎಂದು ಪರಿಗಣಿಸಬೇಕೆನ್ನುವ ಒತ್ತಾಯವಿರುವ ಬಗ್ಗೆ ಸಮಗ್ರ ಚರ್ಚೆ ನಡೆಯಿತು.

ಕೊಡಗಿನಲ್ಲಿ ಶೇ.80 ರಿಂದ 90ರಷ್ಟು ಮಂದಿ ಗೌಡರು, ಒಕ್ಕಲಿಗರು, ಹಿಂದುಳಿದ ವರ್ಗದವರು ಹಾಗೂ ಇತರೆ ಜನಾಂಗದವರು ವಾಸಿಸುತ್ತಿದ್ದಾರೆ. ಕೇವಲ ಅಲ್ಪಸಂಖ್ಯಾತ ವರ್ಗಕ್ಕೆ ಪ್ರತ್ಯೇಕ ರಾಜ್ಯ ಅಥವಾ ಸ್ವಾಯತ್ತತೆ ನೀಡುವುದು ಎಷ್ಟು ಸಮಂಜಸ ಎಂದು ಸಮಾಲೋಚಿಸಲಾಯಿತು.

ಸರ್ಕಾರ ಇಂತಹ ಬೇಡಿಕೆಗಳಿಗೆ ಮಣಿದರೆ, ಮಣಿಪುರದಂತಹ ಜನಾಂಗೀಯ ಸಂಘರ್ಷಕ್ಕೆ ಒಳಗಾಗುವ ಪರಿಸ್ಥಿತಿ ಉದ್ಭವವಾಗಬಹುದು ಎಂದು ಸಭೆ ಆತಂಕ ವ್ಯಕ್ತಪಡಿಸಿತು. ಹಾಗಾಗಿ ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ನಾವೆಲ್ಲರೂ ರಾಷ್ಟ್ರದ ಐಕ್ಯತೆಗಾಗಿ, ಸಂವಿಧಾನದ ಮೂಲಭೂತ ತತ್ವಗಳಿಗೆ ಧಕ್ಕೆಯಾಗದ ರೀತಿಯಲ್ಲಿ ನಮ್ಮೆಲ್ಲರ ಅಸ್ತಿತ್ವದ ಉಳಿವಿಗಾಗಿ ರಾಜಕೀಯ, ಸಾಮಾಜಿಕ ಮತ್ತು ಕಾನೂನಾತ್ಮಕವಾಗಿ ಹೋರಾಡಬೇಕಾಗಿದೆ ಎಂದು ಸಭೆ ನಿರ್ಧರಿಸಿತು.

ಕರ್ನಾಟಕ ರಾಜ್ಯ ಒಕ್ಕಲಿಗರ ಜನಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎನ್.ಲಿಂಗೇಗೌಡ, ಒಕ್ಕಲಿಗರ ಸಂಘ ಹಾಗೂ ಕಾರ್ಮಿಕ ಹೋರಾಟ ಸಮಿತಿಯ ಅಧ್ಯಕ್ಷ ಗೋವಿಂದೇಗೌಡ, ಒಕ್ಕಲಿಗರ ಕ್ರಿಯಾ ಸಮಿತಿಯ ಅಧ್ಯಕ್ಷ ಕುಮಾರ್, ರಾಜ್ಯ ಒಕ್ಕಲಿಗರ ಮಹಾಸಭಾದ ಅಧ್ಯಕ್ಷ ದೇವರಾಜ್, ಒಕ್ಕಲಿಗರ ಸಂಘ ಉಳ್ಳಾಲದ ಅಧ್ಯಕ್ಷ ಬೆಟ್ಟಸ್ವಾಮಿ, ಒಕ್ಕಲಿಗರ ಡೈರೆಕ್ಟ್ ಸಂಸ್ಥೆಯ ಅಧ್ಯಕ್ಷ ಟಿ.ಚಂದ್ರು, ಆದಿವಾಸಿ ಜನಾಂಗ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಗುರುಶಾಂತ್, ಬೆಂಗಳೂರಿನ ಕೊಡಗು ಗೌಡ ಸಮಾಜ ಅಧ್ಯಕ್ಷ ಕೇಕಡ ನಾಣಯ್ಯ, ಬೆಂಗಳೂರಿನ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಅಧ್ಯಕ್ಷ ಪಾಣತ್ತಲೆ ಪಳಂಗಪ್ಪ, ದಾಸರಹಳ್ಳಿ ಕೊಡಗು ಗೌಡ ಸಮಾಜದ ಅಧ್ಯಕ್ಷ ಕತ್ರಿಕೊಲ್ಲಿ ದೇವಯ್ಯ, ಯಲಹಂಕದ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಅಧ್ಯಕ್ಷ ಅಜಿತ್ ಕುಮಾರ್ ಕುನ್ಯಾಳಿ, ಕೊಡಗು ಗೌಡ ಸಮಾಜಗಳ ಒಕ್ಕೂಟದ ನಿರ್ದೇಶಕರಾದ ತೇನನ ರಾಜೇಶ್, ಕುದುಪಜೆ ಮೋಹನ್, ಬೆಂಗಳೂರಿನ ಕೊಡಗು ಗೌಡ ಸಮಾಜ ಯುವ ವೇದಿಕೆಯ ಅಧ್ಯಕ್ಷ ತಳೂರು ಮಮತಾ, ಬೆಂಗಳೂರಿನ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಯುವ ವೇದಿಕೆಯ ಅಧ್ಯಕ್ಷ ದಯಾನಂದ ಕುಂಬ್ಲಾಡಿ, ಹಿರಿಯ ವಕೀಲರಾದ ನಿಡ್ಯಮಲೆ ಪ್ರಕಾಶ್ ಹಾಗೂ ಎಲ್ಲಾ ಗೌಡ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Share this article