ಲಕ್ಷ್ಮೇಶ್ವರ: ಕ್ರೀಡಾಂಗಣದ ಜಾಗದಲ್ಲಿ ಪ್ರಜಾಸೌಧ ನಿರ್ಮಿಸಲು ವಿರೋಧ ವ್ಯಕ್ತಪಡಿಸಿದ ಘಟನೆ ಮಂಗಳವಾರ ಪಟ್ಟಣದಲ್ಲಿ ನಡೆದಿದೆ.
ಆಗ ತಹಸೀಲ್ದಾರ್ ಧನಂಜಯ ಎಂ. ಅವರು ಕಂದಾಯ ಇಲಾಖೆಗೆ ಸೇರಿದ 2 ಎಕರೆ 34 ಗುಂಟೆ ನಿವೇಶನದಲ್ಲಿ ಮಾತ್ರ ಪ್ರಜಾಸೌಧ ನಿರ್ಮಿಸುತ್ತೇವೆ. ಕಂದಾಯ ಇಲಾಖೆಗೆ ಸೇರಿದ ನಿವೇಶನದಲ್ಲಿ ಪ್ರಜಾಸೌಧ ನಿರ್ಮಿಸುವುದು ಉದ್ದೇಶವಾಗಿದೆ. ಮೂಲತಃ ಈ ನಿವೇಶನ ಕಂದಾಯ ಇಲಾಖೆಗೆ ಸೇರಿದ್ದು, ಕ್ರೀಡಾ ಹಾಗೂ ಯುವ ಸಬಲೀಕರಣ ಇಲಾಖೆಗೆ ಸೇರಿದ ಉಳಿದ ಜಾಗ ಇದೆ. ಅನ್ಯ ಇಲಾಖೆಯಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದಾಗ, ತಾಲೂಕು ಕ್ರೀಡಾಂಗಣವಾಗುವ ಈ ಮೈದಾನದಲ್ಲಿ ೪೦೦ ಮೀಟರ್ ಸುತ್ತಳತೆ ಜಾಗ ಬೇಕಾಗಿರುವುದರಿಂದ ಪ್ರಜಾಸೌಧ ನಿರ್ಮಾಣವಾದರೆ ಮೈದಾನಕ್ಕೆ ತೊಂದರೆಯಾಗುತ್ತದೆ. ಅದಕ್ಕಾಗಿ ಜಾಗದ ಅಳತೆ ಮಾಡುವುದಕ್ಕೂ ನಮ್ಮ ವಿರೋಧವಿದ್ದು, ಈ ಕುರಿತಂತೆ ಊರಿನ ಹಿರಿಯರ, ಪ್ರಮುಖರ ಸಭೆಯನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕರೆದು ಕ್ರೀಡಾಂಗಣಕ್ಕೆ ಧಕ್ಕೆಯಾಗದಂತೆ ಕಟ್ಟಡ ನಿರ್ಮಿಸಲು ನಿರ್ಧರಿಸಿ ಎಂದು ಸಾರ್ವಜನಿಕರು ಹೇಳಿದರು.
ಭೂಮಾಪನ ಇಲಾಖೆಯವರಿಗೆ ಸ್ಥಳದಲ್ಲಿಯೇ ಅಳತೆಗೆ ತಕರಾರು ಅರ್ಜಿ ಬರೆದು ಆಕ್ಷೇಪ ವ್ಯಕ್ತಪಡಿಸಿದರು. ಈ ಹಿನ್ನೆಲೆ ಭೂಮಾಪನಾ ಅಧಿಕಾರಿಗಳು ಹಾಗೂ ಇತರೆ ಇಲಾಖೆ ಅಧಿಕಾರಿಗಳು ಮರಳಿ ಹೋದರು.ಈ ವೇಳೆ ಕಂದಾಯ ನಿರೀಕ್ಷಕ ಎಂ.ಎ. ನದಾಫ್, ತಾಲೂಕು ಭೂಮಾಪನ ಅಧಿಕಾರಿ ಇಲಿಯಾಸ ಮಕಾಂದಾರ, ಪುರಸಭೆ ಕಂದಾಯ ಅಧಿಕಾರಿ ಸುರೇಶ ಪೂಜಾರ, ಯುವಜನ ಕ್ರೀಡಾ ಇಲಾಖೆಯ ಅಧಿಕಾರಿ ಮಂಜುನಾಥ ಉಳ್ಳಟ್ಟಿ, ಯುವ ಮುಖಂಡರಾದ ಡಿ.ಬಿ. ಫಕ್ಕಿರಪ್ಪ, ಮೋಹನ ನಂದೆಣ್ಣವರ, ಸಂತೋಷ ನಂದೆಣ್ಣವರ, ಮಂಜುನಾಥ ಎಚ್.ಎಸ್., ವಿಶ್ವನಾಥ ಭಜಕ್ಕನವರ, ಅಬ್ದುಲ್ಗನಿ ನವಲಗುಂದ, ಎಸ್.ಎಫ್. ಕೊಡ್ಲಿ, ಮುಖ್ಯೋಪಾಧ್ಯಾಯ ಎಂ.ಬಿ. ಸಂಗನಪೇಟ, ಅಶೋಕ ಲಿಂಗಶೆಟ್ಟಿ ಸೇರಿದಂತೆ ಅನೇಕರಿದ್ದರು.