ಕೊಪ್ಪಳ:
ಯುಕೆಇಎಂ ಕಂಪನಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸಿದ್ಧತೆ ನಡೆಸಿದ್ದು ನಮ್ಮ ಪ್ರಬಲ ವಿರೋಧವಿದೆ. ಈ ಹಿಂದೆ ಕೊಪ್ಪಳ ಪರಿಸರ ಇಲಾಖೆ ನಡೆಸಿದ ಅಹವಾಲು ಸಭೆಯಲ್ಲಿ ಕಾರ್ಖಾನೆ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ ತಕರಾರು ಅರ್ಜಿ ಸಲ್ಲಿಸಿದ್ದೇವೆ. ಈ ಮಧ್ಯೆ ಕಂಪನಿ ಸರ್ಕಾರದ ವಿವಿಧ ಇಲಾಖೆಯಿಂದ ಅನುಮತಿ ಪಡೆದುಕೊಂಡಿದೆ. ಅಂತಿಮವಾಗಿ ಗೊಂಡಬಾಳ ಗ್ರಾಪಂಗೆ ಎನ್ಒಸಿ ಪಡೆಯಲು ಅರ್ಜಿ ಸಲ್ಲಿಸಿದೆ. ಅದಕ್ಕೂ ಸಹಿತ ಮೂರು ಗ್ರಾಮಗಳ ಜನರು ತಕರಾರು ವ್ಯಕ್ತಪಡಿಸಿ ೪೦೦ಕ್ಕೂ ಹೆಚ್ಚು ಆಕ್ಷೇಪಣಾ, ಅರ್ಜಿ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.
ಎನ್ಒಸಿ ಕೊಡುವ ಮೊದಲು ಗ್ರಾಮಸಭೆ ನಡೆಸಿ ಜನರ ಅಭಿಪ್ರಾಯ ಪಡೆಯುವಂತೆ ಪಿಡಿಒಗೆ ಮನವಿ ಮಾಡಿದ್ದೇವೆ. ಆದರೆ, ಕಾರ್ಖಾನೆ ಸಂಬಂಧ ಈ ವರೆಗೂ ಗ್ರಾಪಂನಿಂದ ಸಾರ್ವಜನಿಕ ಗ್ರಾಮಸಭೆ ಕರೆದಿಲ್ಲ. ಏಕಾಏಕಿ ಗ್ರಾಪಂ ಸದಸ್ಯರ ಸಭೆ ನಡೆಸಿದ್ದಾರೆ. ಆ ಸಭೆಯಲ್ಲಿ ಸದಸ್ಯ ಪಂಪಾಪತಿ ಹಳ್ಳಿಗುಡಿ ಕಾರ್ಖಾನೆ ಬೇಡ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ಉಳಿದ ಸದಸ್ಯರು ಎನ್ಒಸಿ ಕೊಡಲು ಪಿಡಿಒಗೆ ಸೂಚಿಸಿದ್ದಾರೆ. ಇಲ್ಲಿ ಸಾರ್ವಜನಿಕರ ಅಹವಾಲು ಹಾಗೂ ಆಕ್ಷೇಪಣೆಗೆ ಮಾನ್ಯತೆ ಇಲ್ಲದಂತಾಗಿದೆ ಎಂದು ತಾಪಂ ಇಒ ಮುಂದೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.ಗ್ರಾಪಂಗೆ ಗ್ರಾಮಸ್ಥರ ಹಿತ ಕಾಪಾಡುವುದು ಮುಖ್ಯವಾಗಿದೆ. ಅವರ ಅಹವಾಲು ಆಲಿಸುವುದು ಬಹುಮುಖ್ಯವಾಗಿದೆ. ಆದರೆ, ಅದ್ಯಾವುದು ಇಲ್ಲಿ ಕಾಣಿಸಿಲ್ಲ. ಯಾವುದೇ ಕಾರಣಕ್ಕೂ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಎನ್ಒಸಿ ಕೊಡಬಾರದು, ಕಾರ್ಖಾನೆ ಸ್ಥಾಪಿಸಬಾರದು. ಪಿಡಿಒ ಗ್ರಾಪಂ ಸಭೆಯಲ್ಲಿ ಆಗಿರುವ ಚರ್ಚೆಗಳನ್ನು ಮೇಲಾಧಿಕಾರಿಗೆ ಪತ್ರ ವ್ಯವಹಾರ ನಡೆಸಿದ್ದಾರೆ. ಈ ಕೂಡಲೇ ಜಿಲ್ಲಾಮಟ್ಟದ ಅಧಿಕಾರಿಗಳು ಜನಪರ ನಿಲುವು ತಾಳಬೇಕು. ಒಂದು ವೇಳೆ ಎನ್ಒಸಿ ಕೊಟ್ಟಿದ್ದೇ ಆದರೆ ಕಾನೂನಾತ್ಮಕ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಗ್ರಾಮಸ್ಥರು ಡಿಸಿ ಕಚೇರಿಯಲ್ಲಿ ಜಿಪಂ ಉಪ ಕಾರ್ಯದರ್ಶಿಗೆ ತಿಳಿಸಿದ್ದಾರೆ.